ಪಾವಗಡ :
ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನು ಮೃತಪಟ್ಟಿರುವ ಘಟನೆ ಪಾವಗಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಹಸೀಲ್ದಾರ್ ನಾಗರಾಜು ಪ್ರತಿದಿನ ತುಮಕೂರಿನಿಂದ ಪಾವಗಡ ತಾಲ್ಲೂಕು ಕಚೇರಿಗೆ ಕಾರಿನಲ್ಲೇ ಓಡಾಡುತ್ತಿದ್ದು, ಶನಿವಾರ ರಾತ್ರಿ ಪಾವಗಡದಿಂದ ತುಮಕೂರು ಕಡೆ ಹೋಗುವ ವೇಳೆ ರಾಜವಂತಿ ಕೆರೆ ಏರಿಯ ಮೇಲೆ ಬೈಕ್ ಸವಾರ ಆಂಧ್ರ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಚೀಪಲೇಟಿ ಗ್ರಾಮದ ಹರೀಶ್ಗೆ (25) ಕಾರು ಡಿಕ್ಕಿಯಾಗಿ, ಕಾಲು ಮುರಿದು, ಹಿಂದುಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುತ್ತಾನೆ.
ರಾಜವಂತಿ ಕೆರೆಯ ಕ್ರಾಸ್ ಬಳಿ ಕಾರು ಅಪಘಾತವಾಗಿರುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೋಡಿದಾಗ ಕಾರು ಚಾಲನೆ ಮಾಡುತ್ತಿದ್ದುದು ಸ್ವತಃ ತಹಸೀಲ್ದಾರ್ ನಾಗರಾಜು ಎಂದು ಗೊತ್ತಾಗಿದೆ. ಆಗ ಗ್ರಾಮಸ್ಥರು ಅತಿಯಾದ ವೇಗ, ಅಜಾಗರೂಕತೆ ಮತ್ತು ಕುಡಿದು ಕಾರು ಚಾಲನೆ ಮಾಡುತ್ತಿದ್ದೀರಿ ಎಂದು ಎಂದು ತಹಸೀಲ್ದಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ತಹಸೀಲ್ದಾರ್’ ರನ್ನು ಸ್ಥಳದಿಂದ ನಾಪತ್ತೆ ಮಾಡಿ, ಕಾರು ಚಾಲಕ ಅಪಘಾತ ಮಾಡಿ ಓಡಿಹೋಗಿದ್ದಾರೆಂದು ಕಥೆ ಕಟ್ಟಿದ್ದಾರೆ ಎಂಬ ಮಾಹಿತಿ ಪಡೆದ ಗ್ರಾಮಸ್ಥರು, ಅಧಿಕಾರಿಗಳು ಸುಳ್ಳು ಹೇಳಿಕೆ ನೀಡಿ ಕೇಸ್ ನಮೂದಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಕಂಡಾಗ ತಹಸೀಲ್ದಾರ್ ನಾಗರಾಜು ಬಿಟ್ಟು ಕಾರಿನಲ್ಲಿ ಬೇರೆ ಯಾರೂ ಇರಲಿಲ್ಲ. ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಕೇಸ್ ಮುಚ್ಚಿ ಹಾಕಲು ತಪ್ಪು ಮಾಹಿತಿ ನೀಡಿ ಪೊಲೀಸ್ ಕೇಸ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವತಃ ದಂಡಾಧಿಕಾರಿಗಳೇ ಅಪಘಾತ ಮಾಡಿ ಘಟನೆಯನ್ನ ಮರೆ ಮಾಚಿದರೆ ಸಾಮಾನ್ಯ ಜನತೆಗೆ ಇಂತಹ ಆಧಿಕಾರಿಗಳಿಂದ ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಗ್ರಾಮಸ್ಥರು ಘಟನೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪಾವಗಡ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
