ಪಾವಗಡ :
ವಿಶ್ವದ ಬೃಹತ್ ಶಕ್ತಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಒಣಹುಲ್ಲಿಗೆ ಬೆಂಕಿ ತಗುಲಿ ಒಂದು ಕಾರು, ಬೈಕ್ ಸೇರಿದಂತೆ ಲಕ್ಷಾಂತರ ಮೌಲ್ಯದ ಸೌರ ಫಲಕಗಳು ಸುಟ್ಟು ಹೋದ ಘಟನೆ ಭಾನುವಾರ ಸಂಜೆ ನಡೆದಿದೆ.
ಪಾವಗಡ ತಾಲ್ಲೂಕಿನ ತಿರುಮಣಿ ಸೋಲಾರ್ ಪಾರ್ಕ್ನ 37ನೆ ಬ್ಲಾಕ್ನಲ್ಲಿ ವಿದ್ಯುತ್ ಪೂರೈಕೆಯಾಗುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಪಾರ್ಕ್ನಲ್ಲಿ ಹುಲ್ಲು ಯಥೇಚ್ಛವಾಗಿ ಬೆಳೆದಿತ್ತು. ಬೇಸಿಗೆ ಕಾಲವಾದ ಹಿನ್ನೆಲೆಯಲ್ಲಿ ಹುಲ್ಲು ಕೂಡ ಒಣಗಿತ್ತು. ವಿದ್ಯುತ್ ಅವಘಡ ಸಂಭವಿಸಿದ ವೇಳೆ ಹುಲ್ಲಿಗೂ ಕೂಡ ಬೆಂಕಿ ತಗುಲಿ ವಿಶಾಲವಾಗಿ ಹರಡಿದೆ. ಇದೇ ವೇಳೆ ಬ್ಲಾಕ್ನಲ್ಲಿದ್ದ ಕಾರು ಹಾಗೂ ದ್ವಿಚಕ್ರವಾಹನ ಕೂಡ ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿ ಕರಕಲಾಗಿವೆ.
ಪಾರ್ಕ್ನಲ್ಲಿ ಬೆಂಕಿ ಅವಘಡದಿಂದ ಲಕ್ಷಾಂತರ ರೂ. ಮೌಲ್ಯದ ಸೌರ ವಿದ್ಯುತ್ ಫಲಕಗಳು ಕೂಡ ಸುಟ್ಟು ಹೋಗಿವೆ. ಎಂದರೆ ಇಲ್ಲಿ ಯಾವುದೇ ಸಂದರ್ಭದಲ್ಲಿ ಕಾರ್ಮಿಕರಿಗಾಗಲಿ ಇಲ್ಲಿನ ಸಿಬ್ಬಂದಿಗಾಗಲಿ ಯಾವುದೇ ಸಮಸ್ಯೆ ಎದುರಾದಾಗ ಸಮರ್ಥವಾಗಿ ನಿಭಾಯಿಸಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಅವಘಡ ನಡೆದಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ, ಸಿಬ್ಬಂದಿಗೆ ಪ್ರಾಣಹಾನಿಯಾದರೆ ಇದರ ಹೊಣೆ ಯಾರು ಎಂದು ಸಾರ್ವಜನಿಕರು ಸೌರ ಪಾರ್ಕ್ನ ಮೇಲಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 13,500 ಎಕರೆ ಪ್ರದೇಶದಲ್ಲಿ ಸೌರ ಪಾರ್ಕ್ನಲ್ಲಿ ಒಂದು ಆ್ಯಂಬ್ಯುಲೆನ್ಸ್ ಮತ್ತು ಬೆಂಕಿ ಅಗ್ನಿಶಾಮಕ ವ್ಯವಸ್ಥೆ ಇಲ್ಲದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
