ಜನಸಾಮಾನ್ಯರ ರಕ್ತ ಹೀರಬೇಡಿ : ಡಿವೈಎಸ್‍ಪಿ ರವೀಶ್

 ಪಾವಗಡ : 

      ಜನಸಾಮಾನ್ಯರಿಂದ ಪಾವತಿಯಾಗುವ ತೆರಿಗೆಯಿಂದ ಸರ್ಕಾರ ನಡೆದರೆ, ಅದನ್ನೆ ಸರ್ಕಾರ ನಮಗೂ ವೇತನ ನೀಡುತ್ತಿದೆ ಎಂದು ತುಮಕೂರು ಲೋಕಯುಕ್ತ ಡಿವೈಎಸ್ಪಿ ರವೀಶ್ ತಿಳಿಸಿದರು.

      ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಕುಂದು ಕೊರತೆ ಸಭೆ ಉದ್ದೇಶಿಸಿ ಮಾತನಾಡಿದರು. ಅಧಿಕಾರಿ ವರ್ಗದಲ್ಲಿ ವ್ಯಾಪಕ ಭ್ರಷ್ಟಾಚಾರ ಹೆಚ್ಚಿದ ಕಾರಣ, ಇಂದು ವಿಜಿಲೆನ್ಸ್, ಎಸಿಬಿ, ಮಾಹಿತಿ ಹಕ್ಕು, ಲೋಕಾಯುಕ್ತ ನಿಮ್ಮ ಮೇಲೆ ನಿಗಾ ಇಟ್ಟು ಕೆಲಸ ಮಾಡಿಸುವ ಪರಿಸ್ಥಿತಿ ಎದುರಾಗಿದೆ. ಜನ ಸಾಮಾನ್ಯರ ರಕ್ತ ಹೀರಬೇಡಿ, ಕೈ ಬಾಯಿ ಶುದ್ದವಾಗಿರಲಿ, ನೋಂದವರ ಧ್ವನಿಯಾಗಿ ನೀವು ಕೆಲಸ ಮಾಡಿದಾಗ ಮಾತ್ರ ಯಾವುದೇ ಸಂಸ್ಥೆಗಳು ನಿಮ್ಮ ಮೇಲೆ ನಿಗಾ ವಹಿಸುವ ಅವಶ್ಯಕತೆ ಇರುವುದಿಲ್ಲ ಎಂದರು.
ತಾಲ್ಲೂಕಿನ ಶೋಷಿತ ಬೇಡ, ಜಂಗಮ, ಹಕ್ಕಬುಕ್ಕ, ಶಿಳ್ಳೆಕ್ಯಾತ, ಜೋಗಿ, ದಾಸರು ಸೇರಿದಂತೆ 13 ವರ್ಗದ ಜನಾಂಗದವರು ಶೋಷಿತರಾಗಿದ್ದು, ಇವರು ಎಲ್ಲೆಲ್ಲಿ ವಾಸ ಮಾಡುತ್ತಿದ್ದಾರೆ? ಇಲಾಖೆಯಿಂದ ಇವರಿಗೆ ಕಲ್ಪಿಸಿದ ಸೌಲಭ್ಯವೇನು ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಜ್‍ಕುಮಾರ್‍ರನ್ನು ಕೇಳಿದಾಗ ಅದರ ಬಗ್ಗೆ ಲವಲೇಶವೂ ಅರಿವಿಲ್ಲದ ಅಧಿಕಾರಿಯನ್ನು ಡಿವೈಎಸ್ಪಿ ರವೀಶ್ ಹಿಗ್ಗಾಮುಗ್ಗಾ ವಿಚಾರಿಸಿಕೊಂಡರು.

      ತುಳಿತಕ್ಕೆ ಒಳಗಾದ ಈ ಸಮಾಜ ಇಂದು ಜೀವನಕ್ಕಾಗಿ, ಹಸಿವಿನಿಂದ ಕೂಡ ಸಣ್ಣಪುಟ್ಟ ಕಳ್ಳತನಗಳನ್ನು ಮಾಡುವಂತಾಗಿದೆ. ಇಂತಹ ಸಮುದಾಯಗಳಿಗೆ ಸರಿಯಾದ ಮಾರ್ಗದರ್ಶನವಿಲ್ಲ. ಇವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿ ವರ್ಗದ ತಾರತಮ್ಯವಿದೆ. ಇವರು ಶಿಕ್ಷಣ ವಂಚಿತರಾಗಿ ಈ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಿಸಿಯೂಟ ಯೋಜನಾಧಿಕಾರಿಗಳು ಈ ಕುಟುಂಬಗಳ ಪೂರ್ಣ ಮಾಹಿತಿ ಪಡೆದು, ಅಕ್ಕಿ ವಿತರಣೆ ಬಗ್ಗೆ, ಶಿಕ್ಷಣ, ಆರೋಗ್ಯ ಸಮಸ್ಯೆಗಳ ಬಗ್ಗೆ ಆ ಕುಟುಂಬಗಳು ಇರುವ ಕಡೆ ತೆರಳಿ ಶನಿವಾರದೊಳಗೆ ಪೂರ್ಣ ಮಾಹಿತಿ ನೀಡುವಂತೆ ತಿಳಿಸಿ, ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಕೂಡ ಈ ಸಮುದಾಯಗಳನ್ನು ಕಡೆಗಣಿಸಿರುವುದನ್ನು ಕಂಡಿರುವೆ ಎಂದರು.

      ತುಮಕೂರು ಲೋಕಾಯುಕ್ತ ವತಿಯಿಂದ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ 8 ದೂರುಗಳು ಸಲ್ಲಿಕೆಯಾದವು. ಈ ಸಂದರ್ಭದಲ್ಲಿ ಸಿಪಿಐಗಳಾದ ವೆಂಕಟೇಶ್, ನಾಗರಾಜು, ಬಿಸಿಯೂಟ ಯೋಜನಾಧಿಕಾರಿ ಹನುಮಂತರಾಯಪ್ಪ, ತೋಟಗಾರಿಕೆ ಇಲಾಖೆ ಶಂಕರಮೂರ್ತಿ, ಕೃಷಿ ಇಲಾಖೆಯ ವಿಜಯಮೂರ್ತಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link