ಪಾವಗಡ :

ಸೂಕ್ತ ಪರಿಹಾರ ನೀಡದೆ ತಾಲ್ಲೂಕಿನ ರೈತರ ಜಮೀನುಗಳಲ್ಲಿ ವಿದ್ಯುತ್ ಲೈನ್ ಹಾಕುತ್ತಿರುವ ಏಟ್ರಿಯಾ ಕಂಪನಿ ವಿರುದ್ದ ಕ್ರಮ ಜರುಗಿಸಬೇಕು ಎಂದು ರೈತ ಮತ್ತು ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಬುಧವಾರ ತಹಸೀಲ್ದಾರ್ ಕೆ. ಆರ್. ನಾಗರಾಜ್ಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪೂಜಾರಪ್ಪ, ರೈತರ ಜಮೀನುಗಳಲ್ಲಿ ಏಟ್ರಿಯಾ ಕಂಪನಿಯಿಂದ ವಿದ್ಯುತ್ ಟವರ್ಗಳನ್ನು ಹಾಕುತ್ತಿದ್ದು, ರೈತರ ಅನುಮತಿ ಪಡೆಯದೆ ರೈತರಿಗೆ ಮೋಸ ಮಾಡುತ್ತಿದೆ. 1 ಟವರ್ಗೆ 8 ರಿಂದ 10 ಲಕ್ಷ ನೀಡಬೇಕು. ಆದರೆ ಕೇವಲ 50 ಸಾವಿರ ನೀಡಿ ರೈತರಿಗೆ ಅನ್ಯಾಯವೆಸಗುತ್ತಿದೆ ಎಂದು ದೂರಿ, ಭದ್ರಾ ಮೇಲ್ದಂಡೆ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ರಸ್ತೆಯಲ್ಲಿ ಅಗೆಯುತ್ತಿದ್ದಾರೆ. ಇದನ್ನು ನಿಲ್ಲಿಸಿ, ರೈತರ ಜಮೀನುಗಳಲ್ಲಿ ಅಗೆದು ರೈತರಿಗೆ ಗುಂಟೆ ಲೆಕ್ಕದಲ್ಲಿ ಪರಿಹಾರ ನೀಡಬೇಕು ಹಾಗೂ ಪಟ್ಟಣದ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣದಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಕೆ. ಆರ್. ನಾಗರಾಜ್ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಮುಖಂಡರಾದ ಜಯರಾಂ, ಈರಣ್ಣ, ವೆಂಕಟಸ್ವಾಮಿ, ಗೌಡರಂಗಪ್ಪ, ದೇವರಾಜ್, ಹನುಮಂತರಾಯ, ಪಾಂಡುರಂಗಪ್ಪ, ವಿಜಯಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








