ಪಾವಗಡ :
ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮಗಿರಿ, ಚನ್ನಮಲ್ಲನಹಳ್ಳಿಯಲ್ಲಿರುವ ಸುರಭಿ ಗೋಶಾಲೆಗೆ ಗುರುವಾರ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ಹಾಗೂ ಸ್ವಾಮಿ ಜಪಾನಂದಜೀ ರವರಿಂದ ಮೂಕ ಪ್ರಾಣಿಗಳ ರಕ್ಷಣೆಗೆ ಪ್ರತಿ ವರುಷದಂತೆ ಈ ಬಾರಿಯೂ ಕಂಕಣಬದ್ಧರಾಗಿ 4 ಲೋಡು ಮೇವನ್ನು ನೀಡಲಾಗಿದೆ.
ಇಡೀ ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ ಪ್ರತಿಯೊಬ್ಬರ ಗಮನ ಮನುಷ್ಯರ ಮೇಲೆ ಕೇಂದ್ರೀಕೃತವಾಗಿದೆ. ಈ ಸಂದರ್ಭದಲ್ಲಿ ಮೂಕ ಪ್ರಾಣಿಗಳ ರೋದನವನ್ನು ಕೇಳುವವರು ಯಾರೂ ಇಲ್ಲ. ಇದರ ಜೊತೆಗೆ ಪಾವಗಡ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಕಳೆದ ಎರಡು ತಿಂಗಳಿನಿಂದ ನೂರಾರು ಗೋವುಗಳಿಗೆ ಸಹಾಯವಾಗುವಂತಹ ಮಹತ್ಕಾರ್ಯ ನಡೆಯುತ್ತಲೆ ಇದೆ. ಅದರ ಮುಂದುವರಿದ ಭಾಗದಂತೆ ಮಧುಗಿರಿ ತಾಲ್ಲೂಕಿನ ಸುರಭಿ ಗೋಶಾಲೆಯ ಸರಿಸುಮಾರು 180ಕ್ಕೂ ಮಿಗಿಲಾದ ಗೋವುಗಳಿದ್ದು, ಕೊರೊನಾ ಎರಡನೇ ಅಲೆಯ ಈ ಭಯಾನಕ ಸ್ಥಿತಿಯಲ್ಲಿ ಸದರಿ ಗೋಶಾಲೆಗೆ ತತ್ಕ್ಷಣದ ಮೇವು ಕೊರತೆಯಿದ್ದು, ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದಿಂದ ಸ್ವಾಮಿ ಜಪಾನಂದಜೀ ಜೂ.3ರಂದು ನಾಲ್ಕು ಲೋಡು ಮೇವು ವಿತರಿಸಿದ್ದಾರೆ. ಈ ಗೋಶಾಲೆಯು ಮಧುಸೂಧನರಾವ್ ರವರ ನೇತೃತ್ವದಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಮಧುಗಿರಿ ತಾಲ್ಲೂಕು ತಹಸೀಲ್ದಾರ್ ವೈ.ರವಿ, ಕೊರೊನಾ ಎರಡನೆ ಅಲೆಯ ಭೀಕರ ಸಂದರ್ಭದಲ್ಲಿ ಮೂಕ ಪ್ರಾಣಿಗಳ ವೇದನೆಯನ್ನು ಗುರುತಿಸಿ ಸೇವೆ ಸಲ್ಲಿಸುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಸ್ವಾಮಿ ಜಪಾನಂದಜೀರವರು ಚಳ್ಳಕೆರೆ ತಾಲ್ಲೂಕಿನ ಕೆಲವು ಗೋಶಾಲೆಗಳಿಗೂ ಮೇವನ್ನು ಒದಗಿಸುವ ಕಾರ್ಯಯೋಜನೆ ಸದ್ಯದಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಗೋವುಗಳಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಮತ್ತು ಗೋವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸ್ವಾಮಿ ಜಪಾನಂದಜೀರವರು ಗಮನ ಸೆಳೆದಾಗ ತತ್ಕ್ಷಣ ಸ್ಪಂದಿಸಿದ ತಹಸೀಲ್ದಾರ್ ಪಶುಸಂಗೋಪನಾ ಇಲಾಖೆಯಿಂದ ಈ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಶಶಿಕುಮಾರ್, ಅಧ್ಯಕ್ಷರು, ರಕ್ತದಾನಿ ಶಿಕ್ಷಕರ ಸ್ನೇಹ ಬಳಗ, ಪ್ರಸನ್ನಕುಮಾರ್, ಅಧ್ಯಕ್ಷರು, ಪತ್ರಕರ್ತರ ಸಂಘ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/3-6-21-Surabhi-Goshala-Madhugiri-1-rotated-e1622793759562.jpg)