ಸಿಎಸ್ಆರ್ ನಿಧಿಯ ಮೂಲಕ ಪೆರೇಸಂದ್ರದ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುವಂತೆ ಮನವಿ

ಬೆಂಗಳೂರು:

    ನಾನು ಪ್ರಾರಂಭ ಮಾಡಿದ ಕೆಲಸವನ್ನ ನಾನೇ ಪೂರ್ಣ ಮಾಡಬೇಕು ಎಂದು ನಿರ್ಧರಿಸಿದ್ದು ಲೋಕಾರ್ಪಣೆ ಮಾಡುವ ಯೋಗ್ಯತೆ ಇಲ್ಲದಿದ್ದರು ಕಾರ್ಯಕ್ರಮಕ್ಕೆ ಬಂದು ಪೋಟೋ ತೆಗೆಸಿಕೊಳ್ಳಿ ಎಂದು ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಿ, ಚಿಕ್ಕಬಳ್ಳಾಪುರದ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕೆಲಸಕ್ಕೆ ಪ್ರಾರಂಭಿಸಿದ್ದೆ.

   ಇದರ ಭಾಗವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪೆರೇಸಂದ್ರದಲ್ಲಿ ಇಡೀ ರಾಜ್ಯಕ್ಕೆ, ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಒಂದು ಸುಸಜ್ಜಿತವಾದ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ, ಒಂದೇ ಸೂರಿನಡಿ ಎಲ್ಲ ರೀತಿಯ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಬಲ್ಲ ಒಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸುವ ಸಂಕಲ್ಪ ಮಾಡಿ ವಿಶ್ವದರ್ಜೆಯ ಗುಣಮಟ್ಟದ ಕಟ್ಟಡ ನಿರ್ಮಾಣವನ್ನೂ ಆರಂಭಿಸಿದ್ದೆ. ಈಗ ಆ ಕಟ್ಟಡ ಉದ್ಘಾಟನೆ ಹಂತಕ್ಕೆ ಬಂದು ತಲುಪಿದೆ.

   ಆದರೆ ಕಾಂಗ್ರೆಸ್ ಸರ್ಕಾರ, ಹೊಸ ಶಾಸಕರು ಬಂದಮೇಲೆ ಇದಕ್ಕೆ ಬೇಕಾದ ಉಪಕರಣಗಳನ್ನು ತರಿಸುವುದಾಗಲಿ ಅಥವಾ ಅಗತ್ಯ ಸಿಬ್ಬಂದಿಗಳನ್ನು ನೇಮಿಸುವ ಕೆಲಸವಾಗಲಿ ಮಾಡಲೇ ಇಲ್ಲ. ಹೊಸ ಯೋಜನೆ, ಹೊಸ ಕಾಮಗಾರಿ, ಹೊಸ ಅನುದಾನ ತರುವುದಿರಲಿ, ಹಾಲಿ ಶಾಸಕರಿಗೆ ಈ ಹಿಂದೆ ನಾನು ಯೋಜನೆ ರೂಪಿಸಿ, ಅನುದಾನ ತಂದು, ಕಾಮಗಾರಿ ಆರಂಭಿಸಿ ಅಂತಿಮ ಹಂತಕ್ಕೆ ತಂದಿರುವ ಯೋಜನೆಯನ್ನು ಪೂರ್ಣಗೊಳಿಸಿ, ಉದ್ಘಾಟನೆ ಮಾಡಿ, ಲೋಕಾರ್ಪಣೆ ಮಾಡುವ ಯೋಗ್ಯತೆಯೂ ಇಲ್ಲ.

  ಆದ್ದರಿಂದ ನಾನು ಪ್ರಾರಂಭ ಮಾಡಿದ ಕೆಲಸವನ್ನ ನಾನೇ ಪೂರ್ಣ ಮಾಡಬೇಕು ಎಂದು ನಿರ್ಧರಿಸಿ, ಕೇಂದ್ರ ಸರ್ಕಾರಿ ಸ್ವಾಮ್ಯದ ಪವರ್ ಫೈನಾನ್ಸ್ ಕಾರ್ಪೋರೇಶನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪರ್ಮಿಂದರ್ ಚೋಪ್ರಾ ಅವರನ್ನು ನವದೆಹಲಿಯಲ್ಲಿ ಭೇಟಿ ಅವರ ಸಂಸ್ಥೆಯ ಸಿಎಸ್ಆರ್ ನಿಧಿಯ ಮೂಲಕ ಪೆರೇಸಂದ್ರದ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುವಂತೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.ಹಾಲಿ ಶಾಸಕರು ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದು ಪೋಟೋ ತೆಗೆಸಿಕೊಳ್ಳಬಹುದು ಎಂದಿದ್ದಾರೆ.

Recent Articles

spot_img

Related Stories

Share via
Copy link