ಹಾವೇರಿ:
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದ 29 ವರ್ಷದ ಯುವಕ ಅವಿನಾಶ ಚಾವಡಿ ಎಂಬಾತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಅವಿನಾಶ್, ಮದುವೆಗೆ ಸೂಕ್ತ ಹುಡುಗಿ ಸಿಗದಿರುವ ಖಿನ್ನತೆಯಿಂದ ಈ ದುರಂತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ತಮ್ಮ ವಯಸ್ಸಿನ ಇತರ ಯುವಕರೆಲ್ಲರೂ ಮದುವೆಯಾಗಿದ್ದು, ತನಗೆ ಮಾತ್ರ ಹುಡುಗಿ ಸಿಗದಿರುವ ಕಾರಣಕ್ಕೆ ಅವಿನಾಶ್ ಮಾನಸಿಕವಾಗಿ ಕುಗ್ಗಿದ್ದರು. ಈ ನೋವಿನಲ್ಲಿ ಆತ ನೇಣಿಗೆ ಶರಣಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಇನ್ನೊಬ್ಬ ಯುವಕ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಪ್ರಕಾಶ ಬಸವರಾಜ ಹೂಗಾರ (35) ಎಂಬವರು ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದು, ಕಳೆದ 12 ವರ್ಷಗಳಿಂದ ಮದುವೆಗಾಗಿ ಕನ್ಯೆ ಹುಡುಕಿದರೂ ಸಿಗದೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.
