ಬೆಂಗಳೂರು:
ನಗರದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳನ್ನು ನಿಯಂತ್ರಿಸಲು ಬಿಬಿಎಂಪಿ ಹೊರಡಿಸಿದ್ದ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಜುಲೈ 23 ರಂದು ಕೋರಮಂಗಲದ ಪಿಜಿ ವಸತಿಗೃಹದಲ್ಲಿ ಮಹಿಳೆಯೊಬ್ಬರ ಹತ್ಯೆ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಪಿಜಿಗಳಿಗೆ ಹೊಸ ಹಾಗೂ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಮಾರ್ಗಸೂಚಿಯಂತೆ ಹೊಸದಾಗಿ ಪಿಜೆ ತೆರೆಯಲು ಅಥವಾ ಪರವಾನಗಿ ಪರಿಷ್ಕರಣೆಗೆ ಈ ನಿಯಮಗಳ ಪಾಲನೆ ಕಡ್ಡಾಯವಾಗಿದೆ.
ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗೆ PG ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ವಿರೋಧ ವ್ಯಕ್ತಪಡಿಸಿದೆ. ಮಾರ್ಗಸೂಚಿಯಲ್ಲಿ ಪ್ರತಿ ವ್ಯಕ್ತಿಗೆ 70 ಚದರ ಅಡಿ ಜಾಗ ನಿಗದಿಪಡಿಸಲಾಗಿದೆ. ಅಲ್ಲದೆ, ಉಳಿದುಕೊಳ್ಳುವ ಜನರ ಸಂಖ್ಯೆಯನ್ನೂ ಮಿತಿಗೊಳಿಸಲಾಗಿದೆ. ಇದರಿಂದ ಬಾಡಿಗೆ ಹೆಚ್ಚಾಗಲಿದ್ದು, ಜನರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಮಾರ್ಗಸೂಚಿ ಮರುಪರಿಶೀಲಿಸುವಂತೆ ಮನವಿ ಮಾಡಿಕೊಂಡಿದೆ.
PG ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಗ್ರಾಹಕರು, ಮುಖ್ಯವಾಗಿ ಗ್ರಾಮೀಣ ಪ್ರದೇಶ ಮತ್ತು ಇತರ ರಾಜ್ಯಗಳ ಬಡ ವಿದ್ಯಾರ್ಥಿಗಳು ಪಿಜಿಗಳಲ್ಲಿ ಹೆಚ್ಚಾಗಿ ಉಳಿದುಕೊಳ್ಳುತ್ತಾರೆ. ಸಣ್ಣ ಕೊಠಡಿಯಲ್ಲಿ ಉಳಿದುಕೊಂಡು ಮೂರು ಹೊತ್ತಿನ ಊಟಕ್ಕೆ ತಿಂಗಳಿಗೆ 5,000 ರೂ. ಪಾವತಿಸುತ್ತಾರೆ. ಆದರೆ, ಪಾಲಿಕೆಯ ಕ್ರಮವು ಪಿಜಿ ಮಾಲೀಕರಿಗೆ ಸ್ಥಳವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಶುಲ್ಕವನ್ನು ವಿಧಿಸಲು ಕಾರಣವಾಗುತ್ತದೆ. ಇದರಿಂದ ಜನರಿಗೂ ಅನಾನುಕೂಲವಾಗಲಿದ್ದು, ನಮಗೂ ಆರ್ಥಿಕ ನಷ್ಟ ಎದುರಾಗಲಿದೆ ಎಂದು ಹೇಳಿದ್ದಾರೆ.
ಹಲವು ಮನೆ ಮಾಲೀಕರು ಜೀವನೋಪಾಯಕ್ಕಾಗಿ ತಮ್ಮ ಮನೆಗಳನ್ನು ಪಿಜಿಗಳಾಗಿ ಪರಿವರ್ತಿಸಿದ್ದಾರೆ. ಇದೀಗ ಗಳಿಕೆ ಕಡಿಮೆಯಾಗಿ ಕಷ್ಟಗಳು ಎದುರಾಗಬಹುದು. 30×40 ಚದರ ಅಡಿ ಅಳತೆಯ ಸೈಟ್ 40 ಜನರಿಗಷ್ಟೇ ಅವಕಾಶ ಕಲ್ಪಿಸುತ್ತದೆ. ಈ ವಸತಿ ಗೃಹದಲ್ಲಿ ಸುಮಾರು 12 ಸ್ನಾನಗೃಹಗಳನ್ನು ಹೊಂದಿರುತ್ತವೆ. ಪಿಜಿ ಮಾಲೀಕರು ಆಹಾರ, ವಿದ್ಯುತ್ ಮತ್ತು ನೀರಿನ ಬಿಲ್ಗಳು ಮತ್ತು ನಿರ್ವಹಣೆಯ ವೆಚ್ಚವನ್ನು ಸಹ ಭರಿಸುತ್ತಾರೆ.
ಪ್ರತಿ ವ್ಯಕ್ತಿಗೆ 70 ಚದರ ಅಡಿ ವಿಸ್ತೀರ್ಣ, 30 ದಿನಗಳ ಬದಲಿಗೆ 90 ದಿನಗಳವರೆಗೆ ಸಿಸಿಟಿವಿ ಫೂಟೇಜ್ನ ಬ್ಯಾಕ್ಅಪ್ ಮತ್ತು 24×7 ಸಿಬ್ಬಂದಿ ಹೊಂದಿರುವಂತಹ ಮಾರ್ಗಸೂಚಿಗಳು ಮಾಲೀಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಪಿಜಿಗಳನ್ನೇ ಬಂದ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿಸಿದ್ದಾರೆ.
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಡಿಎಸ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಪಿಜಿಗಳನ್ನು ಆಯ್ಕೆ ಮಾಡುತ್ತಾರೆ. ಹಾಸ್ಟೆಲ್ ಹಾಗೂ ಸರ್ಕಾರಿ ವಸತಿ ಗೃಹಗಳು ಸಾಕಷ್ಟು ಸ್ಥಳಾವಕಾಶ ಹೊಂದಿಲ್ಲದಿರುವುದರಿಂದ, ಪಿಜಿಗಳಲ್ಲಿ ಉಳಿಯಲು ಬಯಸುತ್ತಾರೆ. ಸರ್ಕಾರಿ ಹಾಸ್ಟೆಲ್ಗಳಲ್ಲಿ ಶುಲ್ಕಗಳು ಮತ್ತು ಭದ್ರತಾ ಠೇವಣಿಗಳನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ, ಆದರೆ, ಪಿಜಿಗಳಲ್ಲಿ ಒಂದು ತಿಂಗಳ ಮುಂಗಡ ಪಾವತಿಸಿದರೆ ಸಾಕಾಗುತ್ತದೆ ಮತ್ತು ಪಿಜಿ ಇಷ್ಟವಾಗದಿದ್ದರೆ ಅವರು ಯಾವಾಗ ಬೇಕಾದರೂ ಬದಲಾಯಿಸುವ ಅವಕಾಶ ಇರುತ್ತದೆ. ಕೈಗೆಟುಕುವಂತೆಯೂ ಇರುತ್ತದೆ. ಆದರೆ, ಇದೀಗ ಪಾಲಿಕೆ ಹೊರಡಿಸಿರುವ ನಿಯಮಗಳು ಬಡ ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ತಂದೊಡ್ಡಲಿದೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ನಗರ ಪೊಲೀಸ್ ಆಯುಕ್ತರನ್ನು ಶೀಘ್ರದಲ್ಲೇ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
