ಬೆಂಗಳೂರು
ಇ-ಖಾತಾ ಅರ್ಜಿಗಳನ್ನು ಸಲ್ಲಿಸಿದ ಕೂಡಲೇ ಸಕಾಲದಲ್ಲಿ ಆ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಕ್ತ ಕಾರ್ಯತಂತ್ರ ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ, ಹೊಸ ವಿಧಾನ ಜಾರಿ ಬಗ್ಗೆ ಏಪ್ರಿಲ್ 6ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯಿತಿ ತಮ್ಮ ಇ-ಖಾತಾ ಅರ್ಜಿಯನ್ನು ಪರಿಗಣಿಸಿಲ್ಲವೆಂದು ರೇಣುಕಾ ಮನ್ಘನಾನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಅರ್ಜಿದಾರರು ಇ-ಖಾತಾ ಕೋರಿ ಸಲ್ಲಿಸಿರುವ ಮನವಿಯನ್ನು ಮೂರು ವಾರಗಳಲ್ಲಿ ಪರಿಗಣಿಸುವಂತೆ ಆದೇಶಿಸಿದೆ.
‘ಅರ್ಜಿದಾರರು 2019ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಇನ್ನೂ ಪರಿಗಣಿಸದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುವಂತಹುದು. ಅದಕ್ಕಾಗಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಬೇಕಾಗಿ ಬಂದಿರುವುದು ಸರಿಯಲ್ಲ’ ಎಂದು ನ್ಯಾಯ ಪೀಠ ಹೇಳಿದೆ.
![](https://prajapragathi.com/wp-content/uploads/2022/05/high-court.gif)