ತೋವಿನಕೆರೆ: ತೋವಿನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಸಂಜೀವೆಗೌಡನ ಪಾಳ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಮಕ್ಕಳಿಗೆ ಆಶ್ರಮ ಶಾಲೆಯನ್ನು ನಿರ್ಮಿಸಲು ಜಮೀನಿಗಾಗಿ ವರದಿ ನೀಡಲಾಗಿದೆ ಎಂದು ಕೊರಟಗೆರೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಅನಂತರಾಜು ತಿಳಿಸಿದರು.
ಹೊಸದಾಗಿ ನಿರ್ಮಾಣವಾಗುವ ಆಶ್ರಮ ಶಾಲೆಯಲ್ಲಿ ಒಂದನೆ ತರಗತಿಯಿಂದ ಪ್ರಾರಂಭವಾಗಿ ಪ್ರತಿ ತರಗತಿಗೆ 25 ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಜಮೀನನ್ನು ಆಯ್ಕೆ ಮಾಡಲಾಗಿದ್ದು, ಮಂಜೂರಾತಿಗೆ ಕಳುಹಿಸಲಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಯಾದವ ಜನಾಂಗದವರು ಮುಂದೆ ಬರುತ್ತಿಲ್ಲ.
ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರಿಗೆ 1034 ಮನೆಗಳು ಮಂಜೂರು ಆಗಿದ್ದವು. ಇದರಲ್ಲಿ ಕೇವಲ 334 ಮಂದಿ ಮಾತ್ರ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. 641 ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ದಾಖಲೆಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ, ಸಂಪನ್ಮೂಲ ವ್ಯಕ್ತಿ ದಾಸಪ್ಪ, ಆನಂದ ಕುಮಾರ್ ಸಭೆಯಲ್ಲಿ ಶುಚಿತ್ವ ಹಾಗೂ ಸಂಪ್ರದಾಯಗಳ ಬಗ್ಗೆ ತಿಳಿವಳಿಕೆ ನೀಡಿದರು. ತೋವಿನಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎಚ್.ಜೆ.ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರುಗಳಾದ ಗಂಗಣ್ಣ, ಪ್ರಸನ್ನಕುಮಾರ್, ಗಿರಿಜಮ್ಮ, ಸುಜಾತ, ಮಾಜಿ ಸದಸ್ಯರಾದ ಸಿದ್ಧಲಿಂಗಪ್ಪ, ಗಂಗಮ್ಮ, ಮುಖ್ಯಶಿಕ್ಷಕ ಎಂ.ವಿ. ನಂಜಪ್ಪಶೆಟ್ಟಿ ಇದ್ದರು. ಶ್ರೀ ಕೃಷ್ಣ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ತುಂಬಾಡಿ ಮಂಜು ಜಾಗೃತಿ ಮತ್ತು ಪರಿಸರ ಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
