ನವದೆಹಲಿ:
ಕೇಂದ್ರ ನಾಗರಿಕ ಸೇವಾ ಪರೀಕ್ಷೆಗೆ ಯುಪಿಎಸ್ ಸಿಗೆ ಸಲ್ಲಿಸಿದ ಅರ್ಜಿಯಲ್ಲಿ ‘ಸುಳ್ಳು ದಾಖಲೆ ನೀಡಿಕೆ ಆರೋಪಿಯಾಗಿರುವ ಮಾಜಿ ಪ್ರೊಬೇಷನರ್ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ದೆಹಲಿ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಮತ್ತಷ್ಟು ಆಳವಾಗಿ ಮತ್ತು ನ್ಯಾಯಯುತವಾಗಿ ತನಿಖೆ ನಡೆಸುವಂತೆ ತನಿಖಾ ಏಜೆನ್ಸಿಗೆ ಪಟಿಯಾಲ ಹೌಸ್ ಕೋರ್ಟ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೆಂದರ್ ಕುಮಾರ್ ಜಂಗಾಲ ನಿರ್ದೇಶನ ನೀಡಿದರು.
ಈ ಹಿಂದೆ ಪರೀಕ್ಷೆ ಬರೆಯಲು ಇರುವ ಅವಕಾಶಗಳನ್ನು ಮೀರಿ ಪ್ರಯೋಜನ ಪಡೆದಿರುವ ಮತ್ತು ಅರ್ಹತೆ ಇಲ್ಲದೆ ಒಬಿಸಿ ವರ್ಗದಡಿ ಲಾಭ ಪಡೆದ ಅಭ್ಯರ್ಥಿಗಳನ್ನು ಪತ್ತೆ ಮಾಡುವಂತೆ ನ್ಯಾಯಾಲಯವು ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿದೆ. ಅಲ್ಲದೇ, ಅರ್ಹತೆ ಇಲ್ಲದಿದ್ದರೂ ವಿಶೇಷಚೇತನ ಕೋಟಾದಡಿ ಪ್ರಯೋಜನ ಪಡೆದಿರುವ ಅಭ್ಯರ್ಥಿಗಳನ್ನು ಗುರುತಿಸುವಂತೆ ನ್ಯಾಯಾಧೀಶರು ತನಿಖಾ ಏಜೆನ್ಸಿಗೆ ನಿರ್ದೇಶನ ನೀಡಿದರು. ಯುಪಿಎಸ್ ಸಿ ಒಳಗೆ ಇರುವವರೇ ಖೇಡ್ಕರ್ ಅವರಿಗೆ ಸಹಾಯ ಮಾಡಿರುವರೇ ಎಂಬುದರ ಬಗ್ಗೆಯೂ ತನಿಖೆ ನಡೆಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ನಿನ್ನೆ ದಿನ ಪೂಜಾ ಖೇಡ್ಕರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿದ್ದ ಯುಪಿಎಸ್ ಸಿ, ಭವಿಷ್ಯದ ಎಲ್ಲಾ ಪರೀಕ್ಷೆಗಳಿಂದ ನಿರ್ಬಂಧಿಸಿತ್ತು. ಖೇಡ್ಕರ್ ಪರ ವಾದ ಮಂಡಿಸಿದ ವಕೀಲ ಮಾಧವನ್, ಬಂಧನಕ್ಕೆ ತಡೆ ನೀಡಬೇಕು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಪೂಜಾ ಖೇಡ್ಕರ್ 5ನೇ ಪ್ರಯತ್ನದಲ್ಲಿಯೇ ಪರೀಕ್ಷೆ ಪೂರ್ಣಗೊಳಿಸಿದ್ದು, ಯಾವುದೇ ಅಕ್ರಮ ನಡೆದಿಲ್ಲ, ಆಕೆ ಶೇ. 47 ರಷ್ಟು ಅಂಗವೈಕಲ್ಯ ಹೊಂದಿರುವ ಬಗ್ಗೆ ಏಮ್ಸ್ ಪ್ರಮಾಣ ಪತ್ರ ನೀಡಿದ್ದು, ತನ್ನ ಕಚೇರಿಗೆ ಕರೆದ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಖೇಡ್ಕರ್ ತನ್ನ ಪ್ರೊಬೇಷನರಿ ತರಬೇತಿಯ ಭಾಗವಾಗಿ ಜೂನ್ನಲ್ಲಿ ಪುಣೆ ಕಲೆಕ್ಟರೇಟ್ಗೆ ಸೇರಿದ್ದರು. ನಾಗರಿಕ ಸೇವಾ ಪರೀಕ್ಷೆ ಪೂರ್ಣಗೊಳಿಸಲು ಇತರ ಹಿಂದುಳಿದ ವರ್ಗಗಳು ಮತ್ತು ವಿಶೇಷ ಚೇತನರ ಮೀಸಲಾತಿಯನ್ನು ಆಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಯುಪಿಎಸ್ಸಿ ಖೇಡ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಆಕೆಯ ಆಯ್ಕೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಆಕೆಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು. ಮುಂದಿನ ಪರೀಕ್ಷೆಗಳಿಂದ ಆಕೆಯನ್ನು ನಿರ್ಬಂಧಿಸಲಾಗಿದೆ.
