ವಿದೇಶಿ ಪ್ರತಿನಿಧಿಗಳ ಆಗಮನ : ರಾತ್ರೋ-ರಾತ್ರಿ ರಸ್ತೆ ಗುಂಡಿ ಮಾಯ

ಪಾವಗಡ :

     ತಾಲ್ಲೂಕಿನ ತಿರುಮಣಿಯಲ್ಲಿರುವ  ಸೋಲಾರ್ ಪಾರ್ಕ್ ವೀಕ್ಷಿಸಲು ಸುಮಾರು 20 ದೇಶಗಳ ಪ್ರತಿನಿಧಿಗಳು ಬೆಂಗಳೂರಿನಿಂದ ರಸ್ತೆ ಮೂಲಕ ಮಂಗಳವಾರ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ  ಕೆ-ಶಿಪ್ ರಸ್ತೆಗೆ  ರಾತ್ರೋರಾತ್ರಿ ಅಲ್ಲಲ್ಲಿ ರಸ್ತೆ ಗುಂಡಿ ಮುಚ್ಚಿ, ಟಾರ್ ಹಾಕಿ, ಸುಣ್ಣ- ಬಣ್ಣ ಬಳಿದಿರುವುದರಿಂದ ತಾಲ್ಲೂಕಿನ ಜನತೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಜಿ 20ಶೃಂಗಸಭೆಯು  ಬೆಂಗಳೂರಿನಲ್ಲಿ  ಹಲವು ದಿನಗಳ ಕಾಲ ನಡೆದು, 20 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸೋಲಾರ್ ವಿದ್ಯುತ್  ಉತ್ಪಾದನೆ  ಕುರಿತು  ಶೃಂಗಸಭೆಯಲ್ಲಿ ಚರ್ಚೆಯಾಗಿತ್ತು  ಎನ್ನಲಾಗಿದೆ.  ಅವರು ತಾಲ್ಲೂಕಿನ ತಿರುಮಣಿ ಬಳಿ 13 ಸಾವಿರ ಎಕರೆಯಲ್ಲಿ ನಿರ್ಮಾಣವಾಗಿರುವ  ಸೋಲಾರ್ ಪಾರ್ಕ್ ವೀಕ್ಷಣೆಗೆ  ಆಗಮಿಸಿದ್ದು, ಆಂಧ್ರದ ಗಡಿಯಿಂದ ತಿರುಮಣಿ ಯವರೆಗೂ    ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿದ್ದು, ಅಲ್ಲಲ್ಲಿ ತೇಪೆಹಾಕಲಾಗಿದೆ.

      ಪಳವಳ್ಳಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಅಂಡರ್ ಪಾಸ್ ರಸ್ತೆಯು ಹಾಳಾಗಿದ್ದು, ಕಳೆದ ಎರಡು ವರ್ಷಗಳಿಂದ  ಸಂಚಾರಕ್ಕೆ ಕಿರಿಕಿರಿಯಾಗುತ್ತಿತ್ತು. ಈ ಸ್ಥಳದಲ್ಲಿ ಅನೇಕ ಅಪಘಾತಗಳು ಸಹ ನಡೆದಿದ್ದು,  ರಸ್ತೆ ಸಾರಿಗೆ ಬಸ್ ಮತ್ತು ಬೈಕ್ ಸವಾರನ ನಡುವೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೆ ಅಸುನೀಗಿದ್ದನು.  ಈ  ರಸ್ತೆಗೆ  ಟಾರ್ ಹಾಕಿದ್ದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ವಿದೇಶಿ ಮಂದಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಆಗಮನದಿಂದ ನಮ್ಮ  ಹಾಳಾದ ರಸ್ತೆಗೆ  ಮುಕ್ತಿ ಸಿಕ್ಕಿದ್ದು, ನೀವು ವರ್ಷಕ್ಕೊಮ್ಮೆ ಬಂದರೆ  ಇಂತಹ   ಹಾಳಾದ ರಸ್ತೆಗಳಿಗೆ ಟಾರ್ ಹಾಕಬಹುದು ಎಂದು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

    ತಿರುಮಣಿಯಲ್ಲಿ 13 ಕೋಟಿ  ರೂ. ವೆಚ್ಚದಲ್ಲಿ ನಿರ್ಮಾಣ ವಾಗಿರುವ  ಕೆ.ಎಸ್.ಪಿ.ಡಿ.ಎಲ್. ಆಡಳಿತ ಕಛೇರಿಗೆ ಆಗಮಿಸಿದಾಗ, ಕರ್ನಾಟಕ ಜಾನಪದ ಶೈಲಿಯ  ವೀರಗಾಸೆ, ಡೊಳ್ಳುಕುಣಿತ ಕಲಾತಂಡಗಳಿAದ ಸ್ವಾಗತಿಸಲಾಯಿತು.  ನಂತರ  ಸೋಲಾರ್ ವಿದ್ಯುತ್ ಉತ್ಪಾದನೆ ಬಗ್ಗೆ  ಸೆಮಿನಾರ್ ನಡೆದಿದ್ದು, ಈ ಸೆಮಿನಾರ್‌ಗೆ ಸೌರಶಕ್ತಿ  ಅಧಿಕಾರಿಗಳು ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾತ್ರ  ಪ್ರವೇಶ ನೀಡಲಾಗಿತ್ತು. ಸಭೆ ಮುಗಿದ ನಂತರ ಕ್ಯಾತಗಾನಚರ್ಲು ಗ್ರಾಮದ ಬಳಿ ಇರುವ 40 ನೆ ಬ್ಲಾಕ್‌ನಲ್ಲಿ  ಸ್ಪಿಂಗ್‌ಎನರ್ಜಿ ಸೋಲಾರ್ ಪಾರ್ಕ್  ವೀಕ್ಷಿಸಿ  ಅಲ್ಲಿಂದ ಪುನಃ ವಿಶ್ರಾಂತಿ ಭವನಕ್ಕೆ ತೆರಳಿ,  ಊಟ ಮುಗಿಸಿದ ನಂತರ, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
     ಜಿ.20 ಸದಸ್ಯತ್ವ ಹೊಂದಿರುವ ದೇಶಗಳಾದ ಅರ್ಜೆಂಟಿನಾ, ಬ್ರೇಜಿಲ್, ಚೀನಾ, ಜರ್ಮನಿ, ಇಂಡೋನೇಷಿಯಾ, ಜಪಾನ್, ರಿಪಬ್ಲಿಕ್  ಆಫ್ ಕೊರಿಯಾ, ಸೌತ್ ಆಫ್ರ‍್ರಿಕಾ, ಯುನೈಟೆಡ್  ಸ್ಟೇಟ್ಸ್ ಆಫ್ ಅಮೇರಿಕಾ, ಯುರೋಪಿಯನ್ ಯೂನಿಯನ್, ಆಸ್ಟೆಲಿಯಾ, ಕೆನಡಾ,  ಫ್ರ‍್ರಾನ್ಸ್, ಇಂಡಿಯಾ, ಇಟಲಿ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ಯುನೈಟೆಡ್ ಕಿಂಗ್ ಡಮ್, ಟರ್ಕಿ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.  ತುಮಕೂರು  ಜಿಲ್ಲಾ ಪೋಲೀಸರಿಂದ  ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು, ಜ್ಹೀರೋ ಟ್ರಾಫಿಕ್  ಮೂಲಕ ಪಾವಗಡದಿಂದ ತಿರುಮಣಿಯವರೆಗೂ  ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿತ್ತು.
     ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್. ವಿಭಾಗಾಧಿಕಾರಿ ಋಷಿ  ಆನಂದ್, ತಹಸೀಲ್ದಾರ್ ಡಿ.ವರದರಾಜು, ಇ.ಒ. ಶಿವರಾಜಯ್ಯ, ಸೇರಿಂದತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

Recent Articles

spot_img

Related Stories

Share via
Copy link
Powered by Social Snap