ನವದೆಹಲಿ:
ಬರೀ ಮುಸ್ಲಿಂ ಓಲೈಕೆಯ ಕಾಂಗ್ರೆಸ್ ಪಕ್ಷಕ್ಕೆ ಆರೆಸ್ಸೆಸ್ ಬಗ್ಗೆ ಲಘುವಾಗಿ ಮಾತನಾಡುವುದು ಒಂದು ಫ್ಯಾಶನ್ ಆಗಿದೆ ಎಂದು ಕೇಂದ್ರ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.ಆರೆಸ್ಸೆಸ್ ಸನಾತನ ಧರ್ಮ, ಸಂಸ್ಕೃತಿ, ರಾಷ್ಟ್ರ ಜಾಗೃತಿ ಮತ್ತು ಜಾಗ್ರತೆಯ ಒಂದು ಸಶಕ್ತ ಸಂಘಟನೆಯಾಗಿದೆ. ಅದರ ಬಗ್ಗೆ ಮಾತನಾಡುವ ಯೋಗ್ಯತೆ ತಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿ ಹಾಯ್ದಿದ್ದಾರೆ
ಆರೆಸ್ಸೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿದೆ. ಇಂದಿಗೂ ಅದೇ ಮಾರ್ಗದಲ್ಲಿದೆ. ಆರೆಸ್ಸೆಸ್ ಯಾವತ್ತೂ ಕಾಂಗ್ರೆಸ್ ಪಕ್ಷದಂತೆ ಒಂದು ಸಮುದಾಯದ ಓಲೈಕೆ ಮಾಡುವುದಿಲ್ಲ ಎಂದು ಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.ವಿನಾಕಾರಣ ಆರೆಸ್ಸೆಸ್ ಅನ್ನು ಎಳೆದು ತರುವುದು ಇತ್ತೀಚೆಗೆ ಕಾಂಗ್ರೆಸ್ಗೆ ಫ್ಯಾಷನ್ ಆಗಿ ಬಿಟ್ಟಿದೆ. ಒಂದು ರಾಷ್ಟ್ರಪರ ಚಿಂತನೆಯುಳ್ಳ ಶಿಸ್ತಿನ ಸಂಘಟನೆ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಇರಬೇಕು. ಆದರೆ, ಅದು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಜೋಶಿ ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ಸಿನಿಂದ ಒಡೆದಾಳುವ ನೀತಿ: ತುಷ್ಟೀಕರಣ ಮತ್ತು ಕುಟುಂಬ ರಾಜಕಾರಣದಲ್ಲಿ ಮುಳುಗಿದ ಕಾಂಗ್ರೆಸ್ ಅಭಿವೃದ್ಧಿ ಹೆಸರಲ್ಲಿ ಒಡೆದಾಳುವ ರಾಜಕೀಯ ಮಾಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ರಾಷ್ಟ್ರ ಒಡೆಯುವ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದೆ ಎಂದು ಸಚಿವ ಜೋಶಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರೂ ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣ ನೋಡಿಯೇ ಜನರು ರಾಷ್ಟ್ರ ರಾಜಕಾರಣದಿಂದ ಹೊರಗಿಟ್ಟಿದ್ದಾರೆ. ದೇಶಾದ್ಯಂತ ತಿರಸ್ಕರಿಸುತ್ತಿದ್ದಾರೆ. ಆರೆಸ್ಸೆಸ್ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಈ ಸತ್ಯ ಅರಿತುಕೊಳ್ಳಲಿ ಎಂದು ಪ್ರಲ್ಹಾದ ಜೋಶಿ ಅವರು ಘಿ ಖಾತೆಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
