ಹುಬ್ಬಳ್ಳಿ:
ಸಿಎಂ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಅದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೂಡ ಸಿದ್ದರಾಮಯ್ಯ ಅವರಿಂದ. ಆದರೆ, ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯ ಕಾರಣದಿಂದ ರಾಹುಲ್ ಗಾಂಧಿ ಪರವಾಗಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ರಾಹುಲ್ ಗಾಂಧಿ ಜತೆ ಹೋದರೆ ನಾವು ವಿಫಲರಾಗುತ್ತೇವೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಆದರೆ, ರಾಹುಲ್ ಪಕ್ಷದ ನಾಯಕ ಎನ್ನುವ ಕಾರಣಕ್ಕೆ ಅನಿವಾರ್ಯವಾಗಿ ಅವರ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಸಿದ್ಧಾಂತ, ಭಾಷೆ, ನೀತಿಗಳ ವಿಚಾರದಲ್ಲಿ ಭಿನ್ನತೆ ಇದೆ. ಆದರೆ, ರಾಹುಲ್ ಗಾಂಧಿ ತಾವು ಮುಳುಗುವುದರೊಂದಿಗೆ ತಮ್ಮೊಂದಿಗಿರುವ ಇತರರನ್ನು ಮುಳುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಹುಲ್ ಯಾರೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೋ ಅವರೆಲ್ಲರೂ ಮುಳುಗಿರುವ ಉದಾಹರಣೆಗಳಿವೆ ಎಂದು ಪ್ರಹ್ಲಾದ ಜೋಶಿ ಇದೇ ವೇಳೆ ಹೇಳಿದರು.
ಕಬ್ಬು ಬೆಳಗಾರರ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದೆ. ಅಮಾಯಕ ರೈತರ ಟ್ರ್ಯಾಕ್ಟರ್, ಕಬ್ಬು ಸುಟ್ಟಿದ್ದಾರೆ. ಯಾವುದೇ ಕಾರಣಕ್ಕೂ ರೈತರು ತಮ್ಮ ವಾಹನ, ಬೆಳೆಗೆ ಬೆಂಕಿ ಇಡುವುದಿಲ್ಲ. ಹೋರಾಟದಲ್ಲಿ ವಿಧ್ವಂಸಕ ಕೃತ್ಯಕ್ಕೆ ಅವಕಾಶ ದೊರೆಯುತ್ತದೆ ಎಂದರೆ ರಾಜ್ಯ ಸರ್ಕಾರದ ಕಾನೂನು ವ್ಯವಸ್ಥೆ ವಿಫಲವಾಗಿವೆ ಎಂದರ್ಥ. ಜನ ಸಂಕಷ್ಟದಲ್ಲಿದ್ದಾರೆ. ಇನ್ನೊಂದೆರಡು ತಿಂಗಳು ಕಳೆದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಸರ್ಕಾರ ಜನರ ಸಮಸ್ಯೆಗಳಿಗೆ ಗಮನ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಂದರು.








