ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಏಳುವುದೂ ತಡವಾಗಿದ್ದ ಕಾರಣ ಲಗುಬಗೆಯಿಂದ ತಯಾರಾಗಿ ತಿಂಡಿ ತಿನ್ನುವ ಶಾಸ್ತ್ರ ಮಾಡಿ ಗಾಡಿ ಏರಿದವನು ಬೆಂಗಳೂರಿನ ಟ್ರಾಫಿಕ್ನಲ್ಲಿ ಆಫೀಸ್ ತಲುಪುವಷ್ಟರಲ್ಲಿ ಅರ್ಧ ಗಂಟೆ ತಡವಾಗಿತ್ತು. ಅವಸರವಾಗಿ ಗಾಡಿ ಪಾರ್ಕ್ ಮಾಡಿದವನೇ ತನ್ನ ಕ್ಯಾಬಿನ್ ಸೇರಿ ಏಸಿ ತಂಪಿಗೆ ಕುರ್ಚಿಯಲ್ಲಿ ಮೈಯೊಡ್ಡಿದವನ ಕಿವಿಗೆ ಎಲ್ರೀ ನಿನ್ನೆ ಹೇಳಿದ ಕೆಲಸ ಆಗಿಲ್ಲ, ಆ ಕಂಪನಿ ಮೇಲ್ಗೆ ರಿಪ್ಲೆನೇ ಮಾಡಿಲ್ಲ.
ಈ ಫೈಲ್ ಕಂಪ್ಲೀಟಾಗಿಲ್ಲ ಅಂತ ಬಾಸ್ ಕಡೆಯಿಂದ ಬಾಣಗಳಂತೆ ಮಾತುಗಳು ಬರುತಿದ್ದಂತೆ ಅವನಿಗೆ ತಲೆ ಕೆಟ್ಟು ಹೋಗಿದ್ದವನು ಟಿ ಬ್ರೇಕ್ ಆಗುವುದನ್ನೇ ಕಾಯುತಿದ್ದ ಕಾರ್ಪೋರೇಟ್ ಕಂಪನಿಯ ಉದ್ಯೋಗಿಯೊಬ್ಬ, ಸ್ಮೋಕಿಂಗ್ ಏರಿಯಾದಲ್ಲಿ ಜೊತೆಯಾದ ತನ್ನ ಸಹೋದ್ಯೋಗಿ ಮಿತ್ರನ ಜೊತೆ ಹರಟುತ್ತಾ ಬೆಳಗ್ಗೆಯಿಂದ ಸಿಕ್ಕ್ಕಾಪಟ್ಟೆ ಟೆನ್ಷನ್ ಆಗಿತ್ತು `ಈಗ ಸಮಾಧಾನ ಆಯ್ತು ನೋಡು ಧಮ್ ಹೊಡೆದರೇ ನನಗೆ ತಲೆ ಓಡೋದು’ ಅಂತ ಸಿಗರೇಟ್ ಹೊಗೆ ಬಿಡುತ್ತಾ ಅದೇನೋ ಆನಂದದಲ್ಲಿ ಹರಟುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾದ ವಿಷಯ.
ಇದರಲ್ಲಿ ವಯಸ್ಸು, ಲಿಂಗ ತಾರತಮ್ಯವಿಲ್ಲದೆ ಹಾಗೂ ಎಲ್ಲಿಯೂ ಇಲ್ಲದ ಸಮಾನತೆ ಇಲ್ಲಿ ಕಾಣುಬಹುದು. ಎದ್ದ ಕೂಡಲೇ ಕಣ್ಣ ಮುಂದೆ ಬಿಸಿ ಕಾಫಿ ಬೇಕು. ಇಲ್ಲ ಅಂದರೆ ಕಣ್ ಬಿಡೋಕೆ ಆಗಲ್ಲ ಎಂಬ ಮಾತಿನಿಂದ (ಚಟದಿಂದ) ಆರಂಭಗೊಳ್ಳುವ ದಿನ, ಸಿಗರೇಟ್ ಸೇದದೆ ನಿತ್ಯ ಕರ್ಮಗಳು ಮುಗಿಯುವುದಿಲ್ಲ. ಗುಟ್ಕ ಬಾಯಿಗೆ ಹಾಕದಿದ್ದರೆ ಮತ್ತೆ ಅದೇ ಗೊಣಗಾಟ.
ಹಾಗೊಮ್ಮೆ ಅವಲೋಕಿಸಿದರೆ ಯಾವೊಬ್ಬ ವ್ಯಸನಿಯೂ ಕೂಡ ಆರಂಭದಿಂದಲೂ ವ್ಯಸನಿಯಾಗಿರಲಿಲ್ಲ ಇವುಗಳ ಪರಿಚಯ ಇರದಿದ್ದ ದಿನಗಳಲ್ಲಿ ಬೆಳಗ್ಗೆ ಎದ್ದವನಿಗೆ ಎಲ್ಲಾ ನಿತ್ಯ ಕರ್ಮಗಳೂ ಸಲೀಸಾಗಿ ಮುಗಿಯುತಿದ್ದವು, ಮಲಗಿದ್ದವನು ಕಾಫಿ ಇಲ್ಲದೆ ನಿದ್ದೆಯಿಂದ ಎಚ್ಚರಗೊಳ್ಳುತಿದ್ದ, ಸಿಗರೇಟು ಸೇದುವ ಅಭ್ಯಾಸ ಆಗುವುದಕ್ಕೂ ಮೊದಲು ಅದೇ ಕಾರ್ಪೋರೇಟ್ ಕಂಪನಿ ಉದ್ಯೋಗಿ ತನ್ನ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ಮಾಡುತಿದ್ದ ಎಂಬುದನ್ನು ಕಡೆಗಣಿಸುವಂತಿಲ್ಲ.
ಅಂದರೆ ಮನುಷ್ಯ ತನ್ನ ಮನಸಿನ ಮೇಲಿನ ನಿಯಂತ್ರಣ ಕಳೆದುಕೊಂಡು ಸಲ್ಲದ ನೆಪಗಳನ್ನು ಮುಂದಿಟ್ಟುಕೊಂಡು ತನ್ನ ಚಟಗಳನ್ನು ಮುಂದುವರೆಸಿಕೊಂಡು ಹೋಗುತ್ತಾನೆ. ಹೀಗೆ ನಿತ್ಯದ ಬದುಕಿನಲ್ಲಿ ಎಲ್ಲಾ ವಯಸ್ಸಿನ ಜನರು ಹಲವಾರು ಬಗೆಯ ವ್ಯಸನಗಳಿಗೆ ಚಟಗಳಿಗೆ, ದಾಸರಾಗಿದ್ದಾರೆ. ಹಲವರಿಗೆ ನಿಯಂತ್ರಣವಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬರಲಾಗದಷ್ಟು ನಿಯಂತ್ರಣ ಕಳೆದುಕೊಂಡು ಎಷ್ಟೋ ಸಂದರ್ಭಗಳಲ್ಲಿ ಅವರಿಗೆ ಬೇಕಾಗಿರುವುದನ್ನು ಪಡೆಯಲು ಹೊಡೆದಾಟ, ಹಿಂಸೆ, ಕೊಲೆ, ಮಟ್ಟಕ್ಕೆ ಹೋಗಿರುವ ಉದಾಹರಣೆಗಳು ಸಿಗುತ್ತವೆ. ವಿಪರ್ಯಾಸ ಎಂದರೆ ಆತ್ಮಹತ್ಯೆಗಳೂ ಸಹ ಆಗಿವೆ ಎಂಬುದು ಇದರ ತೀವ್ರತೆಗೆ ಕೈಗನ್ನಡಿ.
ಇಂದು ಇಡೀ ದೇಶ ಲಾಕ್ಡೌನ್ ಆಗಿ ಎಲ್ಲಾ ವಿಧದಲ್ಲೂ ನಿಯಂತ್ರಿತರಾಗಿದ್ದೇವೆ. ಕೇವಲ ಬದುಕಲು ಅಗತ್ಯವಿರುವ ವಸ್ತುಗಳು ದೊರಕುವುದೆ ದುಸ್ತರವಾಗಿರುವ ಈ ದಿನಗಳಲ್ಲಿ, ಇನ್ನೂ ವ್ಯಸನಿಗಳಿಗೆ ಅವರ ಚಟದ ವಸ್ತುಗಳು ಕೂಡ ಸಿಗುವುದು ಕಷ್ಟ ಸಾಧ್ಯವೆ ಸರಿ. ಆದರೂ ಚಟಗಳಿಗೆ ದಾಸರಾಗಿ ಅದಿಲ್ಲದೆ ಬದುಕೂ ಇಲ್ಲ. ದಿನದ ಆರಂಭವೆ ಇಲ್ಲ. ದಿನ ಮುಗಿಯುವುದೂ ಇಲ್ಲ ಎಂಬ ಭ್ರಮೆಯ ಮನಸ್ಥಿತಿಯಲ್ಲಿ ತಮ್ಮನ್ನು ತಾವೇ ಯೋಚಿಸುತ್ತಿದ್ದವರು ಇಂದು ವಾಸ್ತವದಲ್ಲಿ ಬದುಕುತ್ತಿದ್ದಾರೆ. ಹಾಗಾದರೆ ಅವರೆಲ್ಲ ಇದ್ದದ್ದು ಕಾಲ್ಪನಿಕ ಬದುಕಿನಲ್ಲಿ ಎಂಬುದು ಕಟುಸತ್ಯ.
ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆ ಟೀ, ಕಾಫಿ ಸಿಗರೇಟು, ಗುಟ್ಕ ಸೇವನೆ, ಮದ್ಯಪಾನ, ಮಾದಕ ದ್ರವ್ಯ ಮುಂತಾದವುಗಳಿಗೆ ಹಲವಾರು ಸಂದರ್ಭಗಳಿಂದ, ಸನ್ನಿವೇಶಗಳಿಂದ ಮೊದ ಮೊದಲು ಮೋಜಿಗಾಗಿ, ಪ್ರತಿಷ್ಠೆಗಾಗಿ, ಚಟ ಅಂಟಿಸಿಕೊಂಡು ಕಾಲ ಕ್ರಮೇಣ ಅದಕ್ಕೆ ದಾಸರಾಗಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಇದನ್ನೇ ಕರಾಳ ದಂಧೆ ಮಾಡಿಕೊಂಡವರು ಹಲವರು. ಆದರೆ ಇಂದು ಅವುಗಳ ಲಭ್ಯತೆ ಕ್ಷೀಣಿಸಿದೆ. ಇಂದು ಅವರೆಲ್ಲರೂ ಅನಿವಾರ್ಯವಾಗಿ ದೂರವಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ವಾಸ್ತವದ ಅರಿವು ಮೂಡಿಸಿ ವ್ಯಸನ ಮುಕ್ತರನ್ನಾಗಿಸಲು ಇದಕ್ಕೆಂದೇ ವಿಶೇಷವಾಗಿ ಕಾರ್ಯ ನಿರ್ವಹಿಸುವ ಮಾದಕ ದ್ರವ್ಯ ನಿಗ್ರಹ ದಳದ ಸಹಯೋಗದಲ್ಲಿ ಶಾಲಾ ಕಾಲೇಜು ಸೇರಿದಂತೆ ಪ್ರತಿ ಹಂತದಲ್ಲೂ ಕಾರ್ಯ ಯೋಜನೆ ರೂಪು ರೇಷೆಗಳನ್ನು ಹಾಕಿಕೊಂಡರೆ ಫಲ ನೀಡಬಹುದು.
ನಮಗೆಲ್ಲಾ ತಿಳಿದಿರುವ ಹಾಗೆ ಇಂದು ಹೆಚ್ಚಿನ ಜನರು ಮನೆಯಲ್ಲೇ ಇದ್ದು, ಕೌಟುಂಬಿಕ ಜೀವನವನ್ನು ಹಲವು ದಿನಗಳಿಂದ ಕಳೆಯುತ್ತಿದ್ದೇವೆ. ಇದರ ಪ್ರಯೋಜನ ಕೂಡ ವ್ಯಸನ ಮುಕ್ತ ದೇಶ ಕಟ್ಟಲು ಬಳಸಬಹುದು. ವ್ಯಸನಕ್ಕೆ ಅಂಟಿಕೊಂಡಿರುವವರಿಗೆ ಮನೆ ಮಂದಿಯೆಲ್ಲಾ ಜೊತೆಗಿದ್ದು ಖುಷಿಯ ವಾತಾವರಣದಲ್ಲಿ, ಮಾನಸಿಕವಾಗಿ ಧೈರ್ಯ ತುಂಬಿದರೆ, ಅದಕ್ಕಿಂತ ದೊಡ್ಡ ಮದ್ದು ಜಗತ್ತಿನಲ್ಲಿ ಬೇರೊಂದಿಲ್ಲ. ಅಗತ್ಯ ಬಿದ್ದರೆ ವೈದ್ಯರು, ಮನೋವೈದ್ಯರು, ಆಪ್ತ ಸಮಾಲೋಚಕರ ಸಲಹೆ, ಔಷಧಿ ಕೂಡ ಬಳಸಬಹುದು.
ಲಾಕ್ಡೌನ್ ಪರಿಣಾಮದಿಂದ ಅಗತ್ಯ ಸೇವೆಗಳ ಕಚೇರಿಗಳನ್ನಷ್ಟೆ ತೆರೆÀದಿರುವುದು ಹಾಗೂ ಕನಿಷ್ಠ ಸಿಬ್ಬಂದಿ ಮಾತ್ರ ಕೆಲಸಕ್ಕೆ ಬರುತ್ತಿರುವುದು. ಮುಖ್ಯವಾಗಿ ಇವರ್ಯಾರಿಗೂ ಹೊರಗಿನಿಂದ ಟೀ, ಕಾಫೀ ಆಗಲಿ ಅಥವಾ ಸಿಗರೇಟಾಗಲಿ ಲಭ್ಯವಿಲ್ಲ. ಜೊತೆಗೆ ಮನೆಯಿಂದಲೇ ಕೆಲಸ ಮಾಡುತ್ತಿರುವವರಿಗೆ ಮನೆಯಲ್ಲಿ ಎಲ್ಲರ ಮುಂದೆ ತಮ್ಮ ಅಭ್ಯಾಸಗಳನ್ನು ಬಿಡದೆ ವಿಧಿಯಿಲ್ಲ. ಈ ಎಲ್ಲಾ ವಿಚಾರಗಳಲ್ಲೂ ಇಂದು ಪ್ರತಿಯೊಬ್ಬರೂ ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಳ್ಳುವುದಕ್ಕೆ ಆ ಪ್ರಕೃತಿಯೇ ಕೊಟ್ಟಿರುವ ಸುವರ್ಣಾವಕಾಶ.
ಈ ಸ್ವಾರ್ಥ ಪ್ರಪಂಚದಲ್ಲಿ ಯಾವುದಕ್ಕೂ ಸಮಯವಿಲ್ಲ, ನಾನೆ ಎಲ್ಲಾ, ನನ್ನಿಂದಲೆ ಎಲ್ಲಾ ಎಂದು ಮನುಷ್ಯ ಬೀಗುತ್ತಿದ್ದನು. ಬಯಸಿದ್ದೆಲ್ಲಾ ನನ್ನ ಕಾಲ ಕೆಳಗೆ ಬೀಳುವುದು ಎಂದು ಅಹಂಕಾರದಿಂದ ಮೆರೆಯುತ್ತಿದ್ದು ನನ್ನ ಯಾವ ಆಟವೂ ಸಾಗುವುದಿಲ್ಲ ಎಂಬ ವಾಸ್ತವಕ್ಕೆ ಬಂದು, ಮತ್ತೊಮ್ಮೆ ತನ್ನ ಭವಿಷ್ಯದ ಜೀವನದಲ್ಲಿ ತನ್ನ ಇತಿ ಮಿತಿ ಅರಿತುಕೊಂಡು ಪ್ರಕೃತಿಯನ್ನು ಗೌರವಿಸುತ್ತಾ, ಮಾನವ ಮೌಲ್ಯಗಳಿಗೆ, ಸಂಬಂಧಗಳಿಗೆ ಬೆಲೆ ಕೊಟ್ಟು ಭವಿಷ್ಯ ಕಟ್ಟಿಕೊಂಡರೆ ಮತ್ತೆ ನಾವು ಈ ಲಾಕ್ಡೌನ್ ನಂತಹ ಪರಿಸ್ಥಿತಿಯನ್ನು ಶಾಶ್ವತವಾಗಿ ನೋಡದೆ ಇರಬಹುದು. ಮುಖ್ಯವಾಗಿ ವ್ಯಸನಿಗಳಿಗೆ ಬೇಕಾದ ವಸ್ತುಗಳು ದೊರೆಯದಿರುವಂತಹ ಪರಿಸ್ಥಿತಿ ಕೂಡ ಅವರನ್ನು ಮಾನಸಿಕವಾಗಿ ಸ್ವಯಂ ನಿಯಂತ್ರಿಸುವಂತೆ ಮಾಡಿರುವುದು ಎನ್ನುವುದು ಧನಾತ್ಮಕ ಬೆಳವಣಿಗೆ.
ಕೆಲವು ಕಡೆ ವಿರಳ ಸಂದರ್ಭದಲ್ಲಿ ವ್ಯಸನಿಗಳು ತಮ್ಮನ್ನು ನಿಯಂತ್ರಿಸಿಕೊಳ್ಳಲಾಗದೆ ಕುಟುಂಬಗಳಲ್ಲಿ ದೌರ್ಜನ್ಯ ವೆಸಗಿರುವುದು ಕೇಳಿ ಬಂದಿದೆಯಾದರೂ ಸಹ, ಅವರಿಗೆ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಿದರೆ ಅವರೂ ಸಹ ವ್ಯಸನ ಮುಕ್ತರಾಗಬಹುದು. ಜೊತೆಗೆ ಅತಿ ಮುಖ್ಯವಾಗಿ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಸಂಬಂಧಪಟ್ಟ ಅಧಿಕಾರಿ ವರ್ಗ, ಸಂಘ ಸಂಸ್ಥೆಗಳು, ಪ್ರಾಧಿಕಾರಗಳು, ಮಂತ್ರಿಗಳು ಇದರಲ್ಲಿನ ಸಂಕೀರ್ಣತೆಯನ್ನು ಆಳವಾಗಿ ಅಧ್ಯಯನ ಮಾಡಬೇಕು. ಇದರಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಕರಾಳ ದಂಧೆಯಲ್ಲಿ ತೊಡಗಿಸಿಕೊಂಡು ಜೀವನ ಕಟ್ಟಿಕೊಂಡಿರುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಪ್ರಭಾವ, ಒತ್ತಡಗಳಿಗೆ ಒಳಗಾಗದೆ ಪರ್ಯಾಯ ವ್ಯವಸ್ಥೆ ಮಾಡಿದರೆ ಇದು ಪರಿಣಾಮಕಾರಿ ಫಲಿತಾಂಶ ನೀಡಬಹುದು.
ಕಾರಣ, ಮಾದಕ ವಸ್ತುಗಳು ಲಭ್ಯವಿದ್ದಾಗ, ಅದು ಕಣ್ಣೆದುರು ಕಂಡಾಗ ವ್ಯಸನಿಗಳಿಗೆ ಅರಿವಿಲ್ಲದೆ ಪ್ರಚೋದಿಸುತ್ತದೆ. ಆಗ ಸ್ವಯಂ ನಿಯಂತ್ರಣ ತಪ್ಪಿ ಅದರ ಬಲೆಯಿಂದ ಹೊರಬರುವುದು ಕಷ್ಟವಾಗಬಹುದು. ಅವುಗಳು ಇದ್ದೂ ಇಲ್ಲದಂತಾಗಿಸುವುದು ಸಹ ಸವಾಲಿನ ಕೆಲಸವೆ ಸರಿ. ಆದರೆ ಈಗಿನ ಲಾಕ್ ಡೌನ್ ಸಂದರ್ಭದಲ್ಲಿ ಸಹಜವಾಗಿಯೆ ಅವುಗಳು ಲಭ್ಯವಿಲ್ಲದಿರುವುದು ವ್ಯಸನಿಗಳು ವ್ಯಸನಮುಕ್ತರಾಗಲು ಸುಸಂದರ್ಭವೆನ್ನಬಹುದು.
ರೇಣುಕಾ ಪ್ರಸಾದ್ ಹರ್ತಿಕೋಟೆ,ತುಮಕೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
