ಉತ್ತರ ಕರ್ನಾಟಕದ ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಅಲ್ಲೆಲ್ಲಾ ಪ್ರವಾಹದ ಭೀತಿ ಎದುರಾಗಿದೆ. ಇತ್ತ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆಯೂ ಇಲ್ಲ, ಬೆಳೆಯೂ ಇಲ್ಲ ಎಂಬಂತಾಗಿ ಜನಜಾನುವಾರು ತತ್ತರಿಸುತ್ತಿದ್ದಾರೆ. ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ. ಕುಡಿಯಲು ಮಾತ್ರ ನೀರಿಗೆ ಎಲ್ಲ ಕಡೆಯೂ ತೊಂದರೆ. ಯಥೇಚ್ಛವಾಗಿ ಪ್ರವಾಹದ ನೀರು ಹರಿಯಬಹುದು. ಆದರೆ ಅದನ್ನು
ಕುಡಿಯಲು ಸಾಧ್ಯವಾದೀತೆ?
ನಾವು ಮಳೆ ನೀರಿನ ಹರಿವಿನ ಮೇಲೆ ನಿಯಂತ್ರಣ ಸಾಧಿಸುತ್ತಿಲ್ಲ. ಮಳೆಯ ನೀರು ಹರಿದು ಹೋಗುವ ಎಲ್ಲಾ ಅವಕಾಶಗಳಿವೆ. ಆದರೆ ಅದನ್ನು ತಡೆದು ಅಂತರ್ಜಲಕ್ಕೆ ಬಸಿಯುವ ವ್ಯವಸ್ಥೆಯಾಗುತ್ತಿಲ್ಲ. ನೀರು ವೇಗವಾಗಿ ಹರಿದಾಗ ಮಣ್ಣಿನ ಕೊರೆತ ಹೆಚ್ಚಾಗುತ್ತದೆ. ರಭಸವಾಗಿ ಹರಿದು ಬರುವ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ.
ಅದರೊಳಗೆ ಕೇವಲ ಮಣ್ಣಷ್ಟೇ ಹೋಗುವುದಿಲ್ಲ. ಫಲವತ್ತಾದ ಅಂಶವೆಲ್ಲವೂ ಕೊಚ್ಚಿ ಹೋಗುತ್ತದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂದರೆ ಅಲ್ಲಿನ ಭೂಮಿ ಹಾಳಾಗುತ್ತದೆ. ಫಲವತ್ತತೆ ಹರಿದು ಹೋಗುತ್ತದೆ. ನೀರೂ ಸಹ ಇರುವುದಿಲ್ಲ. ಇಂತಹ ಪ್ರದೇಶಗಳಲ್ಲಿ ನೀರನ್ನು ಕೆಲ ಕಾಲ ತಡೆದು ನಿಲ್ಲಿಸುವಂತಹ ವ್ಯವಸ್ಥೆಯಾದರೆ ನೀರು ರಭಸವಾಗಿ ಕೊಚ್ಚಿ ಹೋಗದೆ ಅಲ್ಲಲ್ಲೇ ಸಂಗ್ರಹವಾದರೆ ಅಂತರ್ಜಲ ಅಭಿವೃದ್ಧಿಯಾಗುತ್ತದೆ.
ಭಾರತದಲ್ಲಿ ಪ್ರವಾಹ ಮತ್ತು ಕ್ಷಾಮವನ್ನು ತಡೆಯಲು ಬಯಸುತ್ತೇವೆ ಎಂದಾದರೆ ಮಳೆ ನೀರಿನ ಹರಿವಿನ ಮೇಲೆ ನಿಯಂತ್ರಣ ಸಾಧಿಸದೇ ಇರುವುದು. ಪ್ರವಾಹ ತಗ್ಗಿಸಲು ನೀರಿನ ಹರಿವಿನ ವೇಗವನ್ನು ತಗ್ಗಿಸಬೇಕು. ಓಡುವ ನೀರು ನಡೆಯುವಂತಾಗಬೇಕು. ಅದು ನಡೆಯಲು ಆರಂಭಿಸಿದ ನಂತರ ತೆವಳುವಷ್ಟು ವೇಗ ತರಬೇಕು. ಹೀಗೆ ಆದಾಗ ಮಾತ್ರ ನೀರನ್ನು ಭೂಮಿಯ ಒಡಲಿಗೆ ಸೇರಿಸಬಹುದು. ಮಳೆಯನ್ನು ನಾವು ಎರಡು ರೀತಿಯಲ್ಲಿ ವಿಂಗಡಿಸಬಹುದು.
ಮುಂಗಾರು ಮಾನ್ಸೂನ್ ಸಂದರ್ಭದಲ್ಲಿ ಗುಡುಗು ಸಹಿತ, ಆಲಿಕಲ್ಲು ಸಹಿತ ಜೋರು ಮಳೆಯಾಗುತ್ತದೆ. ಈ ಮಳೆಯ ಒಡೆತಕ್ಕೆ ಹಳ್ಳಕೊಳ್ಳಗಳು ಹರಿಯುತ್ತವೆ. (ಹಿಂದೆ ಈ ಪರಿಸ್ಥಿತಿ ಇತ್ತು) ಈ ಹಳ್ಳಗಳು ಸದಾಕಾಲ ನೀರಿನಿಂದ ತುಂಬಿರುತ್ತಿದ್ದವು. ಹೀಗಾಗಿ ಹಿಂದಿನ ಜನರಿಗೆ ನೀರಿನ ತಾಪತ್ರಯವೂ ಇರಲಿಲ್ಲ, ನೀರಿಗಾಗಿ ಹುಡುಕಿಕೊಂಡು ಹೋಗುತ್ತಿರಲಿಲ್ಲ. ಮತ್ತೊಂದು ರೀತಿಯ ಮಳೆ ಎಂದರೆ ಸೈಕ್ಲೋನ್.
ಸಣ್ಣದಾಗಿ ಮಳೆ ಹನಿಯುವ ಸಂದರ್ಭದಲ್ಲಿ ತೇವಾಂಶ ಮಣ್ಣಿನಲ್ಲಿ ಹೀರಿಕೊಂಡು ಇಡೀ ಭೂಮಿ ಹಸಿಯಾಗುತ್ತದೆ. ನೀರು ಅಂತರ್ಜಲ ಸೇರುತ್ತದೆ. ಈ ಸಂದರ್ಭದಲ್ಲಿ ಮಳೆಯ ನೀರು ಹೆಚ್ಚು ಪೋಲಾಗುವುದಿಲ್ಲ. ಆದರೆ ಅತಿಯಾದ ಮಳೆ ಬಂದಾಗ ಕೊಚ್ಚಿ ಹೋಗುವ ಸಂದರ್ಭದಲ್ಲಿ ಬೇರೆ ಬೇರೆ ತರಹದ ಗಂಡಾಂತರಗಳು ಎದುರಾಗುತ್ತವೆ. ಇದನ್ನು ತಡೆಗಟ್ಟಲು ಕ್ರಮಗಳು ಬೇಕು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ನದಿ ನೀರು ಜೋಡಣೆಯ ಚರ್ಚೆ ಆಗಿತ್ತು. ಈ ವಿಷಯ ಇನ್ನೂ ಚರ್ಚೆಯಲ್ಲಿದೆ. ಈಗಿನ ಪರಿಸ್ಥಿತಿ ನೋಡಿಕೊಂಡರೆ ಇದು ಉತ್ತಮ ಎನ್ನಿಸಿದರೂ ತಕ್ಷಣಕ್ಕೆ ಇದರಿಂದ ಪರಿಹಾರ ಸಾಧ್ಯವಾಗದು. ದೂರದೃಷ್ಟಿಯ ಈ ಯೋಜನೆಗಳು ಎಷ್ಟು ಫಲಕಾರಿ ಎಂಬುದು ನಂತರವೇ ತಿಳಿಯಬೇಕು.
ಆದರೆ ನಮಗೀಗ ಬೇಕಿರುವುದು ತಕ್ಷಣದ ಪರಿಹಾರ. ಮಳೆ ಬರಬೇಕು. ಆದರೆ ಬರುತ್ತಿಲ್ಲ. ಮಳೆಯೇ ಇಲ್ಲವಾದರೆ ನೀರು ಎಲ್ಲಿಂದ ತರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರ್ಕಾರದ ಮೋಡ ಬಿತ್ತನೆಯೂ ಸರಿಯಾಗಿ ಫಲ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ನೀರು ಸಂರಕ್ಷಣೆ, ಅಂತರ್ಜಲ ವೃದ್ಧಿ, ನೀರಿನ ಮಿತ ಬಳಕೆ ಇವೆಲ್ಲವೂ ಎಲ್ಲರಿಗೂ ತಿಳಿಯಬೇಕಾಗಿರುವ ಬಹಳ ಪ್ರಮುಖ ಅಂಶಗಳು. ಏಕೆಂದರೆ, ನೀರನ್ನು ಎಲ್ಲದಕ್ಕೂ ಹಣ ಕೊಟ್ಟು ಕೊಂಡುಕೊಳ್ಳಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇದರ ಭೀಕರತೆ ನಮಗೆ ಅರ್ಥವಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
