ತುಮಕೂರು

ಬಡವರು ಹಸಿವಿನಿಂದ ನರಳಬಾರದು ಎಂಬ ಸದುದ್ದೇಶದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾ ವಧಿಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದರು. ಬಡವರಿಗೆ ಅನುಕೂಲವಾಗಲೆಂದು ಜಾರಿಗೆ ತಂದ ಈ ಯೋಜನೆಗೂ ಕನ್ನ ಹಾಕುವ ಕೈಗಳು ಹುಟ್ಟಿಕೊಂಡಿದ್ದಾವೆಂದರೆ ಈ ವ್ಯವಸ್ಥೆ ಅದೆಷ್ಟು ದಾರಿದ್ರ್ಯಕ್ಕೆ ಒಳಗಾಗಿದೆ ಎಂಬುದು ತಿಳಿಯುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿಯೇ ತುಮಕೂರಿನಲ್ಲಿಯೂ ಇಂದಿರಾ ಕ್ಯಾಂಟೀನ್ಗಳು ಅಸ್ತಿತ್ವದಲ್ಲಿವೆ. ತುಮಕೂರು ಮಹಾನಗರ ಪಾಲಿಕೆ ಆವರಣದ ಪಕ್ಕದಲ್ಲಿ, ಕ್ಯಾತ್ಸಂದ್ರ, ಶಿರಾಗೇಟ್ ಹಾಗೂ ಜೆ.ಸಿ.ರಸ್ತೆಯಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ. ಮುಂಬೈನ ಖಾಸಗಿ ಸಂಸ್ಥೆಯೊಂದಕ್ಕೆ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಟೆಂಡರ್ ಮೂಲಕ ನೀಡಲಾಗಿದೆ.
” ಅತ್ಯಂತ ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ 5 ರೂ.ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ 10 ರೂ.ಗಳಂತೆ ನೀಡಲಾಗುತ್ತಿದೆ. ಬೆಳಗಿನ ತಿಂಡಿ ಸಮಯ 7.30 ರಿಂದ 10 ಗಂಟೆ. ಮಧ್ಯಾಹ್ನದ ಊಟ 12.30 ರಿಂದ 3 ಗಂಟೆ. ರಾತ್ರಿ ಊಟದ ಸಮಯ 7 ರಿಂದ 9 ಗಂಟೆ. ಪ್ರತಿ ದಿನ ಬೆಳಗಿನ ತಿಂಡಿಯಿಂದ ಹಿಡಿದು, ರಾತ್ರಿ ಊಟದ ತನಕ ಪ್ರತಿ ತಿಂಡಿ ಮತ್ತು ಎರಡೂ ಸಮಯದ ಊಟಗಳಿಗೆ ತಲಾ 500 ಟೋಕನ್ಗಳನ್ನು ನಿಗದಿ ಪಡಿಸಲಾಗಿದೆ”.
ಮಹಾನಗರ ಪಾಲಿಕೆಯಿಂದ ಈ ಕ್ಯಾಂಟೀನ್ಗಳಿಗೆ ಎಸ್.ಎಫ್.ಸಿ. ಮತ್ತು ಸಾಮಾನ್ಯ ಅನುದಾನದಿಂದ ಶೇ.70 ರಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ. ಉಳಿದ ಶೇ.30 ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಇಂದಿರಾ ಕ್ಯಾಂಟೀನ್ಗಳಲ್ಲಿ ತಯಾರಾಗುವ ಆಹಾರವನ್ನು ಆಗಾಗ್ಗೆ ನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಪರಿಶೀಲಿಸುತ್ತಾರೆ.
ಆದರೆ ಹೀಗೆ ಬಡವರಿಗೆ ಸರಬರಾಜು ಮಾಡುವ ಊಟದಲ್ಲೂ ವಂಚನೆ ಎಸಗಿ ಹಣ ಮಾಡುವ ವ್ಯಕ್ತಿಗಳು ಹುಟ್ಟಿಕೊಂಡಿ ದ್ದಾರೆಂದರೆ ಇದಕ್ಕಿಂತಲೂ ಹೇಯಕರ ಕೃತ್ಯ ಮತ್ತೊಂದಿದೆಯೇ ಎನ್ನುವಂತಾಗಿದೆ. ಎಷ್ಟೋ ಜನ ಅನ್ನ ಹಾಕಿ ಮಾನವೀಯತೆ ಮೆರೆಯುತ್ತಾರೆ. ಸಾಂದರ್ಭಿಕ ಅವಕಾಶಗಳು ಸಿಕ್ಕಿದಾಗ ನಾಲ್ಕಾರು ಜನರಿಗೆ ಊಟ ಬಡಿಸುತ್ತಾರೆ. ದಾನ, ಧರ್ಮಗಳಿಗೆ ಹೆಸರಾಗಿರುವ ನಾಡು ನಮ್ಮದು. ಆದರೆ ಕೆಲವೆ ವ್ಯಕ್ತಿಗಳ ಧನದಾಹದಿಂದಾಗಿ ಸರ್ಕಾರದ ಇಂತಹ ಬಹುಪಯೋಗಿ ಯೋಜನೆಗಳೆ ಹಳ್ಳ ಹಿಡಿಯುತ್ತಿರುವುದು ದುರಂತ.
ತುಮಕೂರು ಮಹಾನಗರ ಪಾಲಿಕೆಯ 4 ಕ್ಯಾಂಟೀನ್ಗಳಲ್ಲಿ ಪ್ರತಿನಿತ್ಯ ಬೆಳಗ್ಗೆ 2000 ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ 4000 ಊಟ ಸರಬರಾಜು ಮಾಡುತ್ತಿರುವುದಾಗಿ ಲೆಕ್ಕ ತೋರಿಸಲಾಗುತ್ತಿದೆ. ಪ್ರತಿ ಕ್ಯಾಂಟೀನ್ಗಳಲ್ಲಿ ಬೆಳಗ್ಗೆ 500, ಮಧ್ಯಾಹ್ನ 500 ಹಾಗೂ ಸಂಜೆ 500 ಗ್ರಾಹಕರ ಲೆಕ್ಕ. ಈ ಲೆಕ್ಕವೇ ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದಿರಾ ಕ್ಯಾಂಟೀನ್ಗಳಲ್ಲಿ ರಾಮ-ಕೃಷ್ಣನ ಲೆಕ್ಕ ನಮೂದಾಗುತ್ತಿದ್ದು, ಈ ಅಕ್ರಮ ವ್ಯವಹಾರದೊಳಗೆ ಕ್ಯಾಂಟೀನ್ ನಡೆಸುವ ಏಜೆನ್ಸಿ, ನಗರ ಪಾಲಿಕೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆಗಳು ವ್ಯಕ್ತವಾಗುತ್ತಿವೆ.
ಪ್ರತಿ ಉಪಾಹಾರ ಹಾಗೂ ಊಟಕ್ಕೆ ಇಂತಿಷ್ಟು ಗ್ರಾಂ ಎಂದು ನಿಗದಿಪಡಿಸಲಾಗಿದೆ. ಈ ಪರಿಮಾಣವನ್ನು ಕ್ಯಾಂಟೀನ್ಗಳಲ್ಲಿ ಪ್ರದರ್ಶಿಸಬೇಕು. ಅಕ್ರಮಗಳು ಇಲ್ಲಿಂದಲೇ ಆರಂಭವಾಗುತ್ತಲಿವೆ. ಎಲ್ಲ ಕ್ಯಾಂಟೀನ್ಗಳಲ್ಲೂ ಗ್ರಾಂ ಲೆಕ್ಕದ ಪರಿಮಾಣ ಪ್ರದರ್ಶನದ ನಾಮಫಲಕಗಳು ಕಾಣುತ್ತಿಲ್ಲ. ಎಷ್ಟು ತಿಂಡಿ ಕೊಡುತ್ತಾರೆ ಎಂಬ ಲೆಕ್ಕವೂ ಸಿಗುತ್ತಿಲ್ಲ. ಕಡಿಮೆ ದರಕ್ಕೆ ಇಷ್ಟೇ ಇರಬಹುದು ಎಂದು ಬಗೆದು ಗ್ರಾಹಕರು ಉಪಾಹಾರ ಸೇವಿಸಿ ಹೋಗುತ್ತಿದ್ದಾರೆ. ಅಳತೆ ಪರಿಶೀಲಿಸುವ, ಪ್ರಶ್ನಿಸುವ ವ್ಯವಸ್ಥೆಯೇ ಇಲ್ಲಿ ಇಲ್ಲವಾಗಿದೆ. ಇನ್ನು ಕ್ಯಾಂಟೀನ್ಗಳ ಒಳಹೊಕ್ಕು ನೋಡಿದರೆ ಬಾಡಿದ, ಹಳೆಯ ತರಕಾರಿ, ಸೊಪ್ಪು ಕಂಡುಬರುತ್ತದೆ. ಕೆಲವೊಮ್ಮೆ ಹಳಸಲಾದ ತರಕಾರಿಗಳನ್ನೇ ಸಾಂಬಾರಿಗೆ ಬಳಸಲಾಗುತ್ತಿರುವ ಕೆಲವು ಉದಾಹರಣೆಗಳು ಇವೆ.
ಇಂದಿರಾ ಕ್ಯಾಂಟೀನ್ಗಳಿಗೆ ಎಲ್ಲ ವರ್ಗದ ಜನರೂ ಹೋಗುವುದಿಲ್ಲ. ಇದಕ್ಕಾಗಿಯೇ ಸೀಮಿತ ವರ್ಗದ ಜನರಿದ್ದಾರೆ. ಕೆಲವು ಕಡೆ ವಿದ್ಯಾರ್ಥಿಗಳು ಹೋಗಬಹುದಾದ ಸಾಧ್ಯತೆಗಳಿರುವ ಕಡೆ ಒಮ್ಮೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗ ಪಡೆಯುವವರು ಇರಬಹುದು. ಇದನ್ನು ಬಿಟ್ಟರೆ ಇತರೆ ಎಲ್ಲ ವರ್ಗದ ಜನ ಇಂದಿರಾ ಕ್ಯಾಂಟೀನ್ಗಳ ಸೌಲಭ್ಯ ಪಡೆಯುತ್ತಿಲ್ಲ.
“ಆದರೂ ಪ್ರತಿದಿನ ನಿಗದಿತ ಪ್ರಮಾಣದ ತಿಂಡಿ ಮತ್ತು ಆಹಾರದ ಟೋಕನ್ಗಳು ಮಾತ್ರ ಕರಾರುವಾಕ್ಕಾಗಿ ಖರ್ಚಾಗುತ್ತಿವೆ . ಗ್ರಾಹಕರ ಸಂಖ್ಯೆ 50 ಇದ್ದರೂ 500 ಸಂಖ್ಯೆಯನ್ನು ಬರೆಯಲಾಗುತ್ತಿದೆ. 100 ಜನ ಊಟ ಮಾಡಿದರೂ 500 ಎಂದು ನಮೂದಿಸಲಾಗುತ್ತಿದೆ. ಹೀಗೆ ಪ್ರತಿದಿನ ಒಂದು ಕ್ಯಾಂಟೀನ್ನಿಂದ 1500 ಗ್ರಾಹಕರ ಲೆಕ್ಕ ತೋರಿಸಿ ಅದಕ್ಕೆ ತಕ್ಕಂತೆ ಬಿಲ್ ಮಾಡಲಾಗುತ್ತಿದೆ. ನಿಜವಾದ ಫಲಾನುಭವಿಗಳೆಷ್ಟು ಎಂಬುದು ಕ್ಯಾಂಟೀನ್ಗಳ ಏಜೆನ್ಸಿಯವರಿಗೆ ಮಾತ್ರ ಗೊತ್ತು. ಈ ಕರಾಮತ್ತು ನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿಲ್ಲವೇನೆಂದಲ್ಲ”.
ತುಮಕೂರು ನಗರದಲ್ಲಿರುವ ನಾಲ್ಕು ಕ್ಯಾಂಟೀನ್ಗಳ ಪೈಕಿ ನಗರ ಪಾಲಿಕೆ ಬಳಿಯಿರುವ ಕ್ಯಾಂಟೀನ್ಗೆ ಸ್ವಲ್ಪ ಮಟ್ಟಿನ ನಿರೀಕ್ಷಿತ ಗ್ರಾಹಕರು ಬರುವ ಸಾಧ್ಯತೆಗಳಿವೆ. ನಗರ ಕೇಂದ್ರಿತ ಕ್ಯಾಂಟೀನ್ ಇದಾಗಿರುವುದರಿಂದ ಇಲ್ಲಿ ಕ್ಯಾಂಟೀನ್ ಉಪಯೋಗ ಬೇರೆಲ್ಲಾ ಕಡೆಗಳಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನದಿದೆ. ಆದರೆ ಪ್ರತಿ ದಿನ 1500 ಗ್ರಾಹಕರು ಬಂದು ಹೋಗುತ್ತಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.
ಇತರೆ ಕಡೆಗಳಲ್ಲಿಯೂ ಅದೇ ಸಂಖ್ಯೆ ಇಲ್ಲಿಯೂ ಅದೇ ಸಂಖ್ಯೆಯ ಟೋಕನ್ಗಳು ಖರ್ಚಾಗುತ್ತಿವೆ ಎಂದರೆ ಯಾರಿಗಾದರೂ ಇದನ್ನು ನಂಬಲು ಸಾಧ್ಯವುಂಟೆ? ಭಾನುವಾರವೂ ಅದೇ ಸಂಖ್ಯೆಯ ಟೋಕನ್ಗಳು ಖರ್ಚಾಗಿರುತ್ತವೆ. ಹಾಗಾದರೆ ಪ್ರತಿದಿನ ನಿಗದಿತ ಸಂಖ್ಯೆಯ ಗ್ರಾಹಕರು ಬರುತ್ತಲೇ ಇರುವರೆ? ಎಂದಿಗೂ ಕಡಿಮೆ ಗ್ರಾಹಕರು ಬಂದಿರಲು ಸಾಧ್ಯವಿಲ್ಲವೇ? ಇಂತಹ ಪ್ರಶ್ನೆಗಳು ಈಗ ಎದುರಾಗುತ್ತಿವೆ.
ಕ್ಯಾಂಟೀನ್ ನಡೆಸುವ ಏಜೆನ್ಸಿಯವರು ನಿಜವಾದ ಲೆಕ್ಕವನ್ನು ಪ್ರತ್ಯೇಕವಾಗಿ ತಮ್ಮ ಕಡೆ ಇಟ್ಟುಕೊಳ್ಳುತ್ತಾರೆ. ಮತ್ತೊಂದು ಲೆಕ್ಕವನ್ನು ನಗರ ಪಾಲಿಕೆ ಅಧಿಕಾರಿಗಳಿಗೆ ನೀಡುತ್ತಾ ಬಂದಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ಸುಮಾರು 12 ರಿಂದ 13 ಲಕ್ಷ ರೂ.ಗಳವರೆಗೆ ನಗರ ಪಾಲಿಕೆ ಹಣ ಖರ್ಚಾಗುತ್ತಿದೆ. ಇಷ್ಟು ಹಣ ಬಡವರ ಅನ್ನಕ್ಕೆ ಹೋಗುತ್ತಿದೆಯೋ ಅಥವಾ ಮಧ್ಯವರ್ತಿಗಳ ಪಾಲಾಗುತ್ತಿದೆಯೋ ಎಂಬುದರ ಬಗ್ಗೆ ತನಿಖೆ ನಡೆದರೆ ಅಲ್ಲಿನ ಒಳಹುಳುಕುಗಳು ಬಟಾ ಬಯಲಾಗುತ್ತವೆ.
ಮಹಾನಗರ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಆವರಣದಲ್ಲಿಯೇ ಪ್ರತಿನಿತ್ಯ ಅಡುಗೆ ತಯಾರಿಸಿ ನಗರದ ನಾಲ್ಕು ಕ್ಯಾಂಟೀನ್ಗಳಿಗೆ ರವಾನೆ ಮಾಡಲಾಗುತ್ತದೆ. ಪ್ರತಿಯೊಂದು ಕ್ಯಾಂಟೀನ್ಗಳಲ್ಲೂ ಒಟ್ಟು 1500 ಟೋಕನ್ಗಳನ್ನು ನೀಡಲಾಗುತ್ತದೆ. ಒಟ್ಟು 5,500 ಟೋಕನ್ಗಳಲ್ಲಿ ಕಳೆದ 15 ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಈಗ 5,250 ಟೋಕನ್ಗಳವರೆಗೆ ನೀಡಲಾಗುತ್ತಿದೆ. ನಾಲ್ಕೂ ಕ್ಯಾಂಟೀನ್ಗಳಿಗೂ ಒಬ್ಬೊಬ್ಬ ಆರೋಗ್ಯ ನಿರೀಕ್ಷಕರಿದ್ದು, ಪ್ರತಿನಿತ್ಯ ಅವರು ಪರಿಶೀಲನೆ ಮಾಡುತ್ತಾರೆ. ಆಗಾಗ್ಗೆ ಆರೋಗ್ಯಾಧಿಕಾರಿ ನಾಗೇಶ್ಕುಮಾರ್ ಅವರು ಕೂಡ ಪರಿಶೀಲನೆ ನಡೆಸುತ್ತಾರೆ.
ನಾಗೇಶ್, ವ್ಯವಸ್ಥಾಪಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
