ಹಾಸನ
ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಸೇರಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರವಾಗಿ ತಂದೆ, ಮಾಜಿ ಸಚಿವ ಹೆಚ್ಡಿ ರೇವಣ್ಣ ಮರುಕ ವ್ಯಕ್ತಪಡಿಸಿದ್ದಾರೆ. “ಪಾಪ ಪ್ರಜ್ವಲ್ಗೆ ಏನು ಗೊತ್ತಾಗಲ್ಲ, ಅವನು ಒಳ್ಳೆ ಹುಡುಗ. ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ” ಎಂದು ಪ್ರತಿಕಾರದ ಮಾತುಗಳನ್ನು ಆಡಿದ್ದಾರೆ.
ಹಾಸನದ ಆಲೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅವರು ನನ್ನ ಕೈಗೆ ಸಿಗ್ದಲೆ ಎಲ್ಲಿ ಹೋಗುತ್ತಾರೆ. ದೇವೇಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ ಎಂದರು.
ಹಾಸನದಲ್ಲಿ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಅವರನ್ನು ನಾಲ್ಕು ಬಾರಿ ಜನ ಗೆಲ್ಲಿಸಿದ್ದಾರೆ. ಆದರೆ, 2013ರಲ್ಲಿ ಅಲ್ಪಸಂಖ್ಯಾತರಿಂದ ಹೆಚ್ಎಸ್ ಪ್ರಕಾಶ್ ಸೋತರು. 2023ರ ಚುನಾವಣೆಯಲ್ಲಿ ಹಾಸನದಲ್ಲಿ 50 ಸಾವಿರ ಓಟಿಗೆ ಒಂದು ಓಟು ಕಡಿಮೆಯಾದರೆ ರಾಜೀನಾಮೆ ಕೊಡುತ್ತೇನೆ ಅಂಥ ಸವಾಲು ಇತ್ತು.
ಹೀಗಾಗಿ, ನಾನೇ ಹಾಸನ ಕ್ಷೇತ್ರದಿಂದ ನಿಲ್ಲಬೇಕು ಎಂದು ಒತ್ತಾಯ ಬಂತು. ಕೊನೆಗೆ ಸ್ವರೂಪ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಲಾಯ್ತು. ಈ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು ಎಂದು ಹೇಳಿದರು.