ಕೋರ್ಟ್ ನಿಂದ ನ್ಯಾಯ ಸಿಗುತ್ತೆ ಎಂದು ನಂಬಿಕೆ ಇಲ್ಲ : ಪ್ರಜ್ವಲ್ ಪರ ವಕೀಲರವಾದ

ಬೆಂಗಳೂರು: ‘

   ಈ ಕೋರ್ಟ್‌ನಿಂದ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ಯಾಕೆಂದರೆ, ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೂರ್ವಗ್ರಹಪೀಡಿತ ಭಾವನೆ ಹೊಂದಿದ್ದು ನ್ಯಾಯಸಮ್ಮತ ವಿಚಾರಣೆ ನಡೆಸುವ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ’ ಎಂದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲರು ಆರೋಪ ಮಾಡಿದ್ದಾರೆ. 

   ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಆರೋಪ ಎದುರಿಸುತ್ತಿರುವ ಪ್ರಜ್ವಲ್ ಪರ, ಹೈಕೋರ್ಟ್ ವಕೀಲ ಜಿ.ಅರುಣ್, ಪ್ರಕರಣದ ವಿಚಾರಣೆ ನಡೆಸುತ್ತಿರುವ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೇ ಬುಧವಾರ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು.

   ಬೆಳಿಗ್ಗೆ ಪ್ರಕರಣವನ್ನು ವಿಚಾರಣೆಗೆ ಕೂಗಿದಾಗ ಅರುಣ್ ಈ ಕುರಿತ ಆರು ಪುಟಗಳ ಮೆಮೊ ಅನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಆದರೆ, ಇದಕ್ಕೆ ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್ ಮತ್ತು ವಿಶೇಷ ಪ್ರಾಸಿಕ್ಯೂಟ‌ರ್ ಅಶೋಕ್ ಎನ್.ನಾಯಕ್, ‘ಅರ್ಜಿದಾರರು, ಪ್ರಸಕ್ತ ವರ್ಷದ ಜನವರಿ 16ರಿಂದ ಒಂದಲ್ಲಾ ಒಂದು ಕಾರಣಕ್ಕೆ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

   ಏತನ್ಮಧ್ಯೆ, ಆರೋಪಿ ಪರ ವಕೀಲರ ಕೋರಿಕೆಯಂತೆ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಮೆಮೊ ಅನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅವಗಾಹನೆಗೆ ಕಳುಹಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅರ್ಜಿ ಪುರಸ್ಕರಿಸಲು ನಿರಾಕರಿಸಿದ್ದರಿಂದಾಗಿ, ಅರ್ಜಿದಾರರ ಪರ ವಕಾಲತ್ತಿನಿಂದ ತಾವು ನಿವೃತ್ತಿ ಆಗುತ್ತಿರುವುದಾಗಿ ಘೋಷಿಸಿದ ಅರುಣ್, ನ್ಯಾಯಾಧೀಶರಿಗೆ ಮೆಮೊ ಸಲ್ಲಿಸಿದರು. ಇದರಿಂದಾಗಿ ನ್ಯಾಯಾಧೀಶ ಸಂತೋಷ ಗಜಾನನ ಭಟ್ ವಿಚಾರಣೆಯನ್ನು ಗುರುವಾರಕ್ಕೆ (ಏ.24) ಮುಂದೂಡಿ ಆದೇಶಿಸಿದರು.

Recent Articles

spot_img

Related Stories

Share via
Copy link