ಬೆಂಗಳೂರು:
ಕಾವೇರಿ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೇ ವಾರದಲ್ಲಿ ಕಾವೇರಿ ನೀರಿಗಾಗಿ 2 ಬಂದ್ ಆಗ್ತಿವೆ. ಬೆಂಗಳೂರು ಆಯ್ತು, ನಾಳೆ ಇಡೀ ಕರ್ನಾಟಕ ಬಂದ್ ಆಗಲಿದೆ. ಈ ನಡುವೆ ತಮಿಳು ನಟ ಸಿದ್ದಾರ್ಥ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕ್ಷಮೆ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ನಟ ಸಿದ್ದಾರ್ಥ್ ಅವರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಘಟನೆಯನ್ನು ತಪ್ಪು ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ ಹೇಳಿರುವುದಾದರೂ ಏನು ಎಂದು ನೋಡಿದರೆ “ಕಾವೇರಿ ನಮ್ಮದು, ಹೌದು ನಮ್ಮದೇ. ಆದರೆ ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೆ, ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ. ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.
ಕಾವೇರಿ ವಿವಾದ ನಡುವೆ ಇಂದು ಬೆಂಗಳೂರಿನಲ್ಲಿ ತಮ್ಮ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದ ನಟ ಸಿದ್ದಾರ್ಥ್ ಆಗಮಿಸಿದ್ದರು. ಮಲ್ಲೇಶ್ವರದ SRV ಥಿಯೇಟರ್ ನಲ್ಲಿ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ಸುದ್ಧಿಗೋಷ್ಠಿ ಕರೆಯಲಾಗಿತ್ತು. ಆದರೆ ಈ ವೇಳೆ ಕನ್ನಡಪರ ಸಂಘಟನೆಯ ಸದಸ್ಯರು ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಿಂದ ನಟ ಹೊರ ನಡೆದಿದ್ದರು.
#ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ… https://t.co/O2E2EW6Pd0
— Prakash Raj (@prakashraaj) September 28, 2023
ಈ ಘಟನೆಗೆ ಸಂಬಂಧ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ನೆಟ್ಟಿಗರೊಬ್ಬರು ಹಂಚಿಕೊಂಡಿದ್ದರು. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ ಅವರು ಸಿದ್ಧಾರ್ಥ್ ಬಳಿ ಕ್ಷಮೆ ಕೇಳಿದ್ದಾರೆ.
ಕಾವೇರಿ ಕಿಚ್ಚು ಹೊತ್ತಿ ಉರಿಯುತ್ತಿರೋ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿನಿಮಾ ಪ್ರಚಾರ ಕಾರ್ಯ ಬೇಕಿತ್ತಾ ಎಂದು ಕನ್ನಡ ಪರ ಕಾರ್ಯಕರ್ತರು ಪ್ರಶ್ನಿಸಿ ಕಾವೇರಿ ವಿಚಾರದ ಪರ ಧ್ವನಿ ಎತ್ತುವಂತೆ ಕೇಳಿದ್ದರು. ಸುದ್ದಿಗೋಷ್ಠಿಗೆ ನಮ್ಮ ವಿರೋಧವಿದೆ ಎಂದ ಕರವೇ ಸ್ವಾಭಿಮಾನಿ ಸೇನೆ ತಿಳಿಸಿದ್ದು, ಮಲ್ಲೇಶ್ವರದ ಥಿಯೇಟರ್ ಒಂದೆ ಕನ್ನಡ ಹೋರಾಟಗಾರರು ಸಿದ್ದಾರ್ಥ್ ಸುದ್ದಿಗೋಷ್ಠಿ ಮಧ್ಯೆ ಪ್ರವೇಶಿಸಿದ್ದರು.
ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನೆ ಸದಸ್ಯರು ಸುದ್ದಿಗೋಷ್ಠಿಗೆ ವಿರೋಧ ವ್ಯಕ್ತಪಡಿಸಿ, ನಾವು ಆರ್ಡರ್ ಮಾಡುತ್ತಿಲ್ಲ, ಮನವಿ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಕಾವೇರಿ ಪರ ಧ್ವನಿ ಎತ್ತಬೇಕು. ಕನ್ನಡ ಚಿತ್ರರಂಗದ ಕಲಾವಿದರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅದೇ ರೀತಿ ನೀವು ಕೂಡ ಕಾವೇರಿ ವಿಚಾರದ ಬಗ್ಗೆ ಮಾತನಾಡಿ ಎಂದು ಹೇಳಿದ್ದರು.
![](https://prajapragathi.com/wp-content/uploads/2023/09/prakash-raj-1.gif)