ಬೆಂಗಳೂರು:
ಥಣಿಸಂದ್ರದ ತಮ್ಮ ಸ್ವತ್ತಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪದೇ ಪದೇ ಅಡ್ಡಿಪಡಿಸುತ್ತಿರುವ ಜೊತೆಗೆ ಮಹಿಳೆ ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಮದರಸ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ಹೊಮ್ಮೆದೇವನಹಳ್ಳಿ ಗೊಟ್ಟಿಗೆರೆಯ ಮಶಿಹಾ ಅಹಮದ್ ಎಂಬುವರು ದೂರು ದಾಖಲಿಸಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ತಮ್ಮ ಸ್ವತ್ತಿಗೆ ರಕ್ಷಣೆ ನೀಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ 2024 ರ ಜೂನ್ 14 ರಂದು ಸಹ ಎಫ್.ಐ.ಆರ್ ದಾಖಲಾಗಿತ್ತು. ಇದೀಗ ಮತ್ತೊಮ್ಮೆ ಶಾಲೆ ಮತ್ತು ಮದರಸಾ ಸಿಬ್ಬಂದಿ ದೂಂಡಾವರ್ತನೆ ತೋರುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಪಿತ್ರಾರ್ಜಿತ ಸೊತ್ತಾದ(ಈಗಿನ ಸಾಮರ್ ಇಂಟರ್ನ್ಯಾಷನಲ್ ಶಾಲೆಯ ಜಾಗ) ಥಣಿಸಂದ್ರದ ಸರ್ವೇ ನಂ.105/3, 105/2, 104/2, 104/3 ರಲ್ಲಿ ಎಂದಿನಂತೆ ನ್ಯಾಯಾಲಯದ ಆದೇಶದಂತೆ ಸ್ವಚ್ಚತೆ ಮಾಡಲು ತೆರಳಿದ ಸಮಯದಲ್ಲಿ ನನ್ನ ಮತ್ತು ನನ್ನ ಹೆಂಡತಿ ಹಾಗೂ ಮಹಿಳಾ ಕಾರ್ಮಿಕ ರನ್ನು ಖಾಲಿದ್ ಮುಷರಫ್ (ಸಾಮರ್ ಇಂಟರ್ ನ್ಯಾಷನಲ್ ಶಾಲೆಯ ಪ್ರಿನ್ಸಪಾಲ್), ಸಿಬ್ಬಂದಿ ಮತ್ತು ಹಾಗೂ ಮದರಸಾ ಹುಡುಗರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವಿಳಾಸ ತಮ್ಮ ಪಿತ್ರಾರ್ಜಿತ ಸ್ವತ್ತಾಗಿದ್ದು, ಇಲ್ಲಿಯೇ ನಾವು ವಾಸವಾಗಿದ್ದೇವೆ. ಸೋಮವಾರ ಬೆಳಗ್ಗೆ 09.30ಕ್ಕೆ ಸ್ವಚ್ಚ ಮಾಡಲು ಪತ್ನಿ ಜುನೇರಾ, ಕೆಲಸಗಾರರ ಜೊತೆ ಸ್ಥಳಕ್ಕೆ ತೆರಳಿದಾಗ ಏಕಾಏಕಿ ನನ್ನನ್ನು ತಳ್ಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲಿಗೆ ಬಂದ ಪತ್ನಿಯ ಮೇಲೂ ಹಲ್ಲೆಗೆ ಯತ್ನಿಸಿದರು. ನಮ್ಮ ಪಾತ್ರೆ, ಅಡುಗೆ ಪರಿಕರಗಳನ್ನು ಆಚೆ ಬಿಸಾಕಿದರು. ತಮ್ಮನ್ನು ರಕ್ಷಿಸಲು ಬಂದ ಕೆಲಗಾರರ ಮೇಲೂ ಹಲ್ಲೆಗೆ ಯತ್ನಿಸಿ ಎಲ್ಲರನ್ನು ಹೊರ ದಬ್ಬಿದ್ದಾರೆ. ನಾನು ಪ್ರಾಣ ಭಯದಿಂದ ನಿರ್ಗಮಿಸಿದೆ. ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ನಮ್ಮ ಮಹಿಳಾ ಕಾರ್ಮಿಕ ರನ್ನು ರಕ್ಷಿಸಿದ್ದಾರೆ.
ಈ ನನ್ನ ಪಿತ್ರಾರ್ಜಿತ ಸ್ವತ್ತನ್ನು ಅನುಭವಿಸಲು, ಸ್ವಚ್ಚತೆಯಿಂದ ಇಟ್ಟುಕೊಳ್ಳಲು ಯಾವುದೇ ನಿರ್ಭಂದ ಇಲ್ಲ ನ್ಯಾಯಾಲಯ [25479/2023] ಆದೇಶಿಸಿದೆ. 6 ತಿಂಗಳಿಂದ ಈ ಸ್ವತ್ತಿನ ಸ್ವಚ್ಛೆತೆಗೆ ತೆರಳಿದಾಗ ಇದೇ ರೀತಿಯಲ್ಲಿ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೂ ಈ ಪ್ರಕರಣವನ್ನು ತಂದಿದ್ದೇನೆ. ಸದರಿ ಶಾಲೆಯವರು ನ್ಯಾಯಾಲಯದಲ್ಲಿ ಡಿಕ್ಲರೇಷನ್ ಸೂಟ್ ಹಾಕಿಕೊಂಡಿದ್ದು, ಆದರೆ ಯಾವುದೇ ಆದೇಶವಾಗಿಲ್ಲ. ಆದ್ದರಿಂದ ತಾವುಗಳು ದಯಮಾಡಿ ನನ್ನ ಪಿತ್ರಾರ್ಜಿತ ಸ್ವತ್ತಿಗೆ ರಕ್ಷಣೆ ನೀಡಬೇಕು ಎಂದು ಮಶಿಹಾ ಅಹಮದ್ ಕೋರಿ ದ್ದಾರೆ.
