ಮಧ್ಯಪ್ರದೇಶ
ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ವಿಕೋಪಕ್ಕೆ ತಲುಪುತ್ತಿದೆ. ಧರ್ಮ ರಾಜಕಾರಣದಿಂದಾಗಿ ಹತ್ಯೆ, ಜಗಳ, ಆಂತರಿಕ ಕಲಹದಿಂದ ಬಾಂಗ್ಲಾದೇಶದಲ್ಲಿ ಅರಾಜಕತೆ ಪರಿಸ್ಥಿತಿ ಇದ್ದು ಜನರು ನಿತ್ಯ ನರಕಯಾತನೆ ಪಡುವಂತಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಯುವ ನಾಯಕನಾದ ದೀಪು ಚಂದ್ರ ದಾಸ್ ಅವರನ್ನು ಕ್ರೂರವಾಹಿ ಹತ್ಯೆ ಮಾಡಲಾಗಿದ್ದು ಅದನ್ನು ಖಂಡಿಸಿ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಹತ್ಯೆ ಬಗ್ಗೆ ಕೋಪ ಗೊಂಡ ಯುವಕರ ತಂಡವು ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಪೋಸ್ಟರ್ಗಳನ್ನು ಮತ್ತು ಧ್ವಜ ಗಳನ್ನು ತುಳಿದ ಘಟನೆ ಛತ್ರಸಾಲ್ ಚೌಕದಲ್ಲಿ ನಡೆದಿದೆ. ಹತ್ಯೆ ಮಾಡಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯುವಕರ ತಂಡವು ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಕೂಡ ಉಪಸ್ಥಿತರಿದ್ದು ಪ್ರತಿಭಟನೆ ವಿಕೋಪಕ್ಕೆ ತಿರುಗದಂತೆ ಎಚ್ಚರಿಕೆ ವಹಿಸಿದರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಡಿಸೆಂಬರ್ 18 ರಂದು ಮೈಮೆನ್ಸಿಂಗ್ನ ಬಲುಕಾದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ ರಾಗಿದ್ದ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಕ್ರೂರವಾಗಿ ಥಳಿಸಿ, ಕೊಂದಿದ್ದ ಘಟನೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಮುಸ್ಲಿಂ ಧರ್ಮದ ಬಗ್ಗೆ ಆತನು ನಿಂಧಿಸಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಕೊಂದು ಸಜೀವ ದಹನ ಮಾಡಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 12 ಜನರನ್ನು ಬಂಧಿಸಿದ್ದಾರೆ. ಹತ್ಯೆ ಬಗ್ಗೆ ಕೋಪಗೊಂಡ ಪ್ರತಿಭಟನಾಕಾರರು ಪ್ರತಿಭಟನೆಯ ಸಂಕೇತವಾಗಿ ಪೋಸ್ಟರ್ಗಳನ್ನು ಮತ್ತು ಧ್ವಜಗಳನ್ನು ತಮ್ಮ ಕಾಲಿನಿಂದ ತುಳಿದು, ಅದರ ಮೇಲೆ ವಾಹನಗಳನ್ನು ಹರಿಸಿ ತುಳಿದು ಹಾಕಿದರು.ಪೋಸ್ಟರ್ ಅನ್ನು ರಸ್ತೆಗಳಿಗೆ ಮತ್ತು ಸಾರ್ವಜನಿಕ ಶೌಚಾಲಯದ ಬಾಗಿಲಿಗೆ ಕೂಡ ಅಂಟಿಸಿದ್ದಾರೆ. ಛತ್ರಸಾಲ್ ಚೌಕದ ಛತ್ತರ್ಪುರದ ಬೀದಿಗಳಲ್ಲಿ ಈ ಪ್ರತಿಭಟನೆ ನಡೆದಿದ್ದು ನೂರಾರು ಯುವಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಘೋಷಣೆಗಳನ್ನು ಕೂಗಿದರು.
ಇದೊಂದು ಅಮಾನವೀಯ ಕೃತ್ಯವಾಗಿದ್ದು ಇಂತಹ ಕೃತ್ಯ ಎಸಗಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ನಗರದ ವಿವಿಧ ಭಾಗಗಳಿಂದ ಜನರು ಪ್ರತಿಭಟನೆಯಲ್ಲಿ ಸೇರಿಕೊಂಡರು. ಪ್ರತಿಭಟನೆಯ ಉದ್ದಕ್ಕೂ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಪ್ರತಿಭಟನಾಕಾರರ ಜೊತೆಗೆ ಇದ್ದು ಕಾನೂನು ಸುವ್ಯವಸ್ಥೆ ಹದಗೆಡದಂತೆ ಏಚ್ಚರ ವಹಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಈ ಬಗ್ಗೆ ವರದಿಯಾಗಿದೆ.
ಬಾಂಗ್ಲಾದೇಶದ ಪ್ರತಿಭಟನೆ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ನೆಟ್ಟಿಗರು ನಾನಾತರನಾಗಿ ಕಾಮೆಂಟ್ ಮಾಡಿದ್ದಾರೆ. ದೇಶದ ಶಾಂತಿ ಸುವ್ಯವಸ್ಥೆ ಸರಿಯಾಗಿರಬೇಕಾದರೆ ಜನರು ಸೌಹಾರ್ದ ಯುತವಾಗಿ ನಡೆದುಕೊಳ್ಳಬೇಕು. ಧರ್ಮ ಎಂಬ ಕಾರಣಕ್ಕೆ ಹೊಡೆದಾಡಿಕೊಳ್ಳುವ ಬದಲು ಪರಸ್ಪರ ಪ್ರೀತಿ , ವಿಶ್ವಾಸದಿಂದ ಇರಲು ಕಲಿಯಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.








