ಲಖನೌ:
ಉತ್ತರ ಪ್ರದೇಶದ ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ ಇಂದು ಮುಂಜಾನೆ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಪ್ರಯಾಗ್ರಾಜ್ನ ಮುಖ್ಯ ರಸ್ತೆಯ ಸೆಕ್ಟರ್-2ರ ಬಳಿ ನಿಲ್ಲಿಸಿದ್ದ ಎರಡು ಕಾರುಗಳು ಬೆಂಕಿಗಾಹುತಿಯಾಗಿವೆ.ಆದರೆ ಯಾವುದೇ ಅಪಾಯ ಕಂಡುಬಂದಿಲ್ಲ ಎನ್ನಲಾಗಿದೆ.
ಬೆಂಕಿ ಅವಘಡದ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ ಬೆಂಕಿ ನಂದಿಸಿ ಹೆಚ್ಚಿನ ಅಗ್ನಿ ದುರಂತವನ್ನು ತಪ್ಪಿಸಿದೆ. ಈ ಅವಘಡದಲ್ಲಿ ಎರಡೂ ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಸುತ್ತಮುತ್ತಲಿನ ವಾಹನಗಳನ್ನು ತೆರವುಗೊಳಿಸಲಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಭಾನುವಾರ (ಜ.19) ಮಹಾ ಕುಂಭಮೇಳದ ಟೆಂಟ್ನಲ್ಲಿ ಅಡುಗೆ ತಯಾರಿಸುವ ವೇಳೆ ಸಿಲಿಂಡರ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಸುಮಾರು ಐವತ್ತು ಟೆಂಟ್ ಗಳು ಬೆಂಕಿಗಾಹುತಿಯಾಗಿತ್ತು.
ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಯಲ್ಲಿ ಶುಕ್ರವಾರ(ಜ.24) ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದು, ಇತರೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲಾ ಪೊಲೀಸರ ಪ್ರಕಾರ, ಜವಹರ್ನಗರದಲ್ಲಿ ಇರುವ ಕಾರ್ಖಾನೆಯ ಎಲ್ಟಿಪಿ ಘಟಕದಲ್ಲಿ ಮಧ್ಯಾಹ್ನ ತೀವ್ರ ಸ್ಫೋಟ ಸಂಭವಿಸಿದೆ. ಆ ಸಂದರ್ಭದಲ್ಲಿ 13–14 ಸಿಬ್ಬಂದಿ ಇದ್ದರು.
ಸ್ಫೋಟದ ತೀವ್ರತೆಗೆ ಘಟಕದ ಛಾವಣಿ ಪೂರ್ಣ ಕುಸಿದಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಯಿತು. ಸ್ಫೋಟಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಥಳದಲ್ಲಿಯೇ ಎಂಟು ಜನರು ಸಾವನ್ನಪ್ಪಿದ್ದು, ಇತರೆ ಏಳು ಜನರು ಗಾಯಗೊಂಡಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ಬೆಳಗ್ಗೆ ಜವಾಹರ್ ನಗರದಲ್ಲಿನ ರಕ್ಷಣಾ ಇಲಾಖೆ ಕಾರ್ಖಾನೆಯ ಘಟಕವೊಂದರ ಮಾಳಿಗೆ ಕಳಚಿ ಬಿದ್ದಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೊಟ್ಲೆ ತಿಳಿಸಿದ್ದಾರೆ. ಅವಶೇಷಗಳ ಅಡಿ ಇನ್ನೂ 7 ಜನ ಸಿಲುಕಿದ್ದಾರೆ. ಅವರನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆದಿದೆ ಎಂದು ಹೇಳಿದ್ದಾರೆ.
