ಬೆಂಗಳೂರು:

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶುಕ್ರವಾರ ಅಕಾಲಿಕ ಮಳೆ ಸುರಿದಿದೆ. ದಿಢೀರ್ ಸುರಿದ ಮಳೆಯಿಂದ ಉತ್ತರ ಕನ್ನಡ ಜಿಲ್ಲೆ ಮಾರಿಕಾಂಬಾ ದೇವಿ ಜಾತ್ರೆ ಅಸ್ತವ್ಯಸ್ತವಾಗಿದೆ. ಭಾರಿ ಮಳೆ, ಗಾಳಿಗೆ ದೇವಿಯ ಗದ್ದುಗೆ ಚಪ್ಪರದ ಮಹಾದ್ವಾರ ವಾಲಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.ಜಾತ್ರೆ ಅಂಗವಾಗಿ ಹಾಕಿದ್ದ ಬಹುತೇಕ ಅಂಗಡಿಮುಂಗಟ್ಟುಗಳ ಛಾವಣಿ ಹಾರಿ ಹೋಗಿವೆ.
ಅಮ್ಯೂಸ್ವೆುಂಟ್ ಪಾರ್ಕ್ನಲ್ಲಿನ ಜೈಂಟ್ ವ್ಹೀಲ್ನ ಐದಾರು ತೊಟ್ಟಿಲುಗಳು ಕಳಚಿ ಬಿದ್ದಿವೆ. ಪಟ್ಟಣದಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ. ಎಲ್ಲ ಅಂಗಡಿಗಳು ಬಂದ್ ಆಗಿವೆ. ಅಕಾಲಿಕವಾಗಿ ಸುರಿದ ಮಳೆಯಿಂದ ವಿವಿಧೆಡೆಯಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರು ಸಂಕಷ್ಟಕ್ಕೀಡಾದರು. ಜಿಲ್ಲೆಯ
ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಜೊಯಿಡಾ ತಾಲೂಕುಗಳಲ್ಲಿಯೂ ಭರ್ಜರಿ ಮಳೆ ಸುರಿದಿದೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರು, ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಲ್ಲಿ ಮಧ್ಯಾಹ್ನ ಜೋರಾಗಿ ಮಳೆ ಸುರಿಯಿತು. ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲಿಯೂ ಸಾಧಾರಣ ಮಳೆಯಾಗಿದೆ.
ಶಾಲಾ ಪಠ್ಯದಲ್ಲಿ ನಟ ಪುನೀತ್ ಜೀವನಗಾಥೆ: ಪ್ರಾಥಮಿಕ ತರಗತಿ ಪುಸ್ತಕದಲ್ಲಿ ದೊಡ್ಮನೆ ಹುಡುಗನ ಯಶೋಗಾಥೆ!
ಮಲೆನಾಡಿನಲ್ಲೂ ಅಬ್ಬರ:
ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಸೊರಬ ತಾಲೂಕು ಉರುಗನಹಳ್ಳಿಯಲ್ಲಿ ಮರಗಳು ನೆಲಕಚ್ಚಿವೆ. ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿ ಪೂಜಿಸಲ್ಪಡುತ್ತಿದ್ದ ಸಿಹಿ ಬೇವಿನ ಮರವೂ ಬಿದ್ದಿದೆ. ಶಿಕಾರಿಪುರ ತಾಲೂಕು ತಾಳಗುಂದ ಹೋಬಳಿಯಲ್ಲಿ ಸುರಿದ ಮಳೆ ಮಾವಿನ ಫಸಲಿಗೆ ಹೊಡೆತ ಕೊಡುವ ಸಾಧ್ಯತೆಗಳಿವೆ.
ತ್ಯಾಗರ್ತಿ ಭಾಗದಲ್ಲಿ ದಿಢೀರ್ ಸುರಿದ ಮಳೆ ರೈತರಲ್ಲಿ ಸಂತಸ ತಂದಿದೆ. ಆದರೆ ಶುಂಠಿ ವ್ಯಾಪಾರಿಗಳಿಗೆ ಕಣದಲ್ಲಿ ಒಣಗಿಸಿದ ಶುಂಠಿ ತೊಯ್ದುಹೋಗಿದ್ದು ಸಾಕಷ್ಟು ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ವರ್ಷಧಾರೆಯಾಗಿದೆ. ಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದಿವೆ. ಕಾಫಿ ಹೂ ಬಿಡಲು ಈ ಮಳೆ ಅನುಕೂಲಕರ ವಾತಾವರಣ ಉಂಟುಮಾಡಿದೆ.
ವಿದ್ಯಾರ್ಥಿನಿಯರು `ಹಿಜಾಬ್’ ಧರಿಸಿ ಪರೀಕ್ಷೆ, ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ : ಸಚಿವ ಬಿ.ಸಿ.ನಾಗೇಶ್
ಕೊಡಗಿನಲ್ಲಿ ವರುಣ ಸಿಂಚನ:
ಕೊಡಗು ಜಿಲ್ಲೆಯ ವಿವಿಧೆಡೆ ವರುಣನ ಸಿಂಚನವಾಗಿದ್ದು, ಮಡಿಕೇರಿ ತಾಲೂಕಿನ ಚೇರಂಬಾಣೆ, ಕಾರುಗುಂದ, ನಾಪೋಕ್ಲು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಚೇರಂಬಾಣೆಯಲ್ಲಿ ಒಂದು ಇಂಚು ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಮಳೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ಒಂದು ಗಂಟೆಗೂ ಕಾಲ ಹೆಚ್ಚು ಮಳೆ ಸುರಿದಿದೆ.
ಸಿಡಿಲಿಗೆ ರೈತ ಬಲಿ:
ಹಾನಗಲ್ಲ ತಾಲೂಕು ಕೊಂಡೋಜಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ರೈತರೊಬ್ಬರು ಮೃತ ಪಟ್ಟಿದ್ದಾರೆ. ರವಿ ನೀಲಪ್ಪ ಬೊಳಮ್ಮನವರ (48) ಮೃತ. ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬಂದು, ಮೇವು ತರಲು ಬಣವೆ ಕಡೆ ಹೋದ ಸಮಯದಲ್ಲಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತರ ಕಣ್ಣುಗಳನ್ನು ದಾನ ಮಾಡುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








