ತುಮಕೂರು:
ಮಳೆ ಬಿಡುವು ಕೊಟ್ಟಿದ್ದರಿಂದ ಕಳೆದ ವಾರ ಕೆಲವು ತರಕಾರಿ, ಸೊಪ್ಪು ಬೆಲೆ ಇಳಿಕೆ ಕಂಡು ಜನರು ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣವಾಗಿದ್ದರು. ಆದರೇ ಈ ವಾರ ಕೆಲ ಕಾಯಿಪಲ್ಲೆ ಮತ್ತು ಸೊಪ್ಪುಗಳ ದರ ದಿಢೀರನೆ ಏರಿಕೆ ಕಂಡಿವೆ. ಬೇಡಿಕೆಗೆ ತಕ್ಕಷ್ಟು ಮಾಲು ಮಾರುಕಟ್ಟೆಗೆ ಪೂರೈಕೆಯಾಗದಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಹಣ್ಣು ಬೆಲೆಯಲ್ಲಿ ಈ ವಾರ ಅಂತಹ ವ್ಯತ್ಯಾಸವೇನೂ ಕಂಡು ಬಂದಿಲ್ಲ. ಆದರೇ ಕೋಳಿ ಮತ್ತು ಅಡುಗೆ ಎಣ್ಣೆ ಬೆಲೆ ಕೊಂಚ ತಗ್ಗಿದೆ.
ಮತ್ತೆ ಏರಿದ ಸೊಪ್ಪು-ತರಕಾರಿ :
ಕಳೆದವಾರ ಕಡಿಮೆಯಾಗಿದ್ದ ಕೆಲ ತರಕಾರಿ-ಸೊಪ್ಪಿನ ಬೆಲೆಗಳು ಈ ವಾರ ಏರಿಕೆಯಾಗಿವೆ. 25-30 ರೂ. ಗೆ ಸಿಗುತ್ತಿದ್ದ ಈರುಳ್ಳಿ ಬೆಲೆ ಕೆ.ಜಿ. ಈ ವಾರ 36-40 ರೂ. ಗೆ ಏರಿಕೆಯಾಗಿದೆ. ಟೊಮ್ಯಾಟೊ ಕೊಂಚ ಕಡಿಮೆಯಾಗಿದ್ದು, ಸಾಧಾರಣ ಕೆ.ಜಿ.ಗೆ 40 ರೂ. ಉತ್ತಮ 50 ರೂ. ನಂತೆ ಮಾರಾಟವಾಗುತ್ತಿದೆ.
ಆಲೂಗಡ್ಡೆ-25 ರೂ., ಮೂಲಂಗಿ-40 ರೂ., ಸೀಮೆ ಬದನೆಕಾಯಿ-25 ರೂ., ಬೆಂಡೆಕಾಯಿ-50 ರೂ., ಪಟ್ಲಿಕಾಯಿ-50 ರೂ., ಹೀರೆಕಾಯಿ-50 ರೂ. ನಂತೆ ಮಾರಾಟವಾಗುತ್ತಿದೆ. ಸೊಪ್ಪುಗಳ ಬೆಲೆ ದುಬಾರಿಯಾಗಿದ್ದು, ನಾಟಿ ಕೊತ್ತಂಬರಿ-60 ರೂ., ಹೈಬ್ರಿಡ್ ಕೊತ್ತಂಬರಿ-40 ರೂ., ಸಬ್ಸಿಗೆ-100 ರೂ., ದಂಟು-100 ರೂ., ಪಾಲಕ್-80 ರೂ., ಚಕ್ಕೊತ್ತಾ-150 ರೂ. ನಂತೆ ಮಾರಾಟವಾಗುತ್ತಿವೆ.
ದ್ರಾಕ್ಷಿ ಸೀಸನ್ ಆರಂಭ :
ಸದ್ಯ ಕಿತ್ತಳೆ ಹಣ್ಣಿನ ಸೀಸನ್ ಮುಗಿಯುವ ಹಂತದಲ್ಲಿದ್ದು, ದ್ರಾಕ್ಷಿ ಹಣ್ಣಿನ ಸೀಸನ್ ಆರಂಭವಾಗಿದೆ. ರುಚಿಕರವಾದ ಸೀಡ್ಲೆಸ್ ದ್ರಾಕ್ಷಿ ಮಾರುಕಟ್ಟೆಗೆ ಬಂದಿದ್ದು, ಹಸಿರು ದ್ರಾಕ್ಷಿ ಕೆ.ಜಿ. 100-120 ರೂ., ಕಪ್ಪು ದ್ರಾಕ್ಷಿ- 80-100 ರೂ. ನಂತೆ ಮಾರಾಟವಾಗುತ್ತಿದೆ. ಸೀಸನ್ ಮುಗಿಯುತ್ತಿರುವುದರಿಂದ ನಾಟಿ ಕಿತ್ತಳೆ ಹಣ್ಣಿನ ಬೆಲೆ ಕೆ.ಜಿ.ಗೆ 40 ರಿಂದ 50-60 ರೂ. ಗೆ ಏರಿಕೆಯಾಗಿದೆ.
ಮಿಕ್ಕಂತೆ ಬಾಳೆಹಣ್ಣಿನ ದರ ಕಡಿಮೆ ಇದ್ದರೆ ಸೇಬು, ದಾಳಿಂಬೆ ಹಣ್ಣುಗಳ ಬೆಲೆಗಳು ಏರಿಕೆಯಾಗಿವೆ. ಸೀಸನ್ ಇರುವುದರಿಂದ ಮುಂದಿನ ದಿನಗಳಲ್ಲಿ ದ್ರಾಕ್ಷಿ ದರ ಮತ್ತಷ್ಟು ಇಳಿಯಲಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್ನ ಮಾಲೀಕ ವೆಂಕಟೇಶ್.
ತಗ್ಗಿದ ಖಾದ್ಯ ತೈಲ :
ದುಬಾರಿಯಾಗಿದ್ದ ಅಡುಗೆ ಎಣ್ಣೆ ಬೆಲೆ ಕೊಂಚ ಇಳಿದಿದ್ದು, ಪ್ರತಿ ಕೆ.ಜಿ.ಗೆ 10-15 ರೂ.ನಷ್ಟು ಬೆಲೆ ಕಡಿಮೆಯಾಗಿದೆ. ಫಾಮಾಯಿಲ್-130 ರೂ. ನಿಂದ 115 ರೂ.ಗೆ, ಕಡ್ಲೆಕಾಯಿ ಎಣ್ಣೆ-150 ರೂ.ನಿಂದ 140 ರೂ. ಗೆ ಹಾಗೂ ಸೂರ್ಯಕಾಂತಿ ಎಣ್ಣೆ-145 ರೂ.ನಿಂದ 135 ರೂ.ಗೆ ದರ ಇಳಿದಿದೆ.
ಚಿಕನ್ ಕೊಂಚ ಇಳಿಕೆ :
ಕೋಳಿ ಮಾಂಸದ ಬೆಲೆ ಕೊಂಚ ಕಡಿಮೆಯಾಗಿದ್ದು, ಕ್ರಿಸ್ಮಸ್ ಮತ್ತು ನೂತನ ವರ್ಷಾಚರಣೆ ಆಚರಿಸುವವರಿಗೆ ತುಸು ಸಮಾಧಾನ ತಂದಿದೆ. ಬ್ರಾಯ್ಲರ್ ಕೆ.ಜಿ.ಗೆ 130 ರೂ. ನಿಂದ 110 ರೂ. ಗೆ ಇಳಿದಿದ್ದು, ಕೆ.ಜಿ.ಗೆ 20 ರೂ. ಕಡಿಮೆಯಾಗಿದೆ.
ಫಾರಂ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 120 ರೂ. ಮೊಟ್ಟೆ 1 ಡಜನ್ ಗೆ 68 ರೂ. ನಂತೆ ಮಾರಾಟವಾಗುತ್ತಿದೆ. ಸಂಕ್ರಾಂತಿ ಹಬ್ಬ ಕಳೆಯುವವರೆಗೆ ಕೋಳಿ ಮಾಂಸ ಹಾಗೂ ಮೊಟ್ಟೆ ಬೆಲೆ ಏರಿಕೆಯಾಗಲ್ಲ ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.
ಎಟುಕದ ಅವರೆಕಾಯಿ :
ಪ್ರತಿ ವರ್ಷವೂ ಡಿಸೆಂಬರ್ ಅಂತ್ಯಕ್ಕೆ ಕೆ.ಜಿ.ಗೆ 20-30 ರೂ. ನಂತೆ ಮಾರಾಟವಾಗುತ್ತಿದ್ದ ಅವರೆಕಾಯಿ ಈ ವರ್ಷ ಡಿಸೆಂಬರ್ ಮುಗಿಯುತ್ತಾ ಬಂದರೂ ಕೆ.ಜಿ.ಗೆ 60 ರೂ. ನಂತೆ ಮಾರಾಟವಾಗುತ್ತಿದ್ದು, ಬೆಲೆ ಇಳಿಯದೆ ಜನ ಸಾಮಾನ್ಯರಿಗೆ ಎಟುಕದಾಗಿದೆ.
ಅಕಾಲಿಕ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಈ ವರ್ಷ ಹೆಚ್ಚು ಬೆಳೆ ಬಂದಿಲ್ಲ. ಸ್ಥಳೀಯವಾಗಿಯೂ ಅವರೆಕಾಯಿ ಸಿಗುತ್ತಿಲ್ಲ. ಹುಣಸೂರಿನಿಂದ ಪ್ರತಿ ದಿನ 800-1,000 ಚೀಲ ಅವರೆಕಾಯಿ ಅಂತರಸನಹಳ್ಳಿ ಮಾರುಕಟ್ಟೆಗೆ ಬರುತ್ತಿದ್ದು, ಪ್ರತಿ ವರ್ಷ ಪೂರೈಕೆಯಾಗುತ್ತಿದ್ದ ಒಟ್ಟು ಅವರೆಕಾಯಿಯಲ್ಲಿ ಈ ವರ್ಷ ಶೇ.70 ರಷ್ಟು ಮಾತ್ರ ಮಾರುಕಟ್ಟೆಗೆ ಬಂದಿದೆ. ಹಾಗಾಗಿ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಹೆಚ್ಚಿದೆ. ಮುಂದೆಯೂ ಅವರೆಕಾಯಿ ಬೆಲೆ ಇಳಿಯುವ ಲಕ್ಷಣಗಳಿಲ್ಲ ಎನ್ನುತ್ತಾರೆ ಸಗಟು ತರಕಾರಿ ವರ್ತಕ ವಾಸು.
ಕುಸಿದ ಹುಣಸೆ ದರ, ರೈತ ಆತಂಕ : ಅಕಾಲಿಕ ಮಳೆಗೆ ರಾಗಿ, ಧಾನ್ಯ, ಇನ್ನಿತರ ಬೆಳೆಗಳು ಹಾಳಾಗಿದ್ದು ರೈತ ಸಮುದಾಯ ಆತಂಕದಲ್ಲಿದೆ. ಈ ನಡುವೆ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಹುಣಸೆಹಣ್ಣಿನ ದರ ಕುಸಿತ ಕಂಡಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವರ್ಷ ಕ್ವಿಂಟಾಲ್ಗೆ 25 ರಿಂದ 35 ಸಾವಿರದವರೆಗೆ ಉತ್ತಮ ಧಾರಣೆ ಇದ್ದ ಹುಣಸೆಹಣ್ಣಿನ ಬೆಲೆ ಈ ವರ್ಷ ಪ್ರಸ್ತುತ ಕ್ವಿಂಟಾಲ್ಗೆ 6 ರಿಂದ 8 ಸಾವಿರಕ್ಕೆ ಬೆಲೆ ಇಳಿಕೆಯಾಗಿದೆ. ಶೀತಲ ಕೇಂದ್ರಗಳಲ್ಲಿ ಹಿಂದಿನ ವರ್ಷದ ಶೇ.40 ರಷ್ಟು ಹಣ್ಣು ಇನ್ನೂ ದಾಸ್ತಾನು ಇರುವುದು ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದ್ದು, ಹಳೆ ದಾಸ್ತಾನು ಖಾಲಿಯಾದರೆ ಮಾತ್ರ ಈ ವರ್ಷದ ಹುಣಸೆ ಫಸಲಿಗೆ ಬೆಲೆ. ಇಲ್ಲದಿದ್ದರೆ ದರ ಮತ್ತಷ್ಟು ಕುಸಿಯಬಹುದು ಎನ್ನುತ್ತಾರೆ ಮಾರುಕಟ್ಟೆಯ ವ್ಯಾಪಾರಿಗಳು.
ಹಣ್ಣುಗಳ ಧಾರಣೆ
(ಅಂತರಸನಹಳ್ಳಿ ಮಾರುಕಟ್ಟೆ) (ಬೆಲೆ ಕೆ.ಜಿ ರೂ.)
ಸೇಬು 120-140
ದಾಳಿಂಬೆ 120-160
ಮೊಸಂಬಿ 60-80
ನಾಟಿ ಕಿತ್ತಳೆ 50-60
ಸಪೋಟ 40-60
ಏಲಕ್ಕಿ ಬಾಳೆ 35-40
ಪಚ್ಚ ಬಾಳೆ 20
ಪಪ್ಪಾಯ 25
ಕಲ್ಲಂಗಡಿ 20-40
ಕರಬೂಜ 30-60
ಸೀಬೆ 60-80
ಪೈನಾಪಲ್ 50-60
ದ್ರಾಕ್ಷಿ 100-120
ತರಕಾರಿ
(ಬೆಲೆ ಕೆ.ಜಿ ರೂ.) (ಅಂತರಸನಹಳ್ಳಿ ಮಾರುಕಟ್ಟೆ)
ಟೊಮೆಟೊ 40-50
ಈರುಳ್ಳಿ 30-40
ಆಲೂಗಡ್ಡೆ 25-30
ಬೀನ್ಸ್ 70
ಕ್ಯಾರೆಟ್ 60
ಬೀಟ್ರೂಟ್ 50
ಮೂಲಂಗಿ 40
ಗೆಡ್ಡೆಕೋಸು 80
ನುಗ್ಗೆಕಾಯಿ 300
ಬದನೆಕಾಯಿ 50
ಎಲೆಕೋಸು 60-50
ಹೂಕೋಸು 50
ಹಸಿ ಮೆಣಸಿನಕಾಯಿ 80
ಕ್ಯಾಪ್ಸಿಕಂ 70-80
ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 110
ಫಾರಂ 120
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 120-150
ಮೊಟ್ಟೆ (1 ಡಜನ್) 68
ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 15,500
ಗರಿಷ್ಠ 18,000
ಮಾದರಿ 17,600
ಒಟ್ಟು ಆವಕ 1667.10 ಕ್ವಿಂಟಾಲ್
(3877 ಚೀಲ)
-ಚಿದಾನಂದ್ ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
