ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬಳು ಮದುವೆಯಾಗಿ 20 ದಿನ ಕಳೆಯುವುದರೊಳಗೆ ಆಕೆಯ ದಾಂಪತ್ಯಕ್ಕೆ ಆಕೆಯ ಮಾಜಿ ಪ್ರಿಯತಮನೇ ವಿಲನ್ ಆಗಿದ್ದಾನೆ. ಪ್ರಿಯತಮನ ಕೃತ್ಯದಿಂದ ಆಕೆಯನ್ನು ಗಂಡ ಮನೆಯಿಂದ ಹೊರಹಾಕಿದ್ದು, ಇದೀಗ ನೊಂದ ಯುವತಿ ಇದಕ್ಕೆಲ್ಲಾ ಪ್ರಿಯಕರನೇ ಕಾರಣ ಎಂದು ಆತನ ಮನೆಯ ಎದುರು ಧರಣಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿ ನಡೆದಿದೆ.
ಅವರಿಬ್ಬರು 4 ವರ್ಷ ಪರಸ್ಪರ ಪ್ರೀತಿಸಿದರೂ ಮದುವೆಯಾಗಲು ಜಾತಿ ಅಡ್ಡ ಬಂದಿತ್ತು. ಕೊನೆಗೆ ಪ್ರಿಯತಮೆ ಮನೆಯವರು ತೋರಿಸಿದ ಯುವಕನನ್ನು ಮದುವೆಯಾಗಿ ಗಂಡನ ಜೊತೆ ಹೋಗಿದ್ದಳು. ಆದರೆ ಮದುವೆಯಾಗಿ 20 ದಿನ ಕಳೆಯುವುದರೊಳಗೆ ಆಕೆಯ ಪ್ರಿಯಕರ ವಿಲನ್ ಆಗಿದ್ದು, ತಾವಿಬ್ಬರು ಜೊತೆಯಾಗದ್ದಾಗ ಮಾಡಿಕೊಂಡಿದ್ದ ಖಾಸಗಿ ವಿಡಿಯೋಗಳನ್ನು ಆಕೆಯ ಗಂಡನಿಗೆ ಕಳುಹಿಸಿದ್ದಾನೆ. ಇದರಿಂದ ಕೆರಳಿ ಕೆಂಡವಾದ ಆಕೆಯ ಗಂಡ, ತಾನು ಕಟ್ಟಿದ್ದ ತಾಳಿ ಕಿತ್ತುಕೊಂಡು ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ನೊಂದ ಯುವತಿ ಪ್ರಿಯಕರನ ಮನೆಯ ಮುಂದೆ ಬಂದು ಕುಳಿತು ಧರಣಿ ನಡೆಸಿದ್ದಾಳೆ.
ಪಲಿಚೆರ್ಲು ಗ್ರಾಮದ ಅಂಬರೀಶ್, ಬೇರೆ ಜಾತಿಯಾಗಿದ್ರೂ ಕೆಂಪನಹಳ್ಳಿ ಗ್ರಾಮದ ಯುವತಿಯನ್ನು 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ. ಇಬ್ಬರು ಜೊತೆ ಜೊತೆಯಾಗಿ ಫೋಟೋ ವಿಡಿಯೋ ತೆಗೆಸಿಕೊಂಡಿದ್ದರಂತೆ. ಆದ್ರೆ ಈ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಯುವತಿಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆ. ಈ ವೇಳೆ ಪ್ರಿಯಕರ ಸಹ ಬೇರೆ ಬೇರೆ ಜಾತಿ ಇದ್ದದ್ದರಿಂದ ಸಮಸ್ಯೆ ಬೇಡ, ನೀನು ಮನೆಯವರು ನೋಡಿದವನನ್ನು ಮದುವೆಯಾಗುವಂತೆ ಹೇಳಿದ್ದನಂತೆ. ಹೀಗಾಗಿ ಪ್ರೇಮಾ ಬೇರೆ ಯುವಕನನ್ನು ಮದುವೆ ಮಾಡಿಕೊಂಡಿದ್ದಳು.
ಅಷ್ಟರಲ್ಲೇ ಪ್ರಿಯಕರ ಅಂಬರೀಶ್ ಮತ್ತು ಇನ್ನೂ ಕೆಲವರು ಸೇರಿ ಆಕೆಯ ಹಳೆಯ ಫೋಟೋ ವಿಡಿಯೊಗಳನ್ನು ಗಂಡನಿಗೆ ಕಳುಹಿಸಿದ್ದಾರಂತೆ. ಇದರಿಂದ ರೊಚ್ಚಿಗೆದ್ದ ಗಂಡ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಹೀಗಾಗಿ ನೊಂದ ಯುವತಿ ಪ್ರಿಯಕರ ಅಂಬರೀಶ್ ಮನೆ ಎದುರು ಧರಣಿ ನಡೆಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಳೆ. ಅಂಬರೀಶ್ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.








