ರಾಮನಗರ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಗೆ ಸಂಕಷ್ಟ ಶುರುವಾಗಿದೆ. ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿದ ಆರೋಪದಡಿ ಸಿಪಿ ಯೋಗೇಶ್ವರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ಬುಧವಾರ ನಡೆದಿದೆ.
ಸಿಪಿ ಯೋಗೇಶ್ವರ ಅವರ ಮೊದಲ ಪತ್ನಿ ಮತ್ತು ಪುತ್ರ ಶ್ರವಣ್ ಅವರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆ ಸಿಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದೆ. ಶ್ರವಣ್ ಹಾಗೂ ಶ್ರವಣ್ ತಾಯಿ ಇಬ್ಬರೂ ಸೇರಿ ಮನೆಯನ್ನು ನಿಶಾಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಮನೆಯಲ್ಲಿ ತನಗೂ ಭಾಗ ಬೇಕು ಎಂದು ಸಿಪಿ ಯೋಗೇಶ್ವರ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಇಷ್ಟೇ ಅಲ್ಲದೇ, “ನಾನು ನನ್ನ ಅಕ್ಕನಿಗೆ ಮನೆ ಗಿಫ್ಟ್ ನೀಡಿಲ್ಲ. ಮನೆಯಲ್ಲಿ ನನಗೂ ಭಾಗ ಬೇಕು” ಅಂತ ಶ್ರವಣ್ ಅವರ ಹೆಸರಿನಲ್ಲಿ ಸಿಪಿ ಯೋಗೇಶ್ವರ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯಲ್ಲಿ ಶ್ರವಣ್ ಅವರ ಸಹಿಯನ್ನು ಸಿಪಿ ಯೋಗೇಶ್ವರ್ ಮಾಡಿದ್ದಾರೆ. ಹೀಗೆ, ಸಿಪಿ ಯೋಗೇಶ್ವರ್ ಪುತ್ರ ಶ್ರವಣ ಅವರ ಸಹಿ ನಕಲು ಮಾಡಿದ್ದಾರೆ.“ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಮನೆಯಲ್ಲಿ ಭಾಗ ಬೇಕು ಅಂತ ನಾನು ಕೇಳಿಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಶ್ರವಣ್ ಹೇಳಿದ್ದಾರೆ.
ಈ ವಿಚಾರವಾಗಿ ಶ್ರವಣ ತಂದೆ ಸಿಪಿ ಯೋಗೇಶ್ವರ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇಬ್ಬರ ಸಂಭಾಷಣೆ ರೆಕಾರ್ಡ್ ಆಗಿದೆ. ಅದರಲ್ಲಿ, ಸಿಪಿ ಯೋಗೇಶ್ವರ್ ಸಹಿ ನಕಲು ಮಾಡಿದ್ದಾನ್ನು ಒಪ್ಪಿಕೊಂಡಿದ್ದಾರೆ. ಸಿಪಿ ಯೋಗೇಶ್ವರ ಮತ್ತು ಶ್ರವಣ್ ಮಾತನಾಡಿರುವ ಆಡಿಯೋ ಸಂಭಾಷಣೆ ವೈರಲ್ ಆಗಿದೆ.
ದೂರವಾಣಿ ಸಂಭಾಷಣೆಯಲ್ಲಿ ಏನಿದೆ?
ಶ್ರವಣ್: ಯಾರೋ ವಕೀಲರು ಕರೆ ಮಾಡಿ, ಆಸ್ತಿ ಸಂಬಂಧಿಸಿದ ದಾಖಲೆ ಕೇಳುತ್ತಿದ್ದಾರೆ. ಸಹಿ ಹೊಂದಾಣಿಕೆಯಾಗುತ್ತಿಲ್ಲ ಎನ್ನುತ್ತಿದ್ದಾರೆ. ನಾನು ಯಾವುದೇ ಆಸ್ತಿ ವಕಾಲತ್ಗೆ ಸಹಿ ಮಾಡಿಲ್ಲ. ಆದ್ರೆ, ಈ ಮಾಡಿದ್ದು ಯಾರು?
ಸಿಪಿವೈ: ಹಿಂದೆ ನೀನೆ ಮಾಡಿದ್ದಿಯಲ್ಲ
ಶ್ರವಣ್: ಇಲ್ಲ ನಾನು ಮಾಡಿಲ್ಲ
ಸಿಪಿವೈ: ಇರಲಿ, ಅವರು ಏನ್ ಹೇಳುತ್ತಾರೆ ಅದನ್ನು ಮಾಡು
ಶ್ರವಣ್: ಆದರೆ ನಾನು ಸಹಿ ಮಾಡಿಲ್ಲ, ಯಾರು ಮಾಡಿದ್ದು?
ಆಸ್ತಿ ಮಾರಾಟವಾಗಬಾರದು ಅಂತ ನಾನೇ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾರೆ. ಇದೇ ವಿಚಾರಕ್ಕೆ ಶ್ರವಣ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಒಂದು ವೇಳೆ, ಬುಧವಾರ ನಡೆಯುವ ವಿಚಾರಣೆಯಲ್ಲಿ ಸಿಪಿ ಯೋಗೇಶ್ವರ ವಿರುದ್ಧದ ಆರೋಪ ಸಾಬೀತಾದರೆ ಬಂಧನವಾಗುವ ಸಾಧ್ಯತೆ ಇದೆ. ಫಲಿತಾಂಶಕ್ಕೂ ಮುನ್ನವೇ ಸಿಪಿ ಯೋಗೇಶ್ವರ ಜೈಲಿಗೆ ಹೋಗುವ ಸಾಧ್ಯತೆ ಇದೆ.








