ತುಮಕೂರು : ಹೋರಾಟ ಹತ್ತಿಕ್ಕುವ ಸರ್ಕಾರದ ಧೋರಣೆಗೆ ಆಕ್ರೋಶ

ತುಮಕೂರು : 

      ಹಿಂದೆ ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿ ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿತ್ತು. ಈಗ ಬಿಜೆಪಿ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸದೆ ಪ್ರತಿಭಟನೆಗಳನ್ನು ನಿಯಂತ್ರಿಸುತ್ತಿದೆ ಎಂದು ರೈತ ಮುಖಂಡರು ಆಪಾದಿಸಿದರು.

      ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ, ದಲಿತ ವಿರೋಧಿ ನೀತಿಗಳನ್ನು ಖಂಡಿಸಿ, ಹರಿಯಾಣ ಮತ್ತು ಪಂಜಾಬ್‍ನಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಮುಖಂಡರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

      ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಗಳು ಪ್ರತಿಭಟನೆ ಹತ್ತಿಕ್ಕುತ್ತಿವೆ ಎಂದು ಕಿಡಿಕಾರಿದರು.

      ಎಐಕೆಎಸ್‍ಸಿಸಿ ಜಿಲ್ಲಾ ಕಾರ್ಯದರ್ಶಿ ಸಿ.ಯತಿರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದನ್ನು ಟೀಕಿಸುವ ಬಿಜೆಪಿ ಈಗ, ತುರ್ತುಪರಿಸ್ಥಿತಿ ಘೋಷಿಸದೆ ಪ್ರತಿಭಟನೆಗಳನ್ನು ಹತ್ತಿಕುವ ಪ್ರಯತ್ನ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಬಿಜೆಪಿ ಸರ್ಕಾರದ ಕ್ರೂರ ನಡೆಗಳು ಜನವಿರೋಧಿಯಾಗಿವೆ ಎಂದು ಹೇಳಿದರು.

      ಬಜೆಪಿ ಸರ್ಕಾರವು ಪರಿಸ್ಥಿತಿಯ ಲಾಭ ಪಡೆದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತರು, ಕಾರ್ಮಿಕರ ವಿರೋಧಿ ನೀತಿಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸಿಗೆ ಕಲಿಸಿದ ಪಾಠವನ್ನು ಬಿಜೆಪಿಗೂ ಕಲಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ದೇಶದ ಜನ ಸರ್ಕಾರದ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಯತಿರಾಜು ಎಚ್ಚರಿಕೆ ನೀಡಿದರು.

      ಕೇಂದ್ರದ ಮೋದಿ ಸರ್ಕಾರ ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಕೊಡುವುದಾಗಿ ಹೇಳಿದೆ. ಇದು ಶೇಕಡ 6ರಷ್ಟು ರೈತರಿಗೆ ಮಾತ್ರವೇ ಅನುಕೂಲವಾಗುತ್ತದೆ. ಉಳಿದ 94ರಷ್ಟು ರೈತರಿಗೆ ಪ್ರಯೋಜನವಾಗುವುದಿಲ್ಲ. ಸರ್ಕಾರ ಬೆಂಬಲ ಬೆಲೆ ನಿಗಧಿ ಮಾಡಿರುವುದು 24ರಷ್ಟು ಬೆಳೆಗಳಿಗೆ ಮಾತ್ರ. ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ ಎಂದು ಹೇಳಿದರು.

      ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು, ದಲಿತರ ಪರವೆಂದು ಹೇಳಿ ಅಧಿಕಾರಕ್ಕೆ ಬಂದವು. ಅಧಿಕಾರ ಭದ್ರ ಮಾಡಿಕೊಮಡ ನಂತರ ರೈತರಿಗೆ, ದಲಿತರಿಗೆ ದ್ರೋಹ ಬಗೆಯುತ್ತಿವೆ. ರೈತರಿಗೆ ಸಂಕಷ್ಟ ತರುವ ನೀತಿಗಳನ್ನು ಜಾರಿಗೆ ತರುತ್ತಿವೆ. ವಿದ್ಯುತ್, ವಿಮಾನ ಮುಂತಾದ ಪ್ರಮುಖ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ. ಬಂಡವಾಳಶಾಹಿಗಳು ರೈತರ ತಲೆ ಮೇಲೆ ಕಾಲಿಟ್ಟು ತುಳಿಯುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಯತಿರಾಜು ಹೇಳಿದರು.

      ಸಿ.ಪಿ.ಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ, ದೇಶದ್ಯಾಂತ ಕಾರ್ಮಿಕರ ಅಖಿಲ ಭಾರತ ಮುಷ್ಕರ ಯಶಸ್ವಿಯಾಗಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಳಿಗಷ್ಟೇ ಆಸಕ್ತಿ ಇರುವುದು ಸರಿಯಲ್ಲವೆಂದರು.

      ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಯೋಗೀಶ್ ಮೆಳೆಕಲ್ಲಹಳ್ಳಿ ಮಾತನಾಡಿ, ರೈತರ ಹೋರಾಟವನ್ನು ಸರ್ಕಾರಗಳು ಲಘುವಾಗಿ ಪರಿಗಣಿಸುವುದನ್ನೇ ನೋಡಿದರೆ ಮಾತಿಗಷ್ಟೇ ರೈತರ ಉದ್ದಾರ ಎನ್ನುವಂತೆ ಆಗಿದೆ. ಕಾಯ್ದೆಗಳು ವಾಪಾಸ್ಸ್ ಪಡೆಯವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

      ಎಐಕೆಎಸ್‍ಸಿಸಿ ಕಾರ್ಯದರ್ಶಿ ಬಿ.ಉಮೇಶ್ ಮಾತನಾಡಿ, ಪ್ರಧಾನಿಯವರು ಕಪ್ಪುಹಣ ಇಲ್ಲದಂತೆ ಮಾಡುತ್ತೇನೆ ಎನ್ನುತ್ತಲೇ ಸುಗ್ರೀವಾಜ್ಞೆಗಳ ಜಾರಿಗೆ ತರುವ ಮೂಲಕ ಕಪ್ಪುಹಣಕ್ಕೆ ಜೀವತುಂಬುತ್ತಿದ್ದಾರೆ. ಚರ್ಚೆಗೆ ಅವಕಾಶ ಕೊಡದೆ ರೈತರ ಅನುಮಾನಗಳನ್ನು ಬಗೆಹರಿಸದೆ ದಾಳಿ ಮಾಡುವ ಪ್ರವೃತ್ತಿ ನಿಲ್ಲಿಸಬೇಕೆಂದರು.

      ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮತ್ತು ಪ್ರಾಂತ ರೈತ ಸಂಘದ ಸಂಚಾಲಕ ಅಜ್ಜಪ್ಪ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘಟನೆಯ ರವೀಶ್, ಅರುಣ್‍ಕುಮಾರ್, ರಂಗನಾಥ ಕೆ, ಅಪ್ಪಾಜಿಗೌಡ ಮತ್ತು ಜಗದೀಶ್ ಸಿ.ಎನ್, ಸತೀಶ್ ಕೋಡಿಹಳ್ಳಿ ಕಲ್ಲೇಶ್ ತಿಪಟೂರು ಬಸವರಾಜು, ಗುಬ್ಬಿ ಜಯರಾಮು ತುಮಕೂರು ಮಂಜುಳ ರತ್ನಮ್ಮ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಯ ಶಂಕರಪ್ಪ ಸುಜಿತ್ ಶಹತಾಜ್, ಲಕ್ಷೀಕಾಂತ್ ವಹಿಸಿದ್ದರು.ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

      ಬಜೆಪಿ ಸರ್ಕಾರವು ಪರಿಸ್ಥಿತಿಯ ಲಾಭ ಪಡೆದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತರು, ಕಾರ್ಮಿಕರ ವಿರೋಧಿ ನೀತಿಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾಂಗ್ರೆಸಿಗೆ ಕಲಿಸಿದ ಪಾಠವನ್ನು ಬಿಜೆಪಿಗೂ ಕಲಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ದೇಶದ ಜನ ಸರ್ಕಾರದ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತಾರೆ.

-ಸಿ.ಯತಿರಾಜು, ಎಐಕೆಎಸ್‍ಸಿಸಿ ಜಿಲ್ಲಾ ಕಾರ್ಯದರ್ಶಿ.

      ಕೇಂದ್ರ, ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಳಿಗಷ್ಟೇ ಆಸಕ್ತಿ ಇರುವುದು ಸರಿಯಲ್ಲ.

-ಸೈಯದ್ ಮುಜೀಬ್, ಸಿ.ಪಿ.ಐ(ಎಂ) ರಾಜ್ಯ ಸಮಿತಿ ಸದಸ್ಯ.

 

      ಪ್ರಧಾನಿಯವರು ಕಪ್ಪುಹಣ ಇಲ್ಲದಂತೆ ಮಾಡುತ್ತೇನೆ ಎನ್ನುತ್ತಲೇ ಸುಗ್ರೀವಾಜ್ಞೆಗಳ ಜಾರಿಗೆ ತರುವ ಮೂಲಕ ಕಪ್ಪುಹಣಕ್ಕೆ ಜೀವತುಂಬುತ್ತಿದ್ದಾರೆ.

-ಬಿ.ಉಮೇಶ್, ಎಐಕೆಎಸ್‍ಸಿಸಿ ಕಾರ್ಯದರ್ಶಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link