ತುಮಕೂರು : ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಪ್ರತಿಭಟನೆ

ತುಮಕೂರು: 

      ‘ಮುಂದಿನ 14 ದಿನಗಳ ಒಳಗೆ ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಕೆಲಸ ನಿಲ್ಲಿಸಿ ಮುಷ್ಕರ ನಡೆಸಲಾಗುವುದು’ ಎಂದು ಮುನ್ಸಿಪಲ್ ಕಾರ್ಮಿಕರು ಎಚ್ಚರಿಸಿದರು .ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸೋಮವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

   ಗುತ್ತಿಗೆ, ಹೊರ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು, ನೀರು ಸರಬರಾಜು ವಿಭಾಗ, ಒಳ ಚರಂಡಿ ಸ್ವಚ್ಛತಾ ಕಾರ್ಮಿಕರು , ವಾಹನ ಚಾಲಕರು ಒಳಗೊಂಡಂತೆ ಎಲ್ಲರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, ‘2022ರ ಜುಲೈ ತಿಂಗಳಲ್ಲಿ ಮುನ್ಸಿಪಲ್ ಕಾರ್ಮಿಕರು ಜಂಟಿಯಾಗಿ ಮುಷ್ಕರ ನಡೆಸಿದ್ದರು. ಈ ಸಮಯದಲ್ಲಿ ರಚಿಸಿದ ಸಮಿತಿಯ ಶಿಫಾರಸುಗಳು ಸರ್ಕಾರದ ಮುಂದಿವೆ. ಅದನ್ನು ಬಹಿರಂಗಗೊಳಿಸಬೇಕು. ಸರ್ಕಾರ ಏಕ ಪಕ್ಷೀಯವಾಗಿ ನಡೆದುಕೊಳ್ಳುವುದು ಸರಿಯಲ್ಲ’ ಎಂದರು.

      ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕಾಯಂ ಮಾಡುವ ತನಕ ಎಲ್ಲ ಕಾರ್ಮಿಕರಿಗೆ ನೇರ ಪಾವತಿಯಡಿ ಸಂಬಳ ನೀಡಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

 

     ವಿವಿಧ ಸಂಘಗಳ ಪದಾಧಿಕಾರಿಗಳಾದ ಕುಮಾರ್, ಪ್ರಕಾಶ್, ಚಂದ್ರಣ್ಣ, ಮಂಜುನಾಥ್, ಇರ್ಫಾನ್, ಶ್ರೀನಿವಾಸ್, ಸಾದಿಕ್ ಪಾಷಾ, ಅಪ್ಸರ್ ಪಾಷಾ, ನಾಗರಾಜು ಭಾಗವಹಿಸಿದ್ದರು.

     ಮೇಯರ್ ಎಂ.ಪ್ರಭಾವತಿ, ಸದಸ್ಯರಾದ ವಿಷ್ಣುವರ್ಧನ್, ನಯಾಜ್ ಅಹ್ಮದ್, ಧರಣೇಂದ್ರ ಕುಮಾರ್, ಆಯುಕ್ತ ಸಿ.ಯೋಗಾನಂದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರ ಸಮಸ್ಯೆ ಆಲಿಸಿದರು.ಈ ವೇಳೆ ಕಾರ್ಮಿಕರ ಪ್ರತಿ ತಿಂಗಳ ಸಂಬಳ ತಡವಾಗುತ್ತಿರುವ ವಿಷಯಕ್ಕಾಗಿ ವಾಗ್ವಾದ ನಡೆಯಿತು. ಸರ್ಕಾರದಿಂದ ಬರಬೇಕಾದ ಸೌಲಭ್ಯ, ಕಾಯಮಾತಿ ವಿಚಾರದಲ್ಲಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಮೇಯರ್ ಪ್ರಭಾವತಿ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ