ಬೆಂಗಳೂರು:

ಮಲ್ಲೇಶ್ವರದ ಸುಬ್ರಹ್ಮಣ್ಯ ನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನ ಮತ್ತು ಸಂಗೊಳ್ಳಿ ರಾಯಣ್ಣ ಉದ್ಯಾನಗಳಲ್ಲಿ ಸ್ಥಳೀಯ ಬಿಜೆಪಿ ಮಂಡಲದ ವತಿಯಿಂದ ದಿವಂಗತ ನಟ ಡಾ.ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಿಜೆಪಿ ಮುಖಂಡ ಮತ್ತು ಚಿತ್ರ ನಿರ್ಮಾಪಕ ಕೆ.ಸುರೇಶ್ ಗೌಡ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಪುನೀತ್ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಮಾತನಾಡಿದ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, `ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರೂ ಅದನ್ನು ಎಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ತುಂಬಾ ಸಂಕೋಚ ಸ್ವಭಾವದ ವ್ಯಕ್ತಿಯಾಗಿದ್ದ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಇರುತ್ತಿದ್ದರು’ ಎಂದು ನೆನಪಿಸಿಕೊಂಡರು.
https://prajapragathi.com/what-is-puneet-raj-kumar-james-heres-the-information/
`ನಾಲ್ಕು ತಿಂಗಳ ಹಿಂದೆ ಅಕಾಲಿಕವಾಗಿ ನಮ್ಮೆಲ್ಲರನ್ನೂ ಅಗಲಿಹೋದ ಪುನೀತ್ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದರು. ಅವರ ಸಮಾಧಿಗೆ ಇಂದಿಗೂ ಸಾವಿರಾರು ಜನರು ಭೇಟಿ ನೀಡುತ್ತಿರುವುದೇ ಅವರ ವ್ಯಕ್ತಿತ್ವ ಎಷ್ಟೊಂದು ದೊಡ್ಡದು ಎನ್ನುವುದನ್ನು ಹೇಳುತ್ತದೆ’ ಎಂದು ಅವರು ಬಣ್ಣಿಸಿದರು.
ತಮ್ಮ ತಂದೆ, ವರನಟ ಡಾ.ರಾಜಕುಮಾರ್ ಅವರಂತೆಯೇ ಮಾದರಿ ವ್ಯಕ್ತಿಯಾಗಿದ್ದ ಪುನೀತ್, ಸಾಮಾಜಿಕ ಕಳಕಳಿಯನ್ನು ಸದಾ ಪ್ರದರ್ಶಿಸುತ್ತಿದ್ದರು. ಅವರ ಈ ಗುಣವೇ ಅವರಿಗೆ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿತ್ತು ಎಂದು ಸಚಿವರು ನುಡಿದರು.
ಪುನೀತ್ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ, ಕೇಕ್ ಕಟ್ ಮಾಡಿದ ನಂತರ, ನೆರೆದಿದ್ದ 3 ಸಾವಿರಕ್ಕೂ ಹೆಚ್ಚು ಜನರಿಗೆ ಸಿಹಿ ಮತ್ತು ಉಪಾಹಾರ ವಿತರಿಸಲಾಯಿತು. ಸರದಿ ಸಾಲಿನಲ್ಲಿ ಬಂದ ಪುನೀತ್ ಅಭಿಮಾನಿಗಳಿಗೆ ಸ್ವತಃ ಸಚಿವರು ಸಿಹಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ಸುರೇಶಗೌಡ, ಯೋಗೀಶ್, ಚಿನ್ನಣ್ಣ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








