ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಪ್ರವಾಸದಲ್ಲಿರುವ ಕತಾರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಮಂಗಳವಾರ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕತಾರ್ ಅಮೀರ್ ಅವರಿಗೆ ಗಾರ್ಡ್ ಆಫ್ ಹಾನರ್ ನೀಡಿ ಸ್ವಾಗತ ಕೋರಲಾಯಿತು. ಕತಾರ್ ಅಮೀರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಸಚಿವರು ಸ್ವಾಗತಿಸಿದರು. ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ದೆಹಲಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಮನ್ಸುಖ್ ಮಾಂಡವಿಯಾ ಮತ್ತು ಪಿ.ಕೆ. ಮಿಶ್ರಾ ಅವರು ಉಪಸ್ಥಿತರಿದ್ದರು.
ವ್ಯಾಪಾರ, ತಂತ್ರಜ್ಞಾನ ಮತ್ತು ಹೂಡಿಕೆಯ ಬಗ್ಗೆ ಉಭಯ ದೇಶಗಳು ಮಾತುಕತೆ ನಡೆಸಿವೆ. ಪ್ರಧಾನಿ ಮೋದಿ ಮತ್ತು ಶೇಖ್ ತಮೀಮ್ ಅವರ ಸಮ್ಮುಖದಲ್ಲಿ, ಭಾರತ ಮತ್ತು ಕತಾರ್, ವ್ಯಾಪಾರ, ಇಂಧನ, ಹೂಡಿಕೆಗಳು, ನಾವೀನ್ಯತೆ, ತಂತ್ರಜ್ಞಾನ, ಆಹಾರ ಭದ್ರತೆ, ಸೇರಿದಂತೆ ಹಲವು ವಿಷಯಗಳ ಮೇಲೆ ಒಪ್ಪಂದವನ್ನು ಮಾಡಿಕೊಂಡಿದೆ. ಉಭಯ ದೇಶಗಳ ನಾಯಕರ ಉಪಸ್ಥಿತಿಯಲ್ಲಿ ಕಾರ್ಯತಂತ್ರದ ಪಾಲುದಾರಿಕೆಯ ಒಪ್ಪಂದದ ದಾಖಲೆಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.
ದ್ವಿಪಕ್ಷೀಯ ಸಭೆಯಲ್ಲಿ ಉಭಯ ದೇಶಗಳ ಸಮಸ್ಯೆ ಕುರಿತು ಅಭಿಪ್ರಾಯ ಹಂಚಿಕೊಳ್ಳಲಾಗಿದೆ. ಆದಾಯದ ಮೇಲಿನ ತೆರಿಗೆ, ದ್ವಿಗುಣ ತೆರಿಗೆಯನ್ನು ತಪ್ಪಿಸುವುದು, ಹಣಕಾಸಿನ ವಂಚನೆ ತಡೆಗಟ್ಟುವ ನವೀಕೃತ ಒಪ್ಪಂದವನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಕತಾರ್ ದೊರೆಯ ಭಾರತ ಭೇಟಿಯಿಂದ ಉಭಯ ದೇಶಗಳ ಬಹುಮುಖಿ ಆಯಾಮದ ಪಾಲುದಾರಿಕೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.
