ಭೋಪಾಲ್:
ಮೇಘಾಲಯದಲ್ಲಿ ನಡೆದ ಹನಿಮೂನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನ ಮೇಲೆ ವ್ಯಕ್ತಿಯೊಬ್ಬರು ಇಂದೋರ್ ವಿಮಾನ ನಿಲ್ದಾಣದಲ್ಲಿ ಹಲ್ಲೆ ನಡೆಸಿದ್ದಾರೆ. ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ಆರೋಪಿಗಳನ್ನು ಶಿಲ್ಲಾಂಗ್ ಪೊಲೀಸರು ಮಂಗಳವಾರ ರಾತ್ರಿ ಮಧ್ಯ ಪ್ರದೇಶದ ಇಂದೋರ್ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ಸುಶೀಲ್ ಲಕ್ವಾನಿ ಎಂದು ಗುರುತಿಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ಆರೋಪಿಗಳನ್ನು ಶಿಲ್ಲಾಂಗ್ ಪೊಲೀಸರು ಮಂಗಳವಾರ ರಾತ್ರಿ ಇಂದೋರ್ ವಿಮಾನ ನಿಲ್ದಾಣದೊಳಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿಯೊಬ್ಬನಿಗೆ ಇಂದೋರ್ ವಿಮಾನ ನಿಲ್ದಾಣದ ಹೊರಗೆ ನಿಂತಿದ್ದ ಸುಶೀಲ್ ಲಕ್ವಾನಿ ಕಪಾಳಮೋಕ್ಷ ಮಾಡಿದ್ದಾರೆ.
ಪೊಲೀಸರು ಆರೋಪಿಯನ್ನು ಕರೆದೊಯ್ಯುತ್ತಿದ್ದಾಗ ತನ್ನ ಲಗೇಜ್ನೊಂದಿಗೆ ಕಾಯುತ್ತಿದ್ದ ಸುಶೀಲ್ ಲಕ್ವಾನಿ ಆರೋಪಿಗಳಲ್ಲಿ ಒಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆಯಿಂದ ತಾವು ತೀವ್ರ ಕೋಪಗೊಂಡಿರುವುದಾಗಿ ಸುಶೀಲ್ ಲಕ್ವಾನಿ ಹೇಳಿದ್ದಾರೆ.
ನಾಲ್ವರು ಆರೋಪಿಗಳಲ್ಲಿ ಯಾರಿಗೆ ಅವರು ಕಪಾಳಮೋಕ್ಷ ಮಾಡಿದ್ದಾರೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಯಾಕೆಂದರೆ ಆರೋಪಿಗಳಿಗೆ ಮುಖಗವಸುಗಳನ್ನು ಹಾಕಲಾಗಿತ್ತು. ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಲಕ್ವಾನಿ, ʼʼಇಂದೋರ್ನ ರಾಜಾ ರಘುವಂಶಿಯನ್ನು ಇವರು ಕೊಂದಿರುವುದು ಕೇಳಿ ತೀವ್ರ ಆಕ್ರೋಶ ಉಂಟಾಗಿದೆ. ಹೀಗಾಗಿ ತಾವು ಒಬ್ಬರಿಗೆ ಹೊಡೆದಿದ್ದೇನೆ. ಪ್ರಕರಣದ ಎಲ್ಲ ಆರೋಪಿಗಳನ್ನು ಗಲ್ಲಿಗೇರಿಸಬೇಕು” ಎಂದು ಅವರು ಹೇಳಿದ್ದಾರೆ.
ಇಂದೋರ್ ನ್ಯಾಯಾಲಯದ ಅನುಮತಿ ಪಡೆದ ಬಳಿಕ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಂಡೋಟಿಯಾ, 12 ಮೇಘಾಲಯ ಪೊಲೀಸ್ ಅಧಿಕಾರಿಗಳ ತಂಡವು ನಾಲ್ವರು ಆರೋಪಿಗಳಾದ ರಾಜ್ ಕುಶ್ವಾಹ, ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಅವರನ್ನು ಶಿಲ್ಲಾಂಗ್ಗೆ ಕರೆದೊಯ್ದಿದೆ.
ರಾಜಾ ರಘುವಂಶಿ ಪತ್ನಿ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ಅನ್ನು ಇಂದೋರ್ಗೆ ಕರೆತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇಘಾಲಯ ಪೊಲೀಸರು ಹೇಳುವಂತೆ ಮಧುಚಂದ್ರಕ್ಕೆಂದು ರಾಜ್ಯಕ್ಕೆ ಹೋಗಿದ್ದ ರಾಜ ರಘುವಂಶಿ (29) ಅವರನ್ನು ಅವರ ಪತ್ನಿ ಸೋನಮ್ (25) ಕೊಲೆ ಮಾಡಿದ್ದಾರೆ. ಅವರು ತಮ್ಮ ಪ್ರಿಯಕರ ರಾಜ್ ಕುಶ್ವಾಹ (20) ಜತೆ ಸೇರಿ ಕೊಲೆಗೆ ಯೋಜನೆ ರೂಪಿಸಿದ್ದರು ಮತ್ತು ಈ ಕೆಲಸಕ್ಕಾಗಿ ಮೂವರು ಕೊಲೆಗಾರರನ್ನು ನೇಮಿಸಿಕೊಂಡಿದ್ದರು.
