ಆಪರೇಷನ್ ಸಿಂದೂರ್‌ನಲ್ಲಿ ಟ್ರಂಪ್ ಆದೇಶಕ್ಕೆ ಶರಣಾದ ಮೋದಿ: ರಾಹುಲ್ ಗಾಂಧಿ

ನವದೆಹಲಿ: 

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಮತ್ತೊಂದು ವ್ಯಂಗ್ಯಾತ್ಮಕ ಟೀಕೆ ಮಾಡಿದ್ದಾರೆ. ಕಳೆದ ತಿಂಗಳ ಪಾಕಿಸ್ತಾನದೊಂದಿಗಿನ  ಸೈನಿಕ ಸಂಘರ್ಷದಲ್ಲಿ ಅಂದರೆ ಆಪರೇಷನ್ ಸಿಂದೂರ್‌ನ  100 ಗಂಟೆಗಳ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಿಂದ ಮೋದಿಯವರು ಶರಣಾದರು ಎಂದು ಆರೋಪಿಸಿದ್ದಾರೆ. ಈ ಟೀಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತಕ್ಷಣ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ “ಪಾಕಿಸ್ತಾನದ ISIಯನ್ನು ಪ್ರತಿನಿಧಿಸುತ್ತಾರೆ” ಮತ್ತು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ತಿಳಿಸಿದ್ದಾರೆ.

   ಮಧ್ಯಪ್ರದೇಶದ ಭೋಪಾಲ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್, “ಟ್ರಂಪ್‌ರಿಂದ ಕರೆ ಬಂದಿತು, ತಕ್ಷಣ ನರೇಂದ್ರಜೀ ಶರಣಾದರು. ಇದಕ್ಕೆ ಇತಿಹಾಸವೇ ಸಾಕ್ಷಿ. ಇದು ಬಿಜೆಪಿ ಮತ್ತು RSSನ ಸ್ವಭಾವ,” ಎಂದರು. “ಟ್ರಂಪ್ ‘ನರೇಂದ್ರ, ಶರಣಾಗು’ ಎಂದಾಗ, ಮೋದಿಯವರು ಎಸ್‌ ಸರ್ ಎಂದರು” ಎಂದು ವ್ಯಂಗ್ಯವಾಡಿದರು. 1971ರ ಭಾರತ-ಪಾಕ್ ಯುದ್ಧವನ್ನು ಉಲ್ಲೇಖಿಸಿ, “ಕಾಂಗ್ರೆಸ್ ಸರ್ಕಾರ ಅಮೆರಿಕದ ಬೆದರಿಕೆಯ ಹೊರತಾಗಿಯೂ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಬಾಂಗ್ಲಾದೇಶವನ್ನು ಮುಕ್ತಗೊಳಿಸಿತು. ಕಾಂಗ್ರೆಸ್‌ನ ಸಿಂಹ-ಸಿಂಹಿಣಿಯರು ಮಹಾಶಕ್ತಿಗಳ ವಿರುದ್ಧ ಹೋರಾಡುತ್ತಾರೆ, ಎಂದಿಗೂ ಶಿರಬಾಗುವುದಿಲ್ಲ” ಎಂದರು.

   ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಯ ಒಪ್ಪಂದಕ್ಕೆ ತಮ್ಮ ಸರ್ಕಾರ ಪ್ರಮುಖ ಪಾತ್ರ ವಹಿಸಿತು ಎಂದು ಟ್ರೂತ್ ಸೋಷಿಯಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅಮೆರಿಕದಲ್ಲೂ ಈ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. ಆದರೆ, ಭಾರತವು ಟ್ರಂಪ್‌ ಅವರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. 

   ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಭಯೋತ್ಪಾದಕ ಶಿಬಿರಗಳು ಮತ್ತು ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗುವುದು ಎಂದಿತ್ತು. ಆದರೆ, ಪಾಕಿಸ್ತಾನ ಈ ಎಚ್ಚರಿಕೆಯನ್ನು ಲೆಕ್ಕಿಸದೆ, ಭಾರತದ ಪಶ್ಚಿಮದ ಸೈನಿಕ ಮತ್ತು ನಾಗರಿಕ ಕೇಂದ್ರಗಳ ಮೇಲೆ ಶಸ್ತ್ರಸಜ್ಜಿತ ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿತು. ಭಾರತದ ವಾಯು ರಕ್ಷಣಾ ವ್ಯವಸ್ಥೆ ಇವುಗಳನ್ನು ತಡೆದು, ಪ್ರತಿ-ದಾಳಿಗಳನ್ನು ಆರಂಭಿಸಿತು. ಮೇ 10ರವರೆಗೆ ನಾಲ್ಕು ದಿನಗಳ ಕಾಲ ಎರಡೂ ಬದಿಗಳಲ್ಲಿ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳು ನಡೆದವು. ಟ್ರಂಪ್ ಶಾಂತಿಯ ಒಪ್ಪಂದಕ್ಕೆ ನಾನು ಮಾತುಕತೆ ನಡೆಸಿದೆ ಎಂದು ಹೇಳಿದರೂ, ಭಾರತವು ಪಾಕಿಸ್ತಾನವೇ ಯುದ್ಧವಿರಾಮಕ್ಕೆ ಮನವಿ ಮಾಡಿತು ಎಂದು ಸ್ಪಷ್ಟಪಡಿಸಿದೆ. ಅಮೆರಿಕದಿಂದ ಯಾವುದೇ ರಾಜತಾಂತ್ರಿಕ ಅಥವಾ ವ್ಯಾಪಾರ ಒಪ್ಪಂದದ ಒತ್ತಡವಿರಲಿಲ್ಲ ಎಂದು ಭಾರತ ದೃಢಪಡಿಸಿದೆ.

Recent Articles

spot_img

Related Stories

Share via
Copy link