ನವದೆಹಲಿ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದೊಡ್ಡ ಪ್ರಮಾಣದ ಮತದಾರರ ವಂಚನೆ ಆರೋಪಗಳಿಗೆ ಭಾರತೀಯ ಚುನಾವಣಾ ಆಯೋಗ ಶುಕ್ರವಾರ ತೀಕ್ಷ್ಣವಾದ ಉತ್ತರ ನೀಡಿದೆ, ಅವರ ಹೇಳಿಕೆಗಳನ್ನು “ಆಧಾರರಹಿತ” ಮತ್ತು “ಬೇಜವಾಬ್ದಾರಿಯುತ ಹೇಳಿಕೆ ಎಂದು ಹೇಳಿದೆ. ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಚುನಾವಣಾ ಸಂಸ್ಥೆ, “ಪ್ರತಿದಿನ ಮಾಡಲಾಗುತ್ತಿರುವ ಇಂತಹ ಆಧಾರರಹಿತ ಆರೋಪಗಳನ್ನು ಚುನಾವಣಾ ಆಯೋಗ ನಿರ್ಲಕ್ಷಿಸುತ್ತದೆ ಎಂದು ಹೇಳಿದೆ. ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಕೆಲಸ ಮಾಡುತ್ತಿರುವ ಚುನಾವಣಾ ಅಧಿಕಾರಿಗಳು ಇಂತಹ ಆರೋಪಗಳಿಗೆ ಕಿವಿ ಕೊಡಬೇಡಿ ಎಂದು ಆಯೋಗ ಹೇಳಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ನೇರವಾಗಿ ಭಾಗಿಯಾಗಿದೆ. ಭಾರೀ ಅಕ್ರಮವೆಸಲಾಗಿದೆ ಎಂದು ಅವರು ಆರೋಪಿಸಿದ್ದರು. ಬಿಹಾರದಲ್ಲಿ ನಡೆಸಲಾದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಉಲ್ಲೇಖಿಸಿದ ಗಾಂಧಿ, ಆಯೋಗದ ಕ್ರಮಗಳು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (BJP) ಲಾಭ ತರುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದ್ದರು. ಚುನಾವಣಾ ಆಯೋಗವು ಈ ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮಲ್ಲಿ ಸಾಕ್ಷಿ ಇದೆ. ಸುಖಾ ಸುಮ್ಮನೇ ಆರೋಪಿಸುತ್ತಿಲ್ಲ, ನಮ್ಮ ಬಳಿ ಸಾಕ್ಷಿ ಇರುವುದರಿಂದಲೇ ಆರೋಪಿಸಲಾಗುತ್ತಿದೆ ಎಂದು ಹೇಳಿದ್ದರು.
ಮತದಾರರ ವಂಚನೆ ಮತ್ತು ಚುನಾವಣಾ ಆಯೋಗದಿಂದ ಯಾವುದೇ ಸಹಕಾರ ಸಿಗದ ಕಾರಣ ತಮ್ಮ ಪಕ್ಷವು ಈ ವಿಷಯದ ಬಗ್ಗೆ ಸ್ವತಂತ್ರ ತನಿಖೆ ನಡೆಸಿದೆ ಎಂದು ಗಾಂಧಿ ಆರೋಪಿಸಿದ್ದರು. ಕರ್ನಾಟಕದ ಚುನಾವಣೆಯಲ್ಲಿಯೂ ಅಕ್ರಮ ನಡೆದಿತ್ತು ಎಂದು ಗಾಂಧಿ ಆರೋಪಿಸಿದ್ದರು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ಮುಂದಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಮೌರ್ಯ ಸರ್ಕಲ್ನಿಂದ ಅರ್ಧ ಕಿ.ಮೀ ಪಾದಯಾತ್ರೆ ನಡೆಸಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
