ನವದೆಹಲಿ:
ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ಗೌತಮ್ ಅದಾನಿಯನ್ನು ಬಂಧಿಸಬೇಕು, ಅವರು ತಮ್ಮ ಮೇಲಿನ ತಪ್ಪು ಒಪ್ಪಿಕೊಳ್ಳಲ್ಲ, ಸರ್ಕಾರ ಅವರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ .ಸಂಸತ್ತಿನ ಹೊರಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ಗಾಂಧಿ, “ದೇಶದಲ್ಲಿ ಸಣ್ಣಪುಟ್ಟ ಆರೋಪಗಳ ಮೇಲೆ ನೂರಾರು ಜನರನ್ನು ಬಂಧಿಸುವಾಗ ಅದಾನಿ ಏಕೆ ಇನ್ನೂ ಜೈಲಿಗೆ ಹೋಗಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಕೋಟ್ಯಾಧಿಪತಿ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಲಂಚ ಪ್ರಕರಣದಲ್ಲಿ ಯುಎಸ್ ಅಧಿಕಾರಿಗಳು ದೋಷಾರೋಪ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣೆಯಲ್ಲಿ ಯುಎಸ್ ವಿದೇಶಿ ಭ್ರಷ್ಟ ಆಚರಣೆಗಳ ಕಾಯ್ದೆ (FCPA) ಯ ಯಾವುದೇ ಉಲ್ಲಂಘನೆಯ ಆರೋಪ ಹೊರಿಸಿಲ್ಲ ಎಂದು ಅದಾನಿ ಗ್ರೂಪ್ ಹೇಳಿಕೆ ನೀಡಿದೆ. ವಿತ್ತೀಯ ಪೆನಾಲ್ಟಿಗಳನ್ನು ವಿಧಿಸುವುದನ್ನು ಒಳಗೊಂಡಿರುವ ಸೆಕ್ಯುರಿಟೀಸ್ ವಂಚನೆಗೆ ಸಂಬಂಧಿಸಿದಂತೆ ಆರೋಪ ಹೊರಿಸಲಾಗಿದೆ.
“ಅದಾನಿಯವರು ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆಯೇ. ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ, ನಿಸ್ಸಂಶಯವಾಗಿ, ಅವರು ಆರೋಪಗಳನ್ನು ನಿರಾಕರಿಸಲಿದ್ದಾರೆ ಎಂದು ರಾಹುಲ್ ಗಾಂಧಿ ಸುದ್ದಿಗಾರರನ್ನು ಪ್ರಶ್ನಿಸಿದರು.ಅವರನ್ನು ಬಂಧಿಸಬೇಕು, ನೂರಾರು ಜನರನ್ನು ಸಣ್ಣ ಆರೋಪಗಳ ಮೇಲೆ ಬಂಧಿಸಲಾಗುತ್ತಿದೆ. ಇದೀಗ ಅಮೆರಿಕಾದಲ್ಲಿ ಸಾವಿರಾರು ಕೋಟಿಗಳ ದೋಷಾರೋಪಣೆ ಮಾಡಲಾಗಿದೆ, ಅದಾನಿ ಜೈಲಿನಲ್ಲಿರಬೇಕು. ಸರ್ಕಾರ ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
