ರಾಯಚೂರು:
ರಾಯಚೂರಿನಲ್ಲಿ ಮಂಗಳವಾರ ಮಧ್ಯರಾತ್ರಿ ಜೆಸಿಬಿ ಘರ್ಜನೆ ಕೇಳಿ ಬಂದಿದ್ದು, ಕಾರ್ಯಾಚರಣೆಯಲ್ಲಿಸಿ.ಎ.ಸೈಟ್ನಲ್ಲಿ ಅಕ್ರಮವಾಗಿ ನಿರ್ಮಿಸಿದ ಶಿವ ಮತ್ತು ಗಣೇಶನ ದೇಗುಲ ತೆರವುಗೊಳಿಸಲಾಗಿದೆ. ರಾಯಚೂರು ಎ.ಸಿ. ಗಜಾನನ ಬಾಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ .
ರಾಯಚೂರು ನಗರದ ಸಂತೋಷ ನಗರದಲ್ಲಿ ಈ ಘಟನೆ ನಡೆದಿದೆ. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರ ಸಾಮಗ್ರಿಗಳು ಇಡಲು ಕಟ್ಟಲಾಗಿದ್ದ ಶೆಡ್ ಇದಾಗಿತ್ತು. ಬಳಿಕ ಶೆಡ್ ಅನ್ನು ದೇಗುಲ ಮಾಡಿಕೊಂಡು ಕೆಲವು ಸ್ಥಳೀಯರು ಪೂಜೆ ಸಲ್ಲಿಸಲು ಆರಂಭಿಸಿದ್ದರು.
ದೇಗುಲ ಇದ್ದ ಜಾಗ ಸಿ.ಎ. ಸೈಟ್ ಆಗಿದ್ದು, ಇದನ್ನು 2022ರ ಜೂ. 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಮಂಜೂರು ಮಾಡಲಾಗಿತ್ತು. ರಾಯಚೂರಿನ ಎಲ್ಬಿಎಸ್ ನಗರದ ಪ್ರೌಢಶಾಲಾ ಹೆಸರಿಗೆ ಜಾಗ ಮಂಜೂರಾಗಿತ್ತು. ಜಾಗ ಮಂಜೂರು ಆದ ಬಳಿಕ 4 ಕೊಠಡಿ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ನಿತೀಶ್ ಅವರು ದೇಗುಲ ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಅದಾಗ್ಯೂ ಸ್ಥಳೀಯರು ದೇಗುಲ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರು.
ಸ್ಥಳೀಯರ ವಿರೋಧ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯ ನಡೆದಿದೆ. ನಗರಸಭೆ ಪೌರಾಯುಕ್ತ, ಹೆಚ್ಚುವರಿ ಎಸ್ ಪಿ ಶಿವಕುಮಾರ್ ಮತ್ತು ಹರೀಶ್ ನೇತೃತ್ವದಲ್ಲಿ 100 ಹೆಚ್ಚು ಪೊಲೀಸರ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
