ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ

ಭೋಪಾಲ್‌

     ಎಷ್ಟೇ ದೂರದ ಗುರಿಯಾದರೂ ಬಜೆಟ್ ಫ್ರೆಂಡ್ಲಿಯಾಗಿ ಪ್ರಯಾಣ ಮಾಡಲು ರೈಲು ಅತ್ಯುತ್ತಮ ವಿಧಾನ ಎನಿಸಿಕೊಂಡಿದೆ. ಹೀಗಾಗಿ ನಿತ್ಯವು ಕೋಟ್ಯಂತರ ಪ್ರಯಾಣಿಕರು ಭಾರತೀಯ ರೈಲ್ವೆಯಲ್ಲಿ ಸಂಚರಿಸುತ್ತಿದ್ದಾರೆ. ಕೆಲವೊಮ್ಮೆ ರೈಲ್ವೆ ನಿಲ್ದಾಣದಲ್ಲಿ ಒಂದಷ್ಟು ಅಮಾನುಷ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯೊಬ್ಬರ ಮೇಲೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮುಖ್ಯ ಕಾನ್‌ಸ್ಟೇಬಲ್‌ ಹಲ್ಲೆ ಮಾಡಿರುವ ಆತಂಕಕಾರಿ ಘಟನೆ ಮಧ್ಯ ಪ್ರದೇಶದ ನಾಗ್ಡಾ ರೈಲು ನಿಲ್ದಾಣದಲ್ಲಿ‌ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೊ ವೈರಲ್ ಆಗಿದೆ.

    ಡಿಸೆಂಬರ್ 3ರ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನವನ್ನು ಆಚರಿಸಲಾಗಿದೆ. ಇದರ ಭಾಗವಾಗಿ ಸಾಧಕ ವಿಶೇಷ ಚೇತನ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದು, ಅವರಿಗೆ ಅಗತ್ಯ ಸಲಕರಣೆ ವಿತರಿಸುವುದು ಇತ್ಯಾದಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಆದರೆ ಇದೇ ದಿನದಂದು ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ನಾಗ್ಡಾ ರೈಲು ನಿಲ್ದಾಣದಲ್ಲಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮುಖ್ಯ ಕಾನ್‌ಸ್ಟೇಬಲ್‌ ವಿಶೇಷ ಚೇತನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆನ್‌ಲೈನ್‌ನಲ್ಲಿ ಈ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾನ್‌ಸ್ಟೇಬಲ್‌ನನ್ನು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಉಜ್ಜಯಿನಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ನಾಗ್ಡಾ ನಿಲ್ದಾಣದ ಫ್ಲ್ಯಾಟ್‌ಫಾರ್ಮ್ 1ರಲ್ಲಿ ವಿಶೇಷ ಚೇತನ ವ್ಯಕ್ತಿಯು ತನ್ನ ಬ್ಯಾಗ್ ಪಕ್ಕದಲ್ಲಿ ಮಲಗಿದ್ದರು. ಅಲ್ಲಿಗೆ ಸಿವಿಲ್ ಡ್ರೆಸ್‌ನಲ್ಲಿ ಬಂದ ಜಿಆರ್‌ಪಿ ಹೆಡ್ ಕಾನ್‌ಸ್ಟೆಬಲ್ ಮಾನ್ಸಿಂಗ್ ಆ ವಿಶೇಷ ಚೇತನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯನ್ನು ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಇನೊಬ್ಬ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ.

    ವೈರಲ್ ಆದ ವಿಡಿಯೊದಲ್ಲಿ ಹೆಡ್ ಕಾನ್‌ಸ್ಟೆಬಲ್ ಮಾನ್ಸಿಂಗ್ ಆ ವಿಶೇಷ ಚೇತನ ವ್ಯಕ್ತಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿ ಕಾಲಿನಿಂದ ಒದೆಯುತ್ತಿರುವುದನ್ನು ಕಾಣಬಹುದು. ವಿಶೇಷ ಚೇತನ ವ್ಯಕ್ತಿಯು ಅಸಹಾಯಕರಾಗಿ ಅಳುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದ ತನ್ನಮ್ಮ ವಸ್ತುಗಳನ್ನು ಸಂಗ್ರಹಿಸಿ ಅಲ್ಲಿಂದ ಹೊರನಡೆಯಲು ಪ್ರಯತ್ನಿಸಿದ್ದಾರೆ. ವಿಡಿಯೊ ವೈರಲ್ ಆದ ಬೆನ್ನಲ್ಲೆ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ನೆಟ್ಟಿಗರು ಕಾನ್‌ಸ್ಟೇಬಲ್‌ ನಡೆಯನ್ನು ಖಂಡಿಸಿದ್ದಾರೆ. 

    ನಾಗರಿಕ ಸಮಾಜವನ್ನು ರಕ್ಷಿಸಬೇಕಾದವರೇ ರಾಕ್ಷಸರಂತೆ ಮನುಷ್ಯತ್ವ ಮರೆತು ನಿಂತಿದ್ದಾರೆ. ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಬೇಕು ಎಂದು ಬಳಕೆದಾರರೊಬ್ಬರು ಕಮೆಂಟ್ ಹಾಕಿದ್ದಾರೆ. ನ್ಯಾಯ ಎಲ್ಲಿದೆ? ಮಾನವೀಯತೆಯನ್ನು ಕಳೆದುಕೊಂಡಂತೆ ವರ್ತಿಸುವ ಇಂತಹ ಘಟನೆ ಮತ್ತೆಂದಿಗೂ ಮರುಕಳಿಸಬಾರದು. ಅಂತಹ ಶಿಕ್ಷೆ ವಿಧಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

    ವಿಡಿಯೊ ವೈರಲ್ ಆದ ಬೆನ್ನಲ್ಲೆ ಜಿಆರ್‌ಪಿ ಸೂಪರಿಂಟೆಂಡೆಂಟ್ ಪದ್ಮ ವಿಲೋಚನ್ ಶುಕ್ಲಾ ಕಾನ್ಸ್‌ಸ್ಟೇಬಲ್ ಮಾನ್ಸಿಂಗ್‌ನನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ. ವಿಶೇಷ ಚೇತನ ವ್ಯಕ್ತಿ ಕುಡಿದಿದ್ದು ನಿಂದನೀಯ ಭಾಷೆ ಬಳಸಿದ್ದಾರೆ ಎಂದು ಮಾನ್ಸಿಂಗ್ ಘಟನೆ ಬಗ್ಗೆ ತಿಳಿಸಿದ್ದಾರೆ. ಆದರೆ ಅವರ ವಿವರಣೆಯು ಸಮಂಜಸವಾಗಿಲ್ಲ ಎಂಬ ಕಾರಣಕ್ಕೆ ಅವರ ಹೇಳಿಕೆ ಪರಿಗಣಿಸಲಿಲ್ಲ. ಹೀಗಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಅಮಾನತುಗೊಳಿಸಲಾಯಿತು.

Recent Articles

spot_img

Related Stories

Share via
Copy link