ಹೊನ್ನಾಳಿ:
ಗುರುವಾರ ಮಧ್ಯಾಹ್ನ ಮತ್ತು ರಾತ್ರಿ ಸುರಿದ ಉತ್ತರೆ ಮಳೆಯ ಆರ್ಭಟಕ್ಕೆ ಪಟ್ಟಣಕ್ಕೆ ಸಮೀಪದಲ್ಲಿನ ನೂರಾರು ಹೆಕ್ಟೇರ್ಗಳಷ್ಟು ಭತ್ತದ ಗದ್ದೆಗಳು ಜಲಾವೃತವಾಗಿವೆ. ಇಲ್ಲಿನ ಹಿರೇಕಲ್ಮಠದ ಸುತ್ತ-ಮುತ್ತಲಿನ ಪ್ರದೇಶ ಮತ್ತು ಸುಂಕದಕಟ್ಟೆ ಮಾರ್ಗದಲ್ಲಿನ ಭತ್ತದ ಗದ್ದೆಗಳು ಮಳೆಯಿಂದ ಹಾನಿಗೀಡಾಗಿವೆ.ಇಲ್ಲಿನ ಟಿ.ಬಿ. ವೃತ್ತದ ರಾಮಚಂದ್ರಪ್ಪ ಎಂಬುವವರ ಸುಮಾರು ಏಳು ಎಕರೆಗಳಷ್ಟು ಪ್ರದೇಶದಲ್ಲಿನ ಭತ್ತ ಜಲಾವೃತವಾಗಿದ್ದು, ಸಂಪೂರ್ಣ ಬೆಳೆ ಹಾನಿಯ ಭೀತಿ ಎದುರಾಗಿದೆ. ಇದೇ ರೀತಿ, ಇವರ ಜಮೀನುಗಳಲ್ಲಿನ ಅಕ್ಕ-ಪಕ್ಕದ ಗದ್ದೆಗಳಿಗೂ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಈ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ತೆರಳುವ ರಸ್ತೆಯಲ್ಲಿಯೂ ನೀರು ಹರಿಯುತ್ತಿದ್ದು, ಶುಕ್ರವಾರ ಬೆಳಿಗ್ಗೆಯಾದರೂ ನೀರಿನ ಹರಿವು ನಿಂತಿದ್ದಿಲ್ಲ. ಪರಿಣಾಮವಾಗಿ ಈ ಮಾರ್ಗದಲ್ಲಿ ತೆರಳುವವರು ಪ್ರಯಾಸಪಡಬೇಕಾಯಿತು.
ತಾಲೂಕಿನ ಕೆಲವು ಗ್ರಾಮಗಳಲ್ಲಿನ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿದ್ದರೆ, ಈ ಭಾಗದಲ್ಲಿನ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿರುವುದು ಅಚ್ಚರಿಯ ಸಂಗತಿಯಾಗಿದೆ ಎನ್ನುತ್ತಾರೆ ರೈತರು. ಮತ್ತೆ ಕೆಲವೆಡೆ ಮೆಕ್ಕೆಜೋಳದ ಬೆಳೆಯು ಮಳೆಯ ಕೊರತೆ ಹಾಗೂ ಕೀಟಗಳ ಬಾಧೆಗೆ ನಲುಗಿ ಹೋಗಿದೆ. ಒಟ್ಟಿನಲ್ಲಿ, ರೈತರು ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ಹಾನಿ ಅನುಭವಿಸುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ.ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ಮಳೆಯಿಂದ ಹಾನಿಗೊಳಗಾಗಿರುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ನೊಂದ ರೈತರು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ