ಗುಹವಾಟಿ
ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್ಗಳ ಕಳಪೆ ಪ್ರದರ್ಶನದ ಪರಿಣಾಮವಾಗಿ ಅತಿಥೇಯ ತಂಡ ತವರಿನಲ್ಲಿ ಮತ್ತೊಂದು ಸರಣಿ ಸೋಲಿನ ಭೀತಿಯಲ್ಲಿದೆ. ಇದರ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ಅವರ ಆಯ್ಕೆಗಳು ಮತ್ತು ನಿರ್ಧಾರಗಳ ಕುರಿತು ಭಾರಿ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ , ಗಂಭಿರ್ ಅವರನ್ನು ಸಮರ್ಥಿಸಿಕೊಂಡಿದ್ದು, ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ತಂಡದ ಪ್ರದರ್ಶನದ ವೈಫಲ್ಯಕ್ಕೆ ಕೋಚ್ ಮಾತ್ರವಲ್ಲ, ಆಟಗಾರರ ಮೇಲೆ ಕೂಡ ಜವಬ್ದಾರಿ ಇದೆ ಎಂದು ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಮಾತನಾಡಿರುವ ಸುರೇಶ್ ರೈನಾ, “ಅದು ಸಮಸ್ಯೆ ಅಂತ ನನಗನ್ನಿಸುವುದಿಲ್ಲ. ಕೋಚ್ ತಮ್ಮ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅದಕ್ಕೂ ಮೊದಲು ತಂಡದ ಪ್ರದರ್ಶನ ಅಷ್ಟೊಂದು ಉತ್ತಮವಾಗಿರಲಿಲ್ಲ, ನಂತರ ವಿಶ್ವಕಪ್ ಗೆದ್ದಿತ್ತು ಮತ್ತು ಇತ್ತೀಚೆಗೆ ಮತ್ತೊಂದು ಐಸಿಸಿ ಟ್ರೋಫಿ ಕೂಡ ಬಂದಿದೆ. ನಾವು ಕೋಚ್ ಆಗಿ ಎರಡು ಬಾರಿ ವಿಶ್ವಕಪ್ ವಿಜೇತರ ಬಗ್ಗೆ ಮಾತನಾಡುತ್ತಿದ್ದೇವೆ. ಕೋಚ್ ಆಟಗಾರರಿಗೆ ಮಾರ್ಗದರ್ಶನ ನೀಡಬಹುದು. ಆದರೆ ಕೊನೆಯಲ್ಲಿ, ಆಟಗಾರರು ಮೈದನಾದಲ್ಲಿ ರನ್ ಗಳಿಸಬೇಕಾಗುತ್ತದೆ. ಅವರು ರನ್ ಗಳಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು” ಎಂದು ಅವರು ಹೇಳಿದರು.
ಮೈದಾನದಲ್ಲಿ ಭಾರತೀಯ ಆಟಗಾರರ ಮುಖದಲ್ಲಿ ಮೊದಲಿದ್ದ ಆತ್ಮವಿಶ್ವಾಸ ಈಗ ಕಾಣಸಿಗುತ್ತಿಲ್ಲ. ಒತ್ತಡದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಆಟಗಾರರು ಎಡವುತ್ತಿದ್ದಾರೆ. ಇದು ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ರೈನಾ ಅಭಿಪ್ರಾಯ ಪಟ್ಟರು.
“ನಮ್ಮ ಕಾಲದಲ್ಲಿ, ನಾವು ಸರಣಿಯಲ್ಲಿ ಹಿನ್ನಡೆ ಅನುಭವಿಸಿದಾಗಲೂ, ನಾವು ಯಾವಾಗಲೂ ಮತ್ತೆ ಮರಳಬಹುದೆಂದು ನಂಬಿದ್ದೆವು. ಇದೀಗ, ಆಟಗಾರರು ಹೇಗೆ ಜೊತೆಯಾಟವಾಡುತ್ತಾರೆ ಮತ್ತು ಅವರು ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಷ್ಟು ಗಮನ ಹರಿಸುತ್ತಾರೆ ಎಂಬುದರ ಮೇಲೆ ಅವರ ಆತ್ಮವಿಶ್ವಾಸ ಅವಲಂಬಿತವಾಗಿದೆ. ಹಾಗಾಗಿ ಹೆಚ್ಚಿನ ಅಭ್ಯಾಸ ಮತ್ತು ಆಟಗಾರರು ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಆಡಬೇಕಾಗಿದೆ. ಅಜಿಂಕ್ಯ ರಹಾನೆ ಅವರನ್ನು ನೋಡಿ ದೇಶೀಯ ಕ್ರಿಕೆಟ್ನಲ್ಲಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂಜಾರ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ದ್ವಿಶತಕ ಮತ್ತು ತ್ರಿಶತಕಗಳನ್ನು ಗಳಿಸುತ್ತಿದ್ದರು. ಅದು ಆತ್ಮವಿಶ್ವಾಸ ಮತ್ತು ಲಯ ಎರಡನ್ನೂ ತಂದುಕೊಡುತ್ತದೆ. ಹಾಗಾಗಿ ಆತ್ಮವಿಶ್ವಾಸ ತುಂಬಾ ಮುಖ್ಯ ಎಂದು ರೈನಾ ವಿವರಿಸಿದರು.
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಂಡದ ಗೆಲುವಿನ ಫಲಿತಾಂಶದ ಅಂಕಿ ಅಂಶಗಳು ಕುಸಿದಿವೆ. ಆಡಿರುವ 18 ಪಂದ್ಯಗಳಲ್ಲಿ ತಂಡ 9 ಸೋಲುಗಳೊದಿಗೆ 7 ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ಹಾಗಾಗಿ ಭಾರತ ಟೆಸ್ಟ್ ತಂಡದ ಪ್ರದರ್ಶನದ ಬಗ್ಗೆ ಕಳವಳ ಹುಟ್ಟಿಕೊಂಡಿವೆ. ಭಾರತ ತವರಿನಲ್ಲಿ ಆಡಿರುವ 8 ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸದೆ. ಕಳೆದ ಬಾರಿ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ 3-0 ಅಂತರದಲ್ಲಿ ವೈಟ್ವಾಶ್ ಮುಜುಗರವನ್ನು ಎದುರಿಸಿತ್ತು. ಈಗ ದಕ್ಷಿಣ ಆಫ್ರಿಕಾ ವಿರುದ್ದ 2-0 ಅಂತರದಿಂದ ಸರಣಿಯನ್ನು ಕಳೆದುಕೊಳ್ಳುವ ಭೀತಿಯಿದೆ.








