ಬೆಂಗಳೂರು :
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ ಹಾಗೂ ಸೀಸನ್ 11ರ ರಜತ್ ಕಿಶನ್ (Rajath Kishan) ರೀಲ್ಸ್ ಮಾಡುವುದಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ಗೊತ್ತೇ ಇದೆ. ಇಬ್ಬರೂ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದರು. ಇದನ್ನು ರಜತ್ ಕಿಶನ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು.
ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದರೂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಜೈಲಿನಿಂದ ಹೊರಬಂದ ಬಳಿಕ, ವಿನಯ್ ಹಾಗೂ ರಜತ್ ಮಧ್ಯೆ ಭಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತು. ಅಷ್ಟೇ ಅಲ್ಲದೆ ರಜತ್ ನೀಡಿದ ಹೇಳಿಕೆ ಕೂಡ ವೈರಲ್ ಆಗಿತ್ತು. ‘‘ವಿನಯ್ ನನಗಿಂತ 10 ವರ್ಷ ದೊಡ್ಡವನು. ಅವನಿಗೆ ಗೊತ್ತಿದೆ ಎಲ್ಲಿ ಏನು ಮಾತಾಡಬೇಕು ಅಂತ ಚೆನ್ನಾಗಿ ಗೊತ್ತಿದೆ. ಅವನ ಜೊತೆ ರೀಲ್ಸ್ ಮಾಡಬೇಕು ಅನ್ನೋ ಅವಶ್ಯಕತೆ ಇಲ್ಲ. ಇಲ್ಲಿ ಯಾರು ವಿನಯ್ ಗೌಡ ಜೊತೆಗೆ ರೀಲ್ಸ್ ಮಾಡಬೇಕು ಅಂತ ಕಾಯುತ್ತಾ ಕೂತಿಲ್ಲ. ಅವನ ಪಾಡಿಗೆ ನೆಮ್ಮದಿಯಾಗಿ ಇರಲಿ’’ ಎಂದು ರಜತ್ ಹೇಳಿದ್ದಾರೆ.
ಈ ಮಾತಿನ ಬೆನ್ನಲ್ಲೇ ಇಬ್ಬರ ನಡುವೆ ಕೋಪ ಇರುವುದು ಖಚಿತವಾಗಿತ್ತು. ಆದರೆ, ಈಗ ಕೋರ್ಟ್ ವಿಚಾರಣೆ ಹಾಜರಾಗುವಾಗ ಇಬ್ಬರೂ ಜೊತೆ ಜೊತೆಯಾಗಿ ಬಂದರು. ಅಷ್ಟೇ ಅಲ್ಲದೆ ಮೀಡಿಯಾ ಮುಂದೆ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ಕೂಡ ಕೊಟ್ಟರು. ‘‘ಸಡನ್ ಆಗಿ ಆ ರೀತಿ ಆದಾಗ ಇಬ್ಬರಿಗೂ ಒಂಥರಾ ಶಾಕ್ ಆಗಿತ್ತು. ಇಬ್ಬರಿಗೂ ಅದರಿಂದ ಆಚೆ ಬರೋದಕ್ಕೆ ಸಮಯ ಬೇಕು. ಯಾಕೆಂದರೆ, ನಾನು ಯಾವತ್ತೂ ಜೈಲಿಗೆ ಹೋದವನಲ್ಲ. ವಿನಯ್ ಕೂಡ ಅಷ್ಟೇ. ಹೀಗಿದ್ದಾಗ ಸಡನ್ ಆಗಿ ಅಂತ ಪರಿಸ್ಥಿತಿ ಬಂದಾಗ ನಮಗೂ ಒಂಥರಾ ಅನಿಸಿಬಿಡ್ತು. ಒಂದು ರೀಲ್ಸ್ಗೆ ಒಳಗೆ ಬಂದ್ಬಿಟ್ವಾ ಅಂತ ಅನ್ನಿಸಿತ್ತು’’ ಎಂದು ರಜತ್ ಹೇಳಿದ್ದಾರೆ.
ವಿನಯ್ ಗೌಡ ಮಾತನಾಡಿ, “ಸ್ನೇಹದಲ್ಲಿ ಜಗಳ, ಸಿಟ್ಟು ಇಲ್ಲ ಅಂತಂದ್ರೆ ಅದು ಫ್ರೆಂಡ್ಶಿಪ್ಪೇ ಅಲ್ಲ. ಕೋಪ ಬಂದಾಗ ಕೋಪ ಮಾಡ್ಕೋಬೇಕು, ಫ್ರೆಂಡ್ಶಿಪ್ ತೋರಿಸೋ ಟೈಮ್ ಬಂದಾಗ ಗೆಳೆತನವನ್ನು ತೋರಿಸಬೇಕು. ಅದೇ ಅಲ್ವಾ ನಿಜವಾದ ಫ್ರೆಂಡ್ಶಿಪ್?’’ ಎಂದು ಹೇಳಿದ್ದಾರೆ.
