ತುಮಕೂರು:
ವಿ.ಪ ಫಲಿತಾಂಶ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಪರಾಜಯ, ಜೆಡಿಎಸ್ಗೆ ನಿರೀಕ್ಷಿತ ಸೋಲು
ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್. ರಾಜೇಂದ್ರ ರಾಜಣ್ಣ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಪ್ರಬಲ ಪೈಪೋಟಿಯೊಡ್ಡಿದ್ದ ಬಿಜೆಪಿ 2ನೇಸ್ಥಾನಕ್ಕೆ ತಳ್ಳಲ್ಪಟ್ಟರೆ, ಚುನಾವಣೆ ಕಡೇ ದಿನಗಳಲ್ಲಿ ಗೊಂದಲಕ್ಕೀಡಾಗಿದ್ದ ಜೆಡಿಎಸ್ 3ನೇ ಸ್ಥಾನಕ್ಕೆ ಕುಸಿಯುವ ಮೂಲಕ ನಿರೀಕ್ಷಿತ ಸೋಲನ್ನು ಅನುಭವಿಸಿತು.
ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ್ಯಾರು ನಿರ್ದಿಷ್ಟ ಶೇ.50ಕ್ಕಿಂತ ಒಂದು ಹೆಚ್ಚುವರಿ ಪ್ರಾಶಸ್ತ್ಯ ಮತಗಳನ್ನು ಪಡೆಯದ ಕಾರಣ ದ್ವಿತೀಯ ಪ್ರಾಶಸ್ತ್ಯ ಮತ ಎಣಿಕೆ ವಿಧಾನದ ಮೂಲಕ ಮುನ್ನಡೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ವಿಜಯಿಯೆಂದು ಘೋಷಿಸಲಾಯಿತು. ಆರ್. ರಾಜೇಂದ್ರ ರಾಜಣ್ಣ ಪ್ರಥಮ ಹಾಗೂ ದ್ವಿತೀಯ ಪ್ರಾಶಸ್ತ್ಯ ಮತಗಳು ಸೇರಿ ಒಟ್ಟು 3135 ಪ್ರಾಶಸ್ತ್ಯ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಈಮೂಲಕ ಚುನಾವಣಾ ಅಖಾಡದಲ್ಲಿ ಕೇಳಿಬಂದ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪ್ರತೀಕಾರದ ಕರೆಗೆ ಮತದಾರರು ಗೆಲುವಿನ ಜೈಕಾರ ಮೊಳಗಿಸಿದ್ದು, ದಳಪತಿಗಳ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿತು.
ಗೆಲುವಿನ ದಡ ಸೇರಿಸಿದ ದ್ವಿತೀಯ ಪ್ರಾಶಸ್ತ್ಯ :
ಚಲಾವಣೆಯಾಗಿದ್ದ 5547 ಮತಗಳಲ್ಲಿ 227 ಮತಗಳು ತಿರಸ್ಕøತಗೊಂಡಿದ್ದವು. ಪುರಸ್ಕøತವಾದ 5320 ಮತಗಳಲ್ಲಿ ಮೊದಲನೇ ಪ್ರಾಶಸ್ತ್ಯದ ಶೇ. 50ಕ್ಕಿಂತ ಒಂದು ಹೆಚ್ಚು ವರಿ ಮತ ಅಂದರೆ 2661 ಮತಗಳನ್ನು ಯಾÁವ ಅಭ್ಯರ್ಥಿಯು ಪಡೆಯದ ಕಾರಣ ಮೊದಲ ಸುತ್ತಿನಲ್ಲಿ ಯಾರನ್ನು ವಿಜಯಿಯೆಂದು ಘೋಷಿಸಲಾಗಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಅವರು ಮೊದಲ ಸುತ್ತಿನಲ್ಲಿ 2250, ಬಿಜೆಪಿ ಅಭ್ಯರ್ಥಿ ಎನ್ ಲೋಕೇಶ್ಗೌಡ 1757, ಜೆಡಿಎಸ್ ಅಭ್ಯರ್ಥಿ 1296 ಮತಗಳನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ದ್ವಿತೀಯ ಪ್ರಾಶಸ್ತ್ಯ ಮತ ಎಣಿಕೆಗೆ ಮುಂದಾಗಿ ಅತೀ ಕಡಿಮೆ ಮೊದಲ ಪ್ರಾಶಸ್ತ್ಯ ಮತ ಪಡೆದ ಅಭ್ಯರ್ಥಿಯ ದ್ವಿತೀಯ ಪ್ರಾಶಸ್ಯ ಮತಗಳನ್ನು ಇತರೆ ಅಭ್ಯರ್ಥಿಗಳಿಗೆ ವರ್ಗಾಯಿಸುತ್ತಾ ಒಬ್ಬೊಬ್ಬರನ್ನೇ ಸ್ಪರ್ಧಾ ಕಣದಿಂದ ಅನೂರ್ಜಿತಗೊಳಿಸಲಾಯಿತು.
ಈ ಪ್ರಕ್ರಿಯೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿಲ್ಕುಮಾರ್ ಅವರ ಮತಪತ್ರದಲ್ಲಿ ದಾಖಲಾಗಿದ್ದ 599 ಪುರಸ್ಕøತ ದ್ವಿತೀಯ ಪ್ರಾಶಸ್ತ್ಯ ಮತಗಳಲ್ಲಿ 306 ಕಾಂಗ್ರೆಸ್ ಅಭ್ಯರ್ಥಿಗೆ, 290 ಬಿಜೆಪಿ ಅಭ್ಯರ್ಥಿಗೆ ವರ್ಗಾಯಿಸಲಾಯಿತು. ಇಷ್ಟು ಮತ ಹಂಚಿಕೆಯಾದರೂ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವಿಗೆ ನಿಗದಿತವಾದ 2661 ಪ್ರಾಶಸ್ತ್ಯ ಮತ ಬರಲಿಲ್ಲ. ಕಡೆಗೆ 2ನೇಸ್ಥಾನದಲ್ಲಿದ್ದ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ಗೌಡ ಅವರ ಮತಪತ್ರದಲ್ಲಿದ್ದ ದ್ವಿತೀಯ ಪ್ರಾಶಸ್ತ್ಯ ಮತಗಳನ್ನು ಎಣಿಕೆ ಮಾಡಿ ಅದರಲ್ಲಿ ಕಾಂಗ್ರೆಸ್ಗೆ ದೊರೆತಿದ್ದ 579 ಮತಗಳನ್ನು ವರ್ಗಾಯಿಸಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ದಡ ಸೇರಿದರು.
ಗೆದ್ದ ಅಭ್ಯರ್ಥಿ ಆರ್.ರಾಜೇಂದ್ರ ಬಳಿಕ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಹಿರಿಯ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಂದೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ತಾಯಿ ಶಾಂತಲಾ ರಾಜಣ್ಣ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದರಲ್ಲದೆ ಮಾಜಿ ಶಾಸಕ ಎಸ್.ಷಫಿ ಅಹಮದ್, ಜಿಪಂ ಮಾಜಿ ಸದಸ್ಯ ಎಚ್.ವಿ.ವೆಂಕಟೇಶ್, ದೇವರಾಜು, ಕೊಂಡವಾಡಿ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಗೆದ್ದ ಪ್ರಮಾಣ ಪತ್ರ ಸ್ವೀಕರಿಸಿ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವದಲ್ಲಿ ಭಾಗಿಯಾಗಿ ಅಭಿಮಾನಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಒಟ್ಟಾಗಿ ಕಂಡುಬಂದ ಅಭ್ಯರ್ಥಿಗಳು: ಮತ ಎಣಿಕೆ ಕೇಂದ್ರದಲ್ಲಿ ಪಕ್ಷಬೇಧ ಮರೆತು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂವರು ಅಭ್ಯರ್ಥಿಗಳು ಒಟ್ಟಾಗಿ ಕಲೆತು ಚಹಾ ಹೀರಿದ್ದು ವಿಶೇಷವಾಗಿ ಗಮನಸೆಳೆಯಿತು.
ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ವೈ.ಎಸ್.ಪಾಟೀಲ್ ಅವರಿಗೆ ಚುನಾವಣಾ ವೀಕ್ಷಕರು, ಜಿಪಂ ಸಿಇಓ ವಿದ್ಯಾಕುಮಾರಿ, ಎಸ್ಪಿ ರಾಹುಲ್ಕುಮಾರ್, ಎಸಿ ಅಜಯ್. ತಹಸೀಲ್ದಾರ್ ಮೋಹನ್ಕುಮಾರ್, ಚುನಾವಣಾ ಶಾಖೆ ಸಿಬ್ಬಂದಿ ಪೂರಕ ಸಾಥ್ ನೀಡಿದರು. ಇಡೀ ಚುನಾವಣಾ ಪ್ರಕ್ರಿಯೆ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಡಿಸಿ ಪಾಟೀಲ್ ಅಭಿನಂದನೆ ಸಲ್ಲಿಸಿದರು. ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು.
ಮತ ಎಣಿಕೆ: ಆರಂಭದಲ್ಲಿ ತಡ , ನಂತರ ಸುಸೂತ
ತುಮಕೂರು ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ 8 ರಿಂದ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬ್ಯಾಲೆಟ್ ಪೇಪರ್ಗಳನ್ನು ಮಿಶ್ರಣ ಮಾಡಿ 14 ಟೇಬಲ್ಗಳಿಗೆ 25 ಮತಪತ್ರಗಳ ಕಟ್ಟುಗಳಾಗಿ ವಿಂಗಡಿಸಿ ಮತಪತ್ರ ಹಂಚಿಕೆ ಮಾಡಿದ್ದು, ಎಣಿಕೆ ಪ್ರಾರಂಭಿಸುವ ವೇಳೆಗೆ 10ಗಂಟೆ ದಾಟಿತ್ತು. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನೆಡೆ ಸಾಧಿಸುತ್ತಿರುವ ಮಾಹಿತಿ ಹೊರಬರುತ್ತಲೇ, ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಗೆಲುವಿನ ಕೇಕೆ ಹಾಕಿದರÀು.
ಆದರೆ ಗೆಲುವಿಗೆ ನಿಗದಿತ ಪ್ರಾಶಸ್ತ್ಯ ಮತ ಕೊರತೆಯಿರುವ ಕಾರಣ ಎರಡನೇ ಪ್ರಾಶಸ್ತ್ಯದ ಎಣಿಕೆ ಅನಿವಾರ್ಯವಾಯಿತು. ದ್ವಿತೀಯ ಪ್ರಾಶಸ್ತ್ಯ ಮತ ಎಣಿಕೆ ಪ್ರಕ್ರಿಯೆ ಮುಗಿಯುವ ವೇಳೆಗೆ ಮಧ್ಯಾಹ್ನ 2.30 ಸಮೀಪಿಸಿದ್ದು, ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿ ನಂತರ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳಾದ ವೈ.ಎಸ್.ಪಾಟೀಲ್ ಅಧಿಕತವಾಗಿ ಪ್ರಕಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
