ಬೆಂಗಳೂರು :
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ರಾಸಲೀಲೆ ವೀಡಿಯೋ ಬಹಿರಂಗಗೊಂಡಿದ್ದು, ಸಂತ್ರಸ್ತೆ ಪರ ಮಾಹಿತಿ ಹಕ್ಕು ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ದೂರನ್ನು ಕಬ್ಬನ್ ಪಾರ್ಕ್ ಠಾಣೆಗೆ ವರ್ಗಾಯಿಸಲಾಗಿದೆ.
ಡ್ರೋನ್ ಕ್ಯಾಮೆರಾಗಳ ಮೂಲಕ ಕರ್ನಾಟಕದ ಡ್ಯಾಂ ಗಳನ್ನು ಚಿತ್ರೀಕರಣ ಮಾಡಲು ಮಹಿಳೆ ಬಯಸಿದ್ದರು. ಆದರೆ ಈ ಮಹಿಳೆಯನ್ನು ರಮೇಶ್ ಜಾರಕಿಹೊಳಿ ತನ್ನ ಕಾಮ ತೃಷೆಗೆ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ದೂರು ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದೇವೆ. ನಮ್ಮ ದೂರನ್ನು ಪರಿಶೀಲನೆ ಮಾಡಿ ಪ್ರಕರಣವನ್ನು ಕಬ್ಬನ್ ಪಾರ್ಕ್ ಠಾಣೆಗೆ ಕಳಿಸಿದ್ದಾರೆ. ಅಲ್ಲಿ ಮತ್ತೆ ದೂರು ನೀಡಲಿದ್ದೇನೆ ಎಂದರು.
ದೂರಿನಲ್ಲೇನಿದೆ?
ಹಾಲಿ ಸಚಿವ ರಮೇಶ್ ಜಾರಕಿಹೊಳಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಉತ್ತರ ಕರ್ನಾಟಕದ ಯುವತಿಯೊಬ್ಬರು ಆರ್.ಟಿ ನಗರದಲ್ಲಿ ವಾಸವಿದ್ದು, ಕಿರುಚಿತ್ರ ನಿರ್ಮಾಣಕ್ಕೆ ಬಂದಾಗ ಕೆಪಿಟಿಸಿಎಲ್ ನಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ನಂತರ ಉದ್ಯೋಗವೂ ನೀಡದೆ ಲೈಂಗುಕ ಕಿರುಕುಳ ನೀಡಿದ್ದಾರೆ. ಇದರ ವೀಡಿಯೋ ಇದೆ ಎಂದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಹಾಗಾಗಿ ಪ್ರಕರಣದ ತನಿಖೆ ನಡೆಸಬೇಕು ಹಾಗು ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದು ಸೂಕ್ಷ್ಮ ವಿಚಾರ, ಮಹಿಳೆಯ ವಿವರ ಬಹಿರಂಗ ಮಾಡಲು ಸಾಧ್ಯವಿಲ್ಲ, ಅವರ ಕುಟುಂಬ ಸದಸ್ಯರು ನನ್ನನ್ನು ಸಂಪರ್ಕಿಸಿದ್ದಾರೆ, ಅವರು ಹೋರಾಟ ಮಾಡಲು ಶಕ್ತರಲ್ಲ ಹಾಗಾಗಿ ನನ್ನ ನೆರವು ಕೋರಿದ್ದಾರೆ. ಅವರ ಕಟುಂಬ ಸದಸ್ಯರು ನಿನ್ನೆ ಸಿಡಿ ಕೊಟ್ಟಿದ್ದಾರೆ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ,ನ್ಯಾಯ ಕೊಡಸಿ ಎಂದು ಕೇಳಿದ್ದರು, ನಮ್ಮ ವಕೀಲರ ಜೊತೆ ಚರ್ಚಿಸಿ ಸಿಡಿ, ದಾಖಲೆ ಇರಿಸಿಕೊಂಡು ಸತ್ಯಾಸತ್ಯತೆ ಗೊತ್ತಸಗಲಿ, ತನಿಖೆಯಾಗಲಿ ಎಂದು ದೂರು ನೀಡಿದ್ದೇನೆ ಎಂದರು.
ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ :
ನಾನು ಯಾವ ತಪ್ಪೂ ಮಾಡಿಲ್ಲ. ತಪ್ಪಿತಸ್ಥ ಎಂದು ದೃಢಪಟ್ಟರೆ ಆಗ ರಾಜೀನಾಮೆಯ ಪ್ರಶ್ನೆ ಉದ್ಭವಿಸುತ್ತದೆ ಎಂದಿದ್ದಾರೆ. ರಾಸಲೀಲೆ ವಿಡಿಯೋ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಸಿಎಂಗೆ ಮನವಿ ಮಾಡುತ್ತೇನೆ.
ಈ ಸುದ್ದಿ ಬಿತ್ತರವಾಗುವಾಗ ನಾನು ಮೈಸೂರಿನಲ್ಲಿದ್ದೆ. ನೋಡಿ ಆಶ್ಚರ್ಯವಾಯಿತು. ಪಾಪ, ಆ ದೃಶ್ಯಗಳಲ್ಲಿ ಇರುವ ಯುವತಿ ಯಾರು ಅಂತ ನನಗೆ ಗೊತ್ತಿಲ್ಲ. ದಿನೇಶ್ ಕಲ್ಲಹಳ್ಳಿ ಯಾರು ಅಂತಲೂ ಗೊತ್ತಿಲ್ಲ. ನನ್ನ ವಿರುದ್ಧ ಯಾರೋ ಈ ಷಡ್ಯಂತ್ರ ಮಾಡಿದ್ದಾರೆ ಎಂಬುದರ ಬಗ್ಗೆಯೂ ನಾನು ಆರೋಪ ಮಾಡುವುದಿಲ್ಲ. ಯಾರ ಮೇಲೆಯೂ ನನಗೆ ಅನುಮಾನವೂ ಇಲ್ಲ. ಕಳೆದ 21 ವರ್ಷಗಳಿಂದ ನಾನು ಶಾಸಕನಾಗಿ ಸಾರ್ವಜನಿಕರ ಸೇವೆ ಮಾಡುತ್ತಿದ್ದೇನೆ. ಅತ್ಯಂತ ಸೂಕ್ಷ್ಮ ಮನಸ್ಥಿತಿಯ ಮನುಷ್ಯ ನಾನು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಜೀನಾಮೆ ನೀಡಲು ಸ್ವಪಕ್ಷೀಯರಿಂದಲೇ ಒತ್ತಡ ಬರುವ ಸಾಧ್ಯತೆಯಿದೆ. ಹಾಗಾಗಿ, ವರಿಷ್ಠರ ಬುಲಾವ್ ಮೊದಲೇ ದೆಹಲಿಗೆ ತೆರಳಲು ಸಚಿವ ರಮೇಶ್ ಜಾರಕಿಹೊಳಿ ಚಿಂತನೆ ನಡೆಸಿದ್ದಾರೆ.
ಇನ್ನು ಸಚಿವರ ರಾಸಲೀಲೆ ಸಿಡಿ ವಿಚಾರವನ್ನೇ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಷಯವನ್ನು ಪ್ರಸ್ತಾಪ ಮಾಡಿ, “ಏನ್ರಿ ಬಿಜೆಪಿ ಇದೆಲ್ಲ” ಎಂದು ಪ್ರಶ್ನೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
