ಇಂದಿನಿಂದ ರಣಜಿ ಟ್ರೋಫಿ: ಕರ್ನಾಟಕಕ್ಕೆ ಸೌರಾಷ್ಟ್ರ ಮೊದಲ ಸವಾಲು

ಬೆಂಗಳೂರು: 

    ದೇಶೀಯ ಪ್ರಥಮ ದರ್ಜೆ ಕ್ರಿಕೆಟ್​ ಟೂರ್ನಿ ರಣಜಿ ಟ್ರೋಫಿಯ  91ನೇ ಆವೃತ್ತಿ ಇಂದಿನಿಂದ ಆರಂಭಗೊಳ್ಳಲಿದೆ. ಮಯಾಂಕ್​ ಅಗರ್ವಾಲ್​ ಸಾರಥ್ಯದ ಕರ್ನಾಟಕ  ತಂಡ ರಾಜ್​ಕೋಟ್​ನಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಅಭಿಯಾನ ಆರಂಭಿಸಲಿದ್ದು, 2014-15ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ.

   ಅನುಭವಿ ಬ್ಯಾಟರ್​ ಕರುಣ್​ ನಾಯರ್​ 3 ವರ್ಷಗಳ ಬಳಿಕ ರಾಜ್ಯ ತಂಡಕ್ಕೆ ಮರಳಿರುವುದು ಬಲ ಹೆಚ್ಚಿಸಲಿದೆ. ವಿಂಡೀಸ್​ ವಿರುದ್ಧ ಟೆಸ್ಟ್​ ಸರಣಿ ಮುಗಿದ ಬೆನ್ನಲ್ಲೇ ದೇವದತ್​ ಪಡಿಕ್ಕಲ್​ ಕೂಡ ರಾಜ್ಯ ತಂಡವನ್ನು ಕೂಡಿಕೊಂಡಿದ್ದಾರೆ. ಜತೆಗೆ ಯುವ ಬ್ಯಾಟರ್​ಗಳಾದ ಆರ್​. ಸ್ಮರಣ್​, ನಿಕಿನ್​ ಜೋಸ್​, ವಿಕೆಟ್​ ಕೀಪರ್​ ಶ್ರೀಜಿತ್​ ಕೆಎಲ್​ ಕಳೆದ ಆವೃತ್ತಿಯ ಫಾರ್ಮ್​ ಮುಂದುವರಿಸುವ ನಿರೀಕ್ಷೆ ಇದೆ.

   ವೈಶಾಕ್​ ವಿಜಯ್​ಕುಮಾರ್​, ವಿದ್ವತ್​ ಕಾವೇರಪ್ಪ, ಅಭಿಲಾಷ್​ ಶೆಟ್ಟಿ, ವೆಂಕಟೇಶ್​ ಎಂ. ಒಳಗೊಂಡ ವೇಗದ ಬೌಲಿಂಗ್​ ವಿಭಾಗ ಕೂಡ ಬಲಿಷ್ಠವಾಗಿದೆ. ಸೌರಾಷ್ಟ್ರ ತಂಡಕೆ ಜೈದೇವ್​ ಉನಾದ್ಕತ್​ ಸಾರಥ್ಯ ವಹಿಸಿದ್ದಾರೆ. ಹಾರ್ವಿಕ್​ ದೇಸಾಯಿ, ಅರ್ಪಿತ್​ ವಸವಾಡ, ಚಿರಾಗ್​ ಜಾನಿ, ಪ್ರೇರಕ್​ ಮಂಕಡ್​, ಚೇತನ್​ ಸಕಾರಿಯಾ ಮತ್ತು ಧಮೇರ್ಂದ್ರಸಿನ್ಹಾ ಜಡೇಜಾ ತಂಡದ ಇತರ ಪ್ರಮುಖ ಆಟಗಾರರು.

   ರಣಜಿ ಟ್ರೋಫಿ ಟೂರ್ನಿಯನ್ನು ಈ ಬಾರಿ 2 ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳೂ ನವೆಂಬರ್​ 19ರವರೆಗೆ ತಲಾ 5 ಲೀಗ್​ ಪಂದ್ಯಗಳನ್ನು ಆಡಲಿವೆ. ನಂತರದಲ್ಲಿ ಎರಡು ವೈಟ್​ಬಾಲ್​ ಕ್ರಿಕೆಟ್​ ಟೂರ್ನಿಗಳು ಅಂದರೆ ಸಯ್ಯದ್​ ಮುಸ್ತಾಕ್​ ಅಲಿ ಟ್ರೋಫಿ ಟಿ20 (ನ. 26-ಡಿ.8) ಮತ್ತು ವಿಜಯ್​ ಹಜಾರೆ ಟ್ರೋಫಿ ಏಕದಿನ (ಡಿ.24-ಜ.8) ಟೂರ್ನಿಗಳು ನಡೆಯಲಿವೆ.

   ನಂತರ ಜ.22ರಿಂದ ರಣಜಿಯ ಕೊನೇ 2 ಲೀಗ್​ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 6ರಿಂದ ನಾಕೌಟ್​ ಪಂದ್ಯಗಳು ನಡೆಯಲಿವೆ. ಫೆಬ್ರವರಿ 24ರಿಂದ 28ರವರೆಗೆ ನಡೆಯಲಿರುವ ಫೈನಲ್​ ಪಂದ್ಯದೊಂದಿಗೆ ಹಾಲಿ ದೇಶೀಯ ಕ್ರಿಕೆಟ್​ ಋತುವಿಗೆ ತೆರೆ ಬೀಳಲಿದೆ. ಟೂರ್ನಿಯಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ.

Recent Articles

spot_img

Related Stories

Share via
Copy link