ಬೆಂಗಳೂರು
ದುಬೈನಿಂದ ಅಕ್ರಮವಾಗಿ ಚಿನ್ನ ತಂದ ನಟಿ ರನ್ಯಾ ರಾವ್ ಕೇಸ್ನ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ. ಚಿನ್ನ ಸಾಗಾಟದ ಹಿಂದೆ ದೊಡ್ಡ ಜಾಲವೇ ಇರುವ ಅನುಮಾನವಿದೆ. ಈಗಾಗಲೇ ಸಿಬಿಐ ಮತ್ತು ಡಿಆರ್ಐ ಅಧಿಕಾರಿಗಳು ಫೀಲ್ಡಿಗಿಳಿದಿದ್ದು, ಬೆಂಗಳೂರು, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಠಿಕಾಣಿ ಹೂಡಿದ್ದಾರೆ. ಏರ್ಪೋರ್ಟ್ ಸಿಬ್ಬಂದಿ, ಟ್ರಾವೆಲ್ ಏಜೆನ್ಸಿ, ಕಸ್ಟಮ್ಸ್ ಅಧಿಕಾರಿಗಳು, ಸ್ಥಳೀಯ ಪೊಲೀಸರ ಮೇಲೂ ಡಿಆರ್ಐ ಮತ್ತು ಸಿಬಿಐಗೆ ಅನುಮಾನ ಉಂಟಾಗಿದೆ.
ಹೀಗಾಗಿ, ಕೆಲವರನ್ನು ವಿಚಾರಣೆ ನಡೆಸಿದ್ದಾರೆ. ಚಿನ್ನ ಪಡೆದುಕೊಳ್ಳುತ್ತಿದ್ದ ಗ್ಯಾಂಗ್ ಪತ್ತೆಗೆ ತನಿಖಾ ಸಂಸ್ಥೆಗಳು ಮುಂದಾಗಿವೆ. ನಟಿ ರನ್ಯಾ ಯಾವೆಲ್ಲಾ ಚಿನ್ನದ ಮಳಿಗೆಗಳಿಗೆ ಹೋಗಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಟಿ ರನ್ಯಾ ಹಿಂದೆ ದೆಹಲಿ ಲಿಂಕ್ ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಒಂದೇ ವಾರದಲ್ಲಿ ಮೂರು ಕಡೆ ಚಿನ್ನ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ. ಮಾರ್ಚ್ 2ರಂದು ದೆಹಲಿ, ಮಾರ್ಚ್ 3ರಂದು ಬೆಂಗಳೂರು ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಪತ್ತೆಯಾಗಿದೆ. ಮೂರು ಪ್ರಕರಣಗಳ ಸಂಬಂಧ ಕೆಜಿಗಟ್ಟಲೆ ಚಿನ್ನ ಜಪ್ತಿ ಮಾಡಿದ ಡಿಆರ್ಐ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನು ತುಮಕೂರಿನ ಶಿರಾ ಬಳಿ ನಟಿ ರನ್ಯಾ ರಾವ್ಳ ಕ್ಸಿರೋದಾ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ಇದೆ. ಈ ಕಂಪನಿಗೆ 2023 ರ ಫೆಬ್ರವರಿ 22 ರಂದು, ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಐಎಡಿಬಿಯಿಂದ 12 ಎಕರೆ ಜಮೀನು ಮಂಜೂರಾಗಿದೆ. ಜಮೀನು ಮಂಜೂರು ಬಗ್ಗೆ ದಾಖಲೆಯೂ ಲಭ್ಯವಾಗಿದೆ. 138 ಕೋಟಿ ಬಂಡವಾಳದೊಂದಿಗೆ ಕಂಪನಿ ಆರಂಭಿಸಿದ್ದು, 160 ಮಂದಿಗೆ ಉದ್ಯೋಗ ಕೊಟ್ಟಿದ್ದಾಗಿ ರನ್ಯಾ ಹೇಳಿಕೊಂಡಿದ್ದರು. ಇದೇ ಕಂಪನಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 12 ಎಕರೆ ಜಮೀನು ಪಡೆದಿದ್ದರು. ಹೀಗಾಗಿ ಸದ್ಯ ರನ್ಯಾ ಒಡೆತನದ ಕಂಪನಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.. ರಾಜಕೀಯವಾಗಿಯೂ ರನ್ಯಾ ನೆಟ್ವರ್ಕ್ ಹೊಂದಿರುವುದು ಬಟಾಬಯಲಾಗಿದೆ.
