ಲುಧಿಯಾನಾ
ರಾತ್ರಿ ಹೊತ್ತು ಒಂದೊಮ್ಮೆ ಅಪರಿಚಿತರು ಮನೆ ಬಾಗಿಲಿಗೆ ಬಂದರೆ ಅಪ್ಪಿ ತಪ್ಪಿಯೂ ಬಾಗಿಲು ತೆರೀಬೇಡಿ. ಬಾಗಿಲನ್ನು ಭದ್ರವಾಗಿ ಹಾಕಿ ಮಲಗಿ. ನಿಮ್ಮ ಪ್ರಜ್ಞೆ ತಪ್ಪಿಸಿ ಮನೆಯನ್ನು ದರೋಡೆ ಮಾಡಬಹುದು ಎಚ್ಚರ. ಲುಧಿಯಾನಾದಲ್ಲಿ ಸರಣಿ ಮನೆಗಳವು ನಡೆದಿದೆ. ಭಾನುವಾರ ತಡರಾತ್ರಿ 6 ಮನೆಗಳಿಗೆ ಕಳ್ಳರ ಗುಂಪೊಂದು ನುಗ್ಗಿ 10 ಮೊಬೈಲ್ಗಳು 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಕಳ್ಳರು ಮಾದಕ ವಸ್ತುವನ್ನು ಸಿಂಪಡಿಸಿದ್ದರಿಂದ ತಾವು ಪ್ರಜ್ಞೆ ತಪ್ಪಿದ್ದು ಸೋಮವಾರ ಬೆಳಗ್ಗೆ ಎಚ್ಚರಗೊಂಡಿದ್ದೆವು ಎಂದು ಆರೋಪಿಸಿದ್ದಾರೆ. ಆದರೆ ಕಳ್ಳರು ಮನೆಯೊಳಗೆ ನುಗ್ಗಿದ್ಹೇಗೆ ಎಂಬುದು ತಿಳಿದುಬಂದಿಲ್ಲ.
ಅಟಲ್ ನಗರದ ನಿವಾಸಿ ಮತ್ತು ಕಾರ್ಖಾನೆಯ ಕೆಲಸಗಾರ ಸಾಹುಲ್ ಕುಮಾರ್ ಅವರ ಅಕ್ಕಪಕ್ಕದ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಅವರ ಮನೆಯನ್ನು ಪರಿಶೀಲಿಸಿದಾಗ, ಸಾಹುಲ್ ಅವರ ಪ್ಯಾಂಟ್ನಲ್ಲಿ ಇರಿಸಿದ್ದ ಮೊಬೈಲ್ ಫೋನ್ ಮತ್ತು ನಗದು ಕಣ್ಮರೆಯಾಗಿರುವುದು ಕಂಡುಬಂದಿದೆ.
ಸಾಹುಲ್ ಮಾತನಾಡಿ, ವಿಪರೀತ ತಲೆ ತಿರುಗಿದಂತಾಗಿತ್ತು, ತಲೆ ಭಾರವಾದಂತಿತ್ತು, ಕಳ್ಳತನದ ಸಮಯದಲ್ಲಿ ಎಲ್ಲರೂ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಲು ಯಾವುದೋ ಮಾದಕದ್ರವ್ಯ ಸಿಂಪಡಿಸಿದ್ದರು ಎಂದು ಹೇಳಿದ್ದಾರೆ.ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ವ್ಯಕ್ತಿ ಇದೇ ರೀತಿಯ ಅನುಭವವನ್ನು ಹಂಚಿಕೊಂಡರು. ನಮ್ಮ ಮನೆಯಿಂದ ಎರಡು ಮೊಬೈಲ್ ಫೋನ್ಗಳು ಮತ್ತು ಹಣವನ್ನು ಕದ್ದೊಯ್ಯಲಾಯಿತು. ಕುಟುಂಬದ ಎಲ್ಲಾ ಸದಸ್ಯರು ಪ್ರಜ್ಞೆ ತಪ್ಪಿದ್ದರು. ತಡವಾಗಿ ಎಚ್ಚರಗೊಂಡರು. ಹಿಂದೆಂದೂ ಸಂಭವಿಸಿರಲಿಲ್ಲ. ಕಳ್ಳರು ಉದ್ದೇಶಪೂರ್ವಕವಾಗಿ ದರೋಡೆಗಳನ್ನು ನಡೆಸಲು ಮಾದಕ ದ್ರವ್ಯ ನೀಡಿದ್ದಾರೆ ಎನ್ನುವ ಅನುಮಾನ ಬಲವಾಗಿದೆ.
ನಿವಾಸಿಗಳ ಪ್ರಕಾರ, ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಬಾಟಲಿಯೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಶಂಕಿತರು ಮನೆಗಳಿಗೆ ಪ್ರವೇಶಿಸಲು ಗಡಿ ಗೋಡೆಗಳನ್ನು ಹತ್ತಿ ಕತ್ತಲೆಯ ಮರೆಯಲ್ಲಿ ನಿಖರವಾಗಿ ಕಳ್ಳತನ ಮಾಡಿದ್ದಾರೆ ಎಂದು ವರದಿಯಾಗಿದೆ.
ಟಿಬ್ಬಾ ಪೊಲೀಸ್ ಠಾಣೆಯ ಎಸ್ಎಚ್ಒ ಇನ್ಸ್ಪೆಕ್ಟರ್ ಹರ್ಪ್ರೀತ್ ಸಿಂಗ್, ದೂರುಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದೃಢಪಡಿಸಿದರು. ಈ ಪ್ರದೇಶದಲ್ಲಿ ಇಬ್ಬರು ಶಂಕಿತರು ಓಡಾಡುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪಡೆದುಕೊಂಡಿದ್ದೇವೆ. ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಮ್ಮ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.








