ಔರಂಗಾಬಾದ್ ರೈಲು ನಿಲ್ದಾಣಕ್ಕೆ ಮರು ನಾಮಕರಣ; ಛತ್ರಪತಿ ಶಿವಾಜಿ ಮಹಾರಾಜರ ಪುತ್ರನ ಹೆಸರು!

ಔರಂಗಾಬಾದ್:

     ಮಹಾರಾಷ್ಟ್ರದ ಔರಂಗಾಬಾದ್ ರೈಲು ನಿಲ್ದಾಣವನ್ನು ಛತ್ರಪತಿ ಸಂಭಾಜಿನಗರ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ .ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡಿದ ಸುಮಾರು ಮೂರು ವರ್ಷಗಳ ನಂತರ ಇದೀಗ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ.

   ಈ ಹಿಂದೆ ಮೊಘಲ್ ಚಕ್ರವರ್ತಿ ಔರಂಗಜೇಬನ ಹೆಸರನ್ನು ಇಡಲಾಗಿದ್ದ ನಗರಕ್ಕೆ ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಮಗನ ಗೌರವಾರ್ಥವಾಗಿ ಸಂಭಾಜಿನಗರ ಎಂದು ಮರು ನಾಮಕರಣ ಮಾಡಲಾಗಿದೆ. ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ MVA ಸರ್ಕಾರದಿಂದ ಮೂಲ ಹೆಸರು ಬದಲಾವಣೆ ಪ್ರಾರಂಭಿಸಲಾಯಿತು. ಭಾರತೀಯ ಜನತಾ ಪಾರ್ಟಿ ನೇತೃತ್ವದ ಮಹಾಯುತಿ ಸರ್ಕಾರವು ಅಕ್ಟೋಬರ್ 15 ರಂದು ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

   ಔರಂಗಾಬಾದ್ ರೈಲು ನಿಲ್ದಾಣವನ್ನು 1900 ರಲ್ಲಿ ಆರಂಭಿಸಲಾಗಿದೆ. ಇದನ್ನು ಹೈದರಾಬಾದ್‌ನ 7 ನೇ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್ ನಿರ್ಮಿಸಿದ್ದರು. ಈ ರೈಲು ನಿಲ್ದಾಣ ಕಾಚೆಗುಡ ಮನ್ಮಾಡ್ ವಿಭಾಗದಲ್ಲಿದ್ದು, ದಕ್ಷಿಣ ಮಧ್ಯ ರೈಲ್ವೆ ವಲಯದ ನಾಂದೇಡ್ ವಿಭಾಗದಡಿ ಕಾರ್ಯನಿರ್ವಹಿಸುತ್ತದೆ. ಇದು ದೇಶದ ಪ್ರಮುಖ ನಗರಗಳೊಂದಿಗೆ ರೈಲು ಸಂಪರ್ಕವನ್ನು ಹೊಂದಿದೆ. 

   ಛತ್ರಪತಿ ಸಂಭಾಜಿನಗರ ನಗರವು ಪ್ರವಾಸಿ ಕೇಂದ್ರವಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾದ ಅಜಂತಾ ಗುಹೆಗಳು ಮತ್ತು ಎಲ್ಲೋರಾ ಗುಹೆಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳಿಂದ ಹೆಸರುವಾಸಿಯಾಗಿದೆ. ಇದನ್ನು ಸಿಟಿ ಆಫ್ ಗೇಟ್ಸ್ ಎಂದೂ ಕರೆಯುತ್ತಾರೆ.

Recent Articles

spot_img

Related Stories

Share via
Copy link