ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಒಂದು ವರ್ಷ….!

ಬೆಂಗಳೂರು 

 ಅಂದು  2024ರ ಜೂನ್ 11ನೇ ತಾರೀಕು. ಬೆಳಿಗ್ಗೆ 8 ಗಂಟೆ ಸುಮಾರಿಗೆ ದರ್ಶನ್ ಅರೆಸ್ಟ್ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದೂ ಕೊಲೆ ಕೇಸ್​ನಲ್ಲಿ ಎನ್ನುವಾಗ ಇದು ಸುಳ್ಳು ಸುದ್ದಿ ಇರಬಹುದು ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ, ನಿಜಕ್ಕೂ ಹಾಗೊಂದು ಬಂಧನ ಆಗಿತ್ತು. ದರ್ಶನ್ ಬಂಧನ ಆಗಿದ್ದು ರೇಣುಕಾ ಸ್ವಾಮಿ   ಕೊಲೆ ಕೇಸ್​ನಲ್ಲಿ ಎಂಬುದು ನಂತರ ತಿಳಿಯಿತು. ಆ ಬಳಿಕ ಪ್ರಕರಣ ಯಾವ ಯಾವ ತಿರುವು ಪಡೆಯಿತು ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ. ಈ ಘಟನೆ ನಡೆದು ಇಂದಿಗೆ ಬರೋಬ್ಬರಿ ಒಂದು ವರ್ಷ ಕಳೆದಿದೆ.

    ದರ್ಶನ್ ಆಪ್ತೆ ಎನಿಸಿಕೊಂಡಿದ್ದ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕಿರುಕುಳ ನೀಡಿದ್ದ. ಈ ಕಾರಣಕ್ಕೆ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆಸಿ ಪಟ್ಟಣಗೆರೆ ಶೆಡ್​ನಲ್ಲಿ ಅವರನ್ನು ಹತ್ಯೆ ಮಾಡಿದ ಆರೋಪ ದರ್ಶನ್ ಹಾಗೂ ಇತರ 16 ಆರೋಪಿಗಳ ಮೇಲೆ ಇದೆ. ಕೊಲೆ ಬಳಿಕ ಈ ಶವವನ್ನು ಮೋರಿ ಪಕ್ಕ ಎಸೆಯಲಾಗಿತ್ತು. ಆರಂಭದಲ್ಲಿ ದರ್ಶನ್ ಗ್ಯಾಂಗ್​ನ ಕೆಲವರು ಪೊಲೀಸರಿಗೆ ಹೋಗಿ ಶರಣಾಗತಿ ಆದರು ಮತ್ತು ಹಣದ ವಿಚಾರಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು.

   ಆದರೆ, ಪೊಲೀಸರಿಗ ಆಗಲೇ ಅನುಮಾನ ಬಂದಿತ್ತು. ಶರಣಾದವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸ್ಟೋರಿ ಲೈನ್ ಬಂತು. ಮೊಬೈಲ್ ತೆಗೆದು ಕಾಲ್ ಹಿಸ್ಟರಿ ನೋಡಿದಾಗ ಸಿಕ್ಕಿದ್ದು ದರ್ಶನ್ ಹೆಸರು. ಸಂಪೂರ್ಣ ಸಾಕ್ಷಿಗಳನ್ನು ರೆಡಿ ಮಾಡಿಕೊಂಡ ಪೊಲೀಸರು, ದರ್ಶನ್​ನ ಬಂಧಿಸಿಯೇ ಬಿಟ್ಟರು. ‘ಡೆವಿಲ್’ ಸಿನಿಮಾ ಶೂಟ್​ಗಾಗಿ ದರ್ಶನ್ ಮೈಸೂರಿನಲ್ಲಿ ಇದ್ದರು. ಅವರಿದ್ದ ಹೋಟೆಲ್​ನಲ್ಲಿಯೇ ಈ ಬಂಧನ ನಡೆಯಿತು. ಪವಿತ್ರಾ ಗೌಡ ಪ್ರಕರಣದಲ್ಲಿ ಎ1 ಆದರೆ, ದರ್ಶನ್ ಎ2.

    ಜೂ.11ರಂದು‌ ದರ್ಶನ್, ಪವಿತ್ರಾ ಸೇರಿ 13 ಜನರ ಬಂಧನವಾಗಿತ್ತು. ಉಳಿದ ನಾಲ್ವರನ್ನು ನಂತರ ಬಂಧಿಸಲಾಯಿತು. ದರ್ಶನ್ ಅವರು ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ಹಾಯಾಗಿ ಜೀವನ ನಡೆಸುತ್ತಿರುವ ವಿಚಾರ ತಿಳಿದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಡಿ.13ರಂದು ದರ್ಶನ್ ಸೇರಿ 7 ಜನರಿಗೆ ಜಾಮೀನು‌ ಸಿಕ್ಕಿತ್ತು. ಸದ್ಯ 17 ಆರೋಪಿಗಳು ಜಾಮೀನು ಪಡೆದಿದ್ದಾರೆ. ಸದ್ಯ ಸುಪ್ರೀಂ ಕೋರ್ಟ್​ನಲ್ಲಿ 7 ಆರೋಪಿಗಳ ಜಾಮೀನನ್ನು ಪೊಲೀಸರು ಪ್ರಶ್ನಿಸಿದ್ದಾರೆ.

Recent Articles

spot_img

Related Stories

Share via
Copy link