ಅವಾಗೇನು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ……..? : ರೇಣುಕಾಸ್ವಾಮಿ ತಾಯಿ ಪ್ರಶ್ನೆ….!

ಚಿತ್ರದುರ್ಗ

      ಜುಲೈ 18ರ ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಗುರುವಾರ ಕೋರ್ಟ್‌ ಆದೇಶ ಹೊರಡಿಸಿತ್ತು. ಇದೇ ಪ್ರಕರಣದ ಬಗ್ಗೆ ಸಾಕಷ್ಟು ಸೆಲೆಬ್ರಿಟಿಗಳೂ ಮುಂದೆ ಬಂದು ರೇಣುಕಾಸ್ವಾಮಿ ನಮಗೂ ಕೆಟ್ಟ ಸಂದೇಶ ಕಳುಹಿಸಿದ್ದ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ರೇಣುಕಾ ಸ್ವಾಮಿ ತಾಯಿ ರತ್ನ ಪ್ರಭ ಪ್ರತಿಕ್ರಿಯೆ ನೀಡಿದ್ದಾರೆ.

    ರೇಣುಕಾಸ್ವಾಮಿ ತಮಗೂ ಕೆಟ್ಟ ಸಂದೇಶ ಕಳುಹಿಸಿದ್ದ ಎಂದು ಹಲವು ಸೆಲೆಬ್ರಿಟಿಗಳು ದೂರುತ್ತಿದ್ದಂತೆ ಈ ಬಗ್ಗೆ ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭ, ಮಾಧ್ಯಮಗಳಿಗೆ ಉತ್ತರಿಸಿದ್ದಾರೆ. “ಮಗ ಕೆಟ್ಟ ಮೆಸೆಜ್‌ ಮಾಡಿದ್ದೇ ಆಗಿದ್ರೆ, ಪೊಲೀಸ್‌ ಠಾಣೆಗೆ ದೂರು ಕೊಡಬೇಕಿತ್ತು. ಈಗ ಅವ ಸತ್ತ ಮೇಲೆ ಹೀಗೆ ಮಾಡ್ತಿದ್ದ, ಹಾಗೇ ಮೆಸೆಜ್‌ ಮಾಡ್ತಿದ್ದ ಅಂದ್ರೆ ಏನು ಬಂತು ಎಂದು ಕೊಂಚ ಬೇಸರದಲ್ಲಿಯೇ ರತ್ನಪ್ರಭ ಮಾತನಾಡಿದ್ದಾರೆ.

    ಆ ಜೀವವೇ ಇಲ್ಲ ಅಂದ ಮೇಲೆ ಈ ರೀತಿ ಮಾತನಾಡೋದು ನ್ಯಾಯ ಅಲ್ಲ. ಮೊದಲೇ ಹೇಳಬೇಕಿತ್ತು, ನಾವು ಎಚ್ಚೆತ್ತುಕೊಳ್ಳುತ್ತಿದ್ವಿ. ಅವನಿಗೆ ಬುದ್ಧಿ ಹೇಳ್ತಿದ್ವಿ. ಈ ಥರ ಮಾಡಬೇಡಪ್ಪ ನೀನು ಅಂತ. ಇದೀಗ ಬಂದು ಅವನ ಮೇಲೆ ಈ ರೀತಿ ಆರೋಪ ಮಾಡಿದ್ರೆ ಹೇಗೆ? ಆವಾಗೇನು ಇವರೆಲ್ಲ ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ?” ಎಂದಿದ್ದಾರೆ.

    “ಸಿನಿಮಾ ತಾರೆಯರು, ನಟಿಯರು ಅಂತಾರೆ, ಇಷ್ಟು ದಿನ ಏನ್‌ ಮಾಡ್ತಿದ್ರು? ಗೊತ್ತಾಗಲ್ವಾ ಇವರಿಗೆ? ಅವನು ಆ ರೀತಿ ಮೆಸೆಜ್‌ ಮಾಡಿದ ದಿನವೇ ನಮಗೆ ಹೇಳಬಹುದಿತ್ತಲ್ಲ. ಆಗ ನಾವೇ ಅವನಿಗೆ ತಿಳಿ ಹೇಳುತ್ತಿದ್ವಿ. ಇಲ್ಲವೇ ಅವರೇ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ರೂ ಆಗ್ತಿತ್ತು. ಶಿಕ್ಷೆ ಅನುಭವಿಸ್ತಿದ್ದ. ಅದು ಬಿಟ್ಟು, ಈಗ ಎಲ್ಲ ಆದಮೇಲೆ ಹೇಳಿದ್ರೆ ಏನು ಪ್ರಯೋಜನ. ನಮಗೆ ತಿಳಿಸಿದ್ರೆ, ಮಗನ ಜೀವ ಉಳೀತಿತ್ತು. ಕಾನೂನು ಪ್ರಕಾರ ಇದೀಗ ನನ್ನ ಮಗನನ್ನು ಕೊಂದವರಿಗೆ ಏನು ಶಿಕ್ಷೆ ಆಗುತ್ತೋ ಆಗಲಿ.

    “ಸುಮಲತಾ ಅವರಿಗೆ ದರ್ಶನ್‌ ದೊಡ್ಡ ಮಗನೇ ಆಗಿರಬಹುದು, ಅವನಿಗೆ ಬೆಂಬಲಿಸಬಹುದು. ಆದರೆ, ನನ್ನ ಮಗನ ಬಗ್ಗೆ ಆರೋಪ ಮಾಡೋರು, ಮೊದಲೇ ಈ ವಿಚಾರ ಹೇಳಿಬಿಟ್ಟಿದ್ದರೆ, ಇಷ್ಟೆಲ್ಲ ಆಗ್ತಾನೇ ಇರಲಿಲ್ಲ” ಎಂದು ಮಾಧ್ಯಮದ ಜತೆಗೆ ಸುದೀರ್ಘವಾಗಿ ಮಾತನಾಡಿದ್ದಾರೆ ರೇಣುಕಾಸ್ವಾಮಿ ತಾಯಿ ರತ್ನಪ್ರಭ.

    ನಟ ದರ್ಶನ್‌ ಅವರ ಆಪ್ತ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಜೂನ್‌ 8ರಂದು ಅಪಹರಿಸಲಾಗಿತ್ತು. ಬಳಿಕ ಅದೇ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಅದರ ಆಧಾರದ ಮೇಲೆ ಸದ್ಯ ಎಲ್ಲ 17 ಮಂದಿ ಸದ್ಯ ಜೈಲು ಸೇರಿದ್ದಾರೆ. ಜುಲೈ 18ರ ವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಇತ್ತ ರೇಣುಕಾಸ್ವಾಮಿ ಸಾಚಾ ಅಲ್ಲ, ನಟ ದರ್ಶನ್‌ ಮಾಡಿದ್ದೇ ಸರಿ ಎಂದು ಅವರ ಅಭಿಮಾನಿಗಳು ವಾದಿಸುತ್ತಿದ್ದರೆ, ಇನ್ನು ಕೆಲವರು ಕಾನೂನು ಕೈಗೆ ತೆಗೆದುಕೊಳ್ಳಬಾರದಿತ್ತು ಎಂದೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.

Recent Articles

spot_img

Related Stories

Share via
Copy link
Powered by Social Snap