ರಾಗಿ ಖರೀದಿ ಸ್ಥಗಿತ  ಆದೇಶ ಹಿಂಪಡೆಯಲು ಆಗ್ರಹ

ಹುಳಿಯಾರು:

ದಲ್ಲಾಳಿಗಳಿಗೆ ಅನುಕೂಲವಾಗುವ ಕಾನೂನು ಜಾರಿ : ಆರೋಪ

      ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸ್ಥಗಿತದ ಆದೇಶ ಹಿಂಪಡೆದು ತಕ್ಷಣ ರಾಗಿ ಖರೀದಿಗೆ ನೋಂದಣಿ ಆರಂಭಿಸಿ ರೈತರಿಂದ ರಾಗಿ ಖರೀದಿಸುವಂತೆ ಒತ್ತಾಯಿಸಿ ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘದ ಕಾರ್ಯಕರ್ತರು ನಾಡ ಕಚೇರಿ ಸಿಬ್ಬಂದಿ ಭುವನೇಶ್ವರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಅವರು ಮಾತನಾಡಿ, ಅಕಾಲಿಕ ಮಳೆಯಿಂದ ಈ ಬಾರಿ ರಾಗಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಮೂಲಕ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರ ತೆರೆದಿದ್ದು ನೆಮ್ಮದಿ ತಂದಿತ್ತು. ಆದರೆ, ಖರೀದಿಗೆ ಮಿತಿ ವಿಧಿಸಿದ್ದು ಸರಿಯಲ್ಲ ಎಂದು ಅವರು ಆರೋಪಿಸಿದರು.

ಸಾಲದ ಶೂಲಕ್ಕೆ ರೈತ :

ಖರೀದಿ ಕೇಂದ್ರಗಳಲ್ಲಿ ನೋಂದಣಿ ಸ್ಥಗಿತಗೊಳಿಸಿರುವುದರಿಂದ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ. ಸರ್ಕಾರದ ಈ ನಿರ್ಧಾರ ವರ್ತಕರಿಗೆ ಲಾಭದಾಯಕವಾಗಿದ್ದು ಮಾರುಕಟ್ಟೆಯಲ್ಲಿ ರಾಗಿ ಬೆಲೆ ಮತ್ತೊಷ್ಟು ಕುಸಿತವಾಗುತ್ತದೆ. ಪರಿಣಾಮ ಉತ್ತಮ ಪಸಲು ಪಡೆದಿರುವ ರೈತರು ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೇಳಿದ ಬೆಲೆಗೆ ಮಾರಾಟ ಮಾಡಿ ಬೆಳೆಗೆ ಹಾಕಿದ ಬಂಡವಾಳ ಸಹ ಬಾರದೆ ಸಾಲದ ಶೂಲಕ್ಕೆ ಸಿಲುಕುವಂತಾಗುತ್ತದೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುವ ಸರ್ಕಾರ ರೈತರ ಕನಿಷ್ಠ ವರಮಾನಕ್ಕೂ ಸಂಚಕಾರ ತರುವ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ ಎಂದರು.

ರೈತ ಸಂಘದ ತಾಲ್ಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ನೀರಾಈರಣ್ಣ, ಪೆದ್ದಾಬೋವಿ, ಪುಟ್ಟಯ್ಯ, ಎನ್.ಪಿ.ಜಯಣ್ಣ, ಶಿವಮ್ಮ, ಹೇಮಾವತಿ, ಲಕ್ಷ್ಮಿ ಮತ್ತಿತರರು ಇದ್ದರು.

ಹುಳಿಯಾರಿನಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸ್ಥಗಿತದ ಆದೇಶ ಹಿಂಪಡೆದು ತಕ್ಷಣ ರಾಗಿ ಖರೀದಿಗೆ ನೊಂದಣಿ ಆರಂಭಿಸಿ ರೈತರಿಂದ ರಾಗಿ ಖರೀದಿಸುವಂತೆ ಒತ್ತಾಯಿಸಿ ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘದ ಕಾರ್ಯಕರ್ತರು ನಾಡ ಕಚೇರಿ ಸಿಬ್ಬಂದಿ ಭುವನೇಶ್ವರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ನಿರ್ಬಂಧ ವಿಧಿಸಿರುವುದು ಸರಿಯಲ್ಲ :

ಹುಳಿಯಾರು ರೈತ ಸಂಘದ ಅಧ್ಯಕ್ಷ ಬೀರಲಿಂಗಯ್ಯ ಅವರು ಮಾತನಾಡಿ, ಹಿಂದಿನ ವರ್ಷ ರಾಗಿ ಖರೀದಿಗೆ ಮಿತಿ ನಿಗದಿಪಡಿಸಿರಲಿಲ್ಲ. ಆಹಾರ ಭದ್ರತೆ ದೃಷ್ಟಿಯಿಂದ ರಾಗಿ, ಭತ್ತದಂತಹ ಆಹಾರ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಾಗ ನಿರ್ಬಂಧ ವಿಧಿಸುವುದು ಸರಿಯಲ್ಲ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸದಿದ್ದರೆ ರೈತರು ತಾವು ಬೆಳೆದ ಫಸಲನ್ನು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಗಿ ಖರೀದಿಗೆ ವಿಧಿಸಿರುವ ಮಿತಿಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ದಲ್ಲಾಳಿಗಳಿಗೆ ಅನುಕೂಲವಾಗುವ ರೀತಿ ಕಾನೂನು ಜಾರಿಗೊಳಿಸಿದೆ.

-ಹೊಸಹಳ್ಳಿ ಚಂದ್ರಣ್ಣ, ರೈತ ಸಂಘದ ರಾಜ್ಯಾಧ್ಯಕ್ಷ

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link