ನವದೆಹಲಿ:
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯಿಂದ ಕಂಗೆಟ್ಟಿರುವ ಕುತಂತ್ರಿ ಪಾಕಿಸ್ತಾನ ಭಾರತದ ಮೇಲೆ ನಿನ್ನೆ ತಡರಾತ್ರಿ ಕ್ಷಿಪಣಿ ದಾಳಿ ನಡೆಸುವ ಪ್ರಯತ್ನ ನಡೆಸಿದೆ. ಪಂಜಾಬ್ನ ಅಮೃತಸರದಲ್ಲಿ ನಡೆದ ಇಂದು ಬೆಳಗ್ಗಿನ ಜಾವ 1:10 ರಿಂದ 1:20ರ ನಡುವೆ ಎರಡು ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಆದರೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಪಾಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿದು ಆಕಾಶದಲ್ಲೇ ಹೊಡೆದುರುಳಿಸಿದೆ. ಇದೀಗ ಘಟನಾ ಸ್ಥಳದಲ್ಲಿ ಪಾಕ್ ಕ್ಷಿಪಣಿಗಳ ಅವಶೇಷಗಳು ಪತ್ತೆಯಾಗಿವೆ. ಸೇನೆಯ ಸಮಯಪ್ರಜ್ಞೆಯಿಂದಾಗಿ ನಾಗರಿಕರಿಗೆ ಯಾವುದೇ ಅಪಾಯಗಳಾಗಿಲ್ಲ.
ಗುರುವಾರ ಬೆಳಗಿನ ಜಾವ 1:10 ರಿಂದ 1:20 ರ ನಡುವೆ ಈ ಕ್ಷಿಪಣಿ ದಾಳಿ ನಡೆದಿದ್ದು, ನಂತರ ಹಲವಾರು ಜಿಲ್ಲೆಗಳಲ್ಲಿ ಜೋರಾಗಿ ಸ್ಫೋಟದ ಶಬ್ದ ಕೇಳಿಸಿತು. ಆದರೆ ಆ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆದು ಹೊಡೆದುರುಳಿಸಲಾಯಿತು ಮತ್ತು ಅವು ಉದ್ದೇಶಿತ ಗುರಿಗಳನ್ನು ತಲುಪುವ ಮೊದಲೇ ಸ್ಫೋಟಿಸಲಾಯಿತು ಎಂದು ಮೂಲಗಳು ದೃಢಪಡಿಸಿವೆ. ಘಟನೆಯ ನಂತರ ಪಂಜಾಬ್ನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಮೂಲಗಳ ಪ್ರಕಾರ ಬೆಳಗಿನ ಜಾವ 4:44 ಕ್ಕೆ ಮತ್ತೆ ಕರೆಂಟ್ ಬಂದಿತ್ತು.
ಪಾಕ್ ಕ್ಷಿಪಣಿ ದಾಳಿಗೆ ಭಾರತೀಯ ಸಶಸ್ತ್ರ ಪಡೆಗಳು ತಕ್ಷಣ ಪ್ರತಿಕ್ರಿಯೆ ನೀಡಿವೆ. ಇನ್ನು ಗಡಿಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪ್ರತಿ ಸಣ್ಣ-ಪುಟ್ಟ ಸಂಗತಿಯನ್ನೂ ಸೇನೆ ಬಹಳ ಸೂಕ್ಷ್ಮವಾಗಿ ಗಮನಿಸಿದೆ. ಘಟನೆಯಲ್ಲಿ ನಾಗರಿಕರ ಸಾವುನೋವುಗಳು ಅಥವಾ ಮೂಲಸೌಕರ್ಯ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ಸ್ಪೋಟಕಗಳ ಮೂಲ ಮತ್ತು ಸ್ವರೂಪದ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯ ಒಂದು ದಿನದ ನಂತರ ಇದು ಬಂದಿದೆ.








